ಇಫ್ತಾರ್ ಕೂಟ ಆಯೋಜನೆಯಿಂದ ಹಿಂದೆ ಸರಿದ ರಾಷ್ಟ್ರಪತಿ ಕೋವಿಂದ್
ನವದೆಹಲಿ, ಜೂನ್ 7: ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಿಂದೇಟು ಹಾಕಿದ್ದಾರೆ.
"ರಾಷ್ಟ್ರಪತಿಗಳು ಅಧಿಕಾರ ಸ್ವೀಕರಿಸಿದ ನಂತರ ರಾಷ್ಟ್ರಪತಿ ಭವನದಂಥ ಸಾರ್ವಜನಿಕ ಕಟ್ಟಡಗಳಲ್ಲಿ ತೆರಿಗೆ ಹಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಾರದು ಎಂಬ ನಿರ್ಧಾರ ಕೈಗೊಂಡಿದ್ದರು. ಜಾತ್ಯಾತೀತ ದೇಶ ಎಂಬ ಹಿನ್ನೆಲೆಯಲ್ಲಿ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮಗಳ ಧಾರ್ಮಿಕ ಸಂದರ್ಭಗಳಿಗೂ ಇದು ಅನ್ವಯವಾಗಲಿದೆ," ಎಂದು ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿಗಳಾದ ಅಶೋಕ್ ಮಲಿಕ್ ಹೇಳಿದ್ದಾರೆ.
ಉಡುಪಿ ಮಠದಲ್ಲಿ ಈ ಬಾರಿಯೂ ಇಫ್ತಾರ್ ಕೂಟ: ಪೇಜಾವರ ಶ್ರೀ
ರಾಷ್ಟ್ರಪತಿಗಳು ಎಲ್ಲಾ ಪ್ರಮುಖ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಜನರಿಗೆ ಶುಭಾಶಯಗಳನ್ನು ಹೇಳುತ್ತಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
10 ವರ್ಷದ ನಂತರ ರಾಷ್ಟ್ರಪತಿ ಭವನದಲ್ಲಿ ಇದೇ ಮೊದಲ ಬಾರಿಗೆ ಇಫ್ತಾರ್ ಕೂಟ ಆಯೋಜನೆಯಾಗುತ್ತಿಲ್ಲ. ಪರಂಪರಾಗತವಾಗಿ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡುತ್ತಾ ಬರಲಾಗಿದೆ. 2002ರಿಂದ 2007 ರ ನಡುವೆ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾಗ ಮಾತ್ರ ಇಫ್ತಾರ್ ಕೂಟಗಳನ್ನು ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಮಾಡುತ್ತಿರಲಿಲ್ಲ.