3,500 ಕಿ. ಮೀ. ಪಾದಯಾತ್ರೆ ಆರಂಭಿಸಿದ ಪ್ರಶಾಂತ್ ಕಿಶೋರ್
ಪಾಟ್ನಾ, ಅ.03: ಮಹಾತ್ಮಾ ಗಾಂಧಿಯವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಿಂದ 'ಜನ್ ಸೂರಜ್' ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
'ಜನ್ ಸೂರಜ್' ಅಭಿಯಾನದ ಭಾಗವಾಗಿ ಬಿಹಾರದಲ್ಲಿ 3,500 ಕಿಮೀ ಉದ್ದದ 'ಪಾದಯಾತ್ರೆ' ನಡೆಸಲಿದ್ದಾರೆ.
9 ವರ್ಷಗಳಲ್ಲಿ 6 ಸರ್ಕಾರ, ಇದು ನಮ್ಮ ಬಿಹಾರ: ಪ್ರಶಾಂತ್ ಕಿಶೋರ
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಘೋಷಣೆಗಳೊಂದಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಈ ಅಭಿಯಾನದ ಅಡಿಯಲ್ಲಿ ಪ್ರಶಾಂತ್ ಕಿಶೋರ್ ಅವರು 3,500 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ. ಪಾದಯಾತ್ರೆಯ ಸಮಯದಲ್ಲಿ, ಬಿಹಾರದ ಪ್ರತಿ ಪಂಚಾಯತ್ ಮತ್ತು ಬ್ಲಾಕ್ ಅನ್ನು ತಲುಪಲು ಪ್ರಶಾಂತ್ ಕಿಶೋರ್ ಪ್ರಯತ್ನಿಸುತ್ತಾರೆ ಎಂದು ತಿಳಿಸಲಾಗಿದೆ.
1917ರಲ್ಲಿ ರಾಷ್ಟ್ರಪಿತ ತನ್ನ ಮೊದಲ ಸತ್ಯಾಗ್ರಹ ಚಳವಳಿಯನ್ನು ಪ್ರಾರಂಭಿಸಿದ ಪಶ್ಚಿಮ ಚಂಪಾರಣ್ನ ಭಿತಿಹರ್ವಾದಲ್ಲಿರುವ ಗಾಂಧಿ ಆಶ್ರಮದಿಂದ ಪ್ರಯಾಣವು ಪ್ರಾರಂಭವಾಗಿದೆ.
ಈ ಪಾದಯಾತ್ರೆ ಪೂರ್ಣಗೊಳ್ಳಲು ಸುಮಾರು ಒಂದರಿಂದ ಒಂದೂವರೆ ವರ್ಷ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ನಡುವೆ ಪ್ರಶಾಂತ್ ಕಿಶೋರ್ ಪಾಟ್ನಾ ಅಥವಾ ದೆಹಲಿಗೆ ಹಿಂತಿರುಗುವುದಿಲ್ಲ ಎಂದು ತಿಳಿಸಿದ್ದು, ಈ ಕುರಿತು ಅವರು ಟ್ವೀಟ್ ಕೂಡ ಮಾಡಿದ್ದಾರೆ.
ಈ ಯಾತ್ರೆಯು ಅವರ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ನೋಡಲಾಗುತ್ತಿದೆ. ಆದರೂ, ಅಂತಹ ಯಾವುದೇ ನಿರ್ಧಾರವನ್ನು ತಮ್ಮ ಅಭಿಯಾನದೊಂದಿಗೆ ತೊಡಗಿಕೊಳ್ಳುವ ಜನರು ಮಾತ್ರ ತೆಗೆದುಕೊಳ್ಳಬಹುದು ಎಂದು ಅವರು ಆಗಾಗ್ಗೆ ಒತ್ತಿಹೇಳಿದ್ದಾರೆ.
ದೇಶದ ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾದ ಬಿಹಾರದಲ್ಲಿ ವ್ಯವಸ್ಥೆಯನ್ನು ಬದಲಾಯಿಸುವ ಸಂಕಲ್ಪ ಇದು ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ. ಸಮಾಜದ ಸಹಾಯದಿಂದ ಹೊಸ ಮತ್ತು ಉತ್ತಮ ರಾಜಕೀಯ ವ್ಯವಸ್ಥೆಯನ್ನು ರಚಿಸಲು ಮುಂದಿನ 12-15 ತಿಂಗಳುಗಳಲ್ಲಿ ಬಿಹಾರದ ನಗರಗಳು, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿರುವುದಾಗಿಯು ಹೇಳಿದ್ದಾರೆ.