ಅಭಿನಂದನ್ ಸ್ವಾಗತಕ್ಕೆ ಸೇನೆ ಸಿದ್ಧ, ಪ್ರತಿದಾಳಿಗೂ ಸನ್ನದ್ಧ
Recommended Video

ನವದೆಹಲಿ, ಫೆಬ್ರವರಿ 28: ಭೂ, ವಾಯು, ಜಲಸೇನೆಯ ಕಮಾಂಡರ್ಗಳು ಸಂಜೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ-ಭಾರತದ ನಡುವಿನ ಮಿಲಿಟರಿ ಮುಖಾ-ಮುಖಿಯ ಬಗ್ಗೆ ಇದ್ದ ಅನುಮಾನಗಳಿಗೆ ಸ್ಪಷ್ಟನೆ ನೀಡಿದರು.
ಪಾಕಿಸ್ತಾನವು ಫೆಬ್ರವರಿ 27ರಂದು ಬೆಳಿಗ್ಗೆ ಭಾರತದ ಗಡಿ ದಾಟಿ ಒಳನುಗ್ಗಿ ಬಾಂಬ್ ದಾಳಿ ನಡೆಸುವ ಯತ್ನ ಮಾಡಿದ್ದು ಸತ್ಯ ಎಂದ ವಾಯುಸೇನೆ ಕಮಾಂಡರ್, ಪಾಕ್ ಸೇನೆಯು ನಮ್ಮ ಮಿಲಿಟರಿ ಕ್ಯಾಂಪ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿತು ಎಂದು ವಾಯು ಸೇನೆಯ ವೈಸ್ ಮಾರ್ಷಲ್ ಆರ್ಜಿಕೆ ಕಪೂರ್ ಹೇಳಿದರು.
ಪಾಕಿಸ್ತಾನ ಸೈನ್ಯ ಹೇಳಿದಂತೆ ಅದು ಖಾಲಿ ಸ್ಥಳದಲ್ಲಿ ಬಾಂಬ್ ಹಾಕುವ ಯತ್ನ ಮಾಡಲಿಲ್ಲ, ನಮ್ಮ ಮಿಲಿಟರಿ ಬೇಸ್ ಅನ್ನು ಗುರಿ ಮಾಡಿಕೊಂಡಿತ್ತು. ಮಿಲಿಟರಿ ಕಾಂಪೌಂಡ್ ಒಳಗೆ ಕೆಲವು ಬಾಂಬ್ಗಳು ಬಿದ್ದಿವೆ, ವಾಯುಸೇನೆ ತ್ವರಿತವಾಗಿ ಪ್ರತ್ಯುತ್ತರ ನೀಡಲು ಮುಂದಾದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಮಾರ್ಷಲ್ ಹೇಳಿದರು.

ಪಾಕಿಸ್ತಾನ ಎಫ್-16 ಬಳಸಿದೆ
ಪಾಕಿಸ್ತಾನವು ಎಫ್ 16 ಅನ್ನು ಇದಕ್ಕಾಗಿ ಬಳಸಿದೆ, ನಾವು ಒಂದು ಎಫ್ 16 ಅನ್ನು ಹೊಡೆದುರುಳಿಸಿದ್ದೇವೆ, ಅದರ ತುಣುಕುಗಳು ನಮ್ಮ ಬಳಿ ಇದೆ ಅಲ್ಲದೆ ಎಫ್ 16 ಹೊತ್ತು ತಂದಿದ್ದ ಆರ್ಮರಾಮ್ ಮಿಸೆಲ್ ನ ತುಣುಕು ಸಹ ರಜೌರಿ ಬಳಿ ದೊರೆತಿದೆ ಅಷ್ಟೆ ಅಲ್ಲದೆ ನಮ್ಮ ಕಡೆ ಬರುತ್ತಿರುವ ವಿಮಾನಗಳ ಮ್ಯಾಪಿಂಗ್ ನಾವು ಮಾಡಿದ್ದೆವು ಅದರಲ್ಲಿಯೂ ಎಫ್-16 ಗಡಿಯೊಳಕ್ಕೆ ಬಂದಿದ್ದು ದಾಖಲಾಗಿದೆ ಎಂದು ಅವರು ಹೇಳಿದರು. ನಿನ್ನೆ ಪಾಕ್ ಸೈನ್ಯಾಧಿಕಾರಿಯು 'ನಾವು ಎಫ್ 16 ಬಳಸಿಲ್ಲ' ಎಂದಿದ್ದರು.

ಭಾರತ ಒಂದು ಮಿಗ್-21 ಅನ್ನು ಕಳೆದುಕೊಂಡಿದೆ
ಪಾಕ್ನ ವಿಮಾನಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ನಮ್ಮ ಮಿಗ್-21 ಯತ್ನಿಸಿತು ಆಗ ನಡೆದ ದಾಳಿಯಲ್ಲಿ ಒಂದು ಮಿಗ್ 21 ಅನ್ನು ನಾವು ಕಳೆದುಕೊಂಡೆವು, ಅದರಲ್ಲಿದ್ದ ಪೈಲೆಟ್ ಅಭಿನಂದನ್ ಅವರು ಪ್ಯಾರೆಚೂಟ್ ಮುಖಾಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲ್ಯಾಂಡ್ ಆದರು ಅವರನ್ನು ಪಾಕ್ ಸೈನ್ಯ ಬಂಧಿಸಿತು ಎಂದು ಅವರು ಘಟನೆಯ ಮಾಹಿತಿ ಬಿಚ್ಚಿಟ್ಟರು.

'ಜಿನಿವಾ ಒಪ್ಪಂದದ ಪಾಲನೆಯಾಗಿ ನೋಡುತ್ತೇವೆ'
ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುತ್ತಿರುವುದು ಸಂತಸ ತಂದಿದೆ ಎಂದ ಅವರು, ಇದನ್ನು ಶಾಂತಿಯ ಸೂಚಕ ಎಂದು ಪರಿಗಣಿಸುವ ಬದಲಾಗಿ ಜಿನೆವಾ ಒಪ್ಪಂದದ ಪಾಲನೆ ಎಂದು ಸೇನೆಯು ಭಾವಿಸುತ್ತದೆ ಎಂದು ಹೇಳಿದರು.

ಬಾಲಾಕೋಟ್ ದಾಳಿಗೆ ಸಾಕ್ಷಿ ಇದೆ
ಪುಲ್ವಾಮಾದಲ್ಲಿನ ಸಿಆರ್ಪಿಎಫ್ ಯೋಧರ ಮೇಲಿನ ದಾಳಿಗೆ ಪ್ರತಿಕಾರವಾಗಿ ಭಾರತವು ಮಾಡಿದ ಬಾಲಾಕೋಟ್ನ ದಾಳಿಯ ಬಗ್ಗೆ ಉತ್ತರಿಸಿದ ವಾಯುಸೇನೆ ಮಾರ್ಷಲ್, 'ನಾವು ಏನು ಗುರಿ ಸಾಧಿಸಬೇಕು ಎಂದುಕೊಂಡು ದಾಳಿ ಮಾಡಿದ್ದೆವೋ ಅದನ್ನು ಸಾಧಿಸಿದ್ದೇವೆ' ಎಂದರು. ಬಲಾಕೋಟ್ನಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಎಸೆಯಲಾಗಿದೆ ಎಂದು ಪಾಕ್ ವಾದಿಸುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಬಲಾಕೋಟ್ ದಾಳಿಗೆ ಸಂಬಂಧಿಸಿದ ಸಾಕ್ಷ್ಯಗಳು ನಮ್ಮ ಬಳಿ ಇವೆ ಅದನ್ನು ಅವಶ್ಯಕತೆ ಬಂದಾಗ ಬಹಿರಂಗಗೊಳಿಸುತ್ತೇವೆ' ಎಂದರು. ಸತ್ತವರ ಸಂಖ್ಯೆಯನ್ನು ನೀಡಲು ಅವರು ನಿರಾಕರಿಸಿದರು.

ಮಿಲಿಟರಿ ಗುರಿಯಾಗಿಸಿ ಪಾಕ್ ದಾಳಿ
ಭೂಸೇನೆಯ ಮೇಜರ್ ಜನರಲ್ ಸುರೇಂದ್ರ ಸಿಂಗ್ ಮಹಾಲ್ ಮಾತನಾಡಿ, ಫೆಬ್ರವರಿ 27ರಂದು ನಮ್ಮ ಬ್ರಿಗೆಡಿಯರ್ ಹೆಡ್ ಕ್ವಾಟರ್, ಬೆಟಾಲಿಯನ್ ಹೆಡ್ಕ್ವಾಟರ್ ಮೇಲೆ ಪಾಕ್ ವಾಯುಸೇನೆ ದಾಳಿ ನಡೆಸಿದೆ. ಫೆಬ್ರವರಿ 26ರ ನಂತರ ಪಾಕಿಸ್ತಾನವು ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ನಮ್ಮ ಸೈನಿಕರು ಸಹ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದರು.

'ಭಯೋತ್ಪಾದನೆಯ ವಿರುದ್ಧ ನಿಲ್ಲದು'
ಭಯೋತ್ಪಾದನೆಯ ವಿರುದ್ಧ ಸೇನೆಯು ಯುದ್ಧ ಪ್ರಾರಂಭಿಸಿದ್ದು, ಇದು ಮುಂದುವರೆಯಲಿದೆ, ನಮ್ಮ ಸೈನ್ಯವು ಸರ್ವ ರೀತಿಯಲ್ಲಿ ಸನ್ನಧವಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿಯನ್ನು ನಾವು ಎದುರಿಸಬಲ್ಲವರಾಗಿದ್ದೇವೆ ಎಂದರು. ಉದ್ವಿಗ್ನ ಪರಿಸ್ಥಿತಿ ಮುಂದುವರೆಯುತ್ತದೆಯಾ ಎಂಬ ಪ್ರಶ್ನೆಗೆ 'ನೀವು ಈ ಪ್ರಶ್ನೆಯನ್ನು ಪಾಕ್ಗೆ ಕೇಳಬೇಕು, ಮಿಲಿಟರಿ ಮೇಲೆ ದಾಳಿ ಮಾಡುವ ಯತ್ನ ಮಾಡಿರುವವರು ಅವರು' ಎಂದರು.

'ಯಾವುದೇ ಸನ್ನಿವೇಶ ಎದುರಿಸಲು ತಯಾರು'
ಜಲಸೇನೆಯ ಅಡ್ಮಿರಲ್ ಡಿ.ಎಸ್.ಗುಜರಾಲ್ ಮಾತನಾಡಿ ನಾವೂ ಸಹ ಯಾವುದೇ ಸನ್ನಿವೇಶವನ್ನು ಒಟ್ಟಾಗಿ ಎದುರಿಸಲು ಸರ್ವಸನ್ನಧವಾಗಿದ್ದೇವೆ, ನಮ್ಮ ನಾಗರೀಕರಿಗೆ ಭದ್ರತೆಯ ಭರವಸೆಯನ್ನು ನಾವು ನೀಡುತ್ತೇವೆ ಎಂದು ಹೇಳಿದರು.

ಎಫ್-16 ಅವಶೇಷದ ಸಾಕ್ಷ್ಯ ಪ್ರದರ್ಶನ
ಪತ್ರಿಕಾಗೋಷ್ಠಿಯ ಅಂತ್ಯದಲ್ಲಿ ವಾಯುಸೇನೆಯು ಹೊಡೆದುರುಳಿಸಿದ ಪಾಕಿಸ್ತಾನದ ಎಫ್-16 ವಿಮಾನದ ಭಾಗಗಳನ್ನು ಪ್ರದರ್ಶಿಸಲಾಯಿತು. ಎಫ್-16 ಅಮೆರಿಕದ ತಂತ್ರಜ್ಞಾನವಾಗಿದ್ದು ಅದರ ಒಪ್ಪಿಗೆ ಇಲ್ಲದೆ ಪಾಕಿಸ್ತಾನವು ಆ ವಿಮಾನವನ್ನು ಬಳಸುವಂತಿಲ್ಲ. ಇದು ಒಪ್ಪಂದದ ಉಲ್ಲಂಘನೆ ಆಗುತ್ತದೆ. ಇದು ಪಾಕಿಸ್ತಾನಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.












Click it and Unblock the Notifications