ನಮ್ಮ ತಾಯಂದಿರು, ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ: ಸಿದ್ದರಾಮಯ್ಯಗೆ ಪತ್ರ ಬರೆದ ರಾಹುಲ್
ಪ್ರಜ್ವಲ್ ರೇವಣ್ಣ ಹಗರಣದ ಕುರಿತು ಕರ್ನಾಟಕ ಸಿಎಂಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದಾರೆ. ಕ್ರೂರಿಗಳ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಭಾರವನ್ನು ಮಹಿಳೆಯರು ಹೋರುತ್ತಿದ್ದಾರೆಂದು ರಾಹುಲ್ ಗಾಂಧಿ ಪತ್ರದಲ್ಲಿ ಆಕ್ರೋಶಗೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ವಿವಾದ ದೇಶದಲ್ಲಿ ಭುಗಿಲೆದ್ದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ಕೋರಿದ್ದಾರೆ.

'ಪ್ರಧಾನಿ ಮೌನವೇ ಅತ್ಯಾಚಾರಿಗಳಿಗೆ ಬೆಂಬಲ''
ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ, "ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ನಾನು ವಿನಂತಿಸುತ್ತೇನೆ. ಈ ಘೋರ ಅಪರಾಧಗಳಿಗೆ ಕಾರಣವಾದ ಎಲ್ಲಾ ಪಕ್ಷಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಾವು ಸಾಮೂಹಿಕ ಕರ್ತವ್ಯವನ್ನು ಹೊಂದಿದ್ದೇವೆ" ಎಂದು ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯಗೆ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ತಾಳಿದ್ದಾರೆ. ಇದು ಭಾರತೀಯ ಮಹಿಳೆಯರನ್ನು ಕೆರಳಿಸಿದೆ ಎಂದು ಅವರು ಪತ್ರದಲ್ಲಿ ಕಿಡಿ ಕಾರಿದ್ದಾರೆ.
"ಮಹಿಳೆಯರ ಮೇಲಿನ ಅಸಂಖ್ಯಾತ ದೌರ್ಜನ್ಯದ ಸಂದರ್ಭದಲ್ಲಿ ನಿರಂತರವಾಗಿ ಮೌನವನ್ನು ಆಯ್ಕೆ ಮಾಡುವ ಇಂಥಹ ಹಿರಿಯ ಸಾರ್ವಜನಿಕ ಪ್ರತಿನಿಧಿಯನ್ನು ನಾನು ಎಂದಿಗೂ ಕಂಡಿಲ್ಲ. ಹರಿಯಾಣದ ನಮ್ಮ ಕುಸ್ತಿಪಟುಗಳಿಂದ ಹಿಡಿದು ಮಣಿಪುರದ ನಮ್ಮ ಸಹೋದರಿಯರವರೆಗೂ ಘೋರ ಅಪರಾಧಿಗಳ ಬಗ್ಗೆ ಪ್ರಧಾನಿಯವರು ಮೌನ ತಾಳಿದ್ದಾರೆ. ಇಂತಹ ಕ್ರಿಮಿನಲ್ಗಳಿಗೆ ಪ್ರಧಾನಿಯವರ ಮೌನದ ಬೆಂಬಲವಿದೆ. ಇದರ ಭಾರವನ್ನು ಭಾರತೀಯ ಮಹಿಳೆಯರು ಹೊತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದರು.

ಭಯಾನಕ ಲೈಂಗಿಕ ಹಿಂಸಾಚಾರ
ಹಾಲಿ ಸದಸ್ಯರಿಂದ ಭಯಾನಕ ಲೈಂಗಿಕ ಹಿಂಸಾಚಾರ ನಡೆದಿದೆ ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ. ತಮ್ಮನ್ನು ಸಹೋದರ ಮತ್ತು ಮಗನಂತೆ ಕಾಣುವ ಅನೇಕ ಮಹಿಳೆಯರನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಅವರ ಘನತೆಯನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರಜ್ವಲ್ ವಿರುದ್ಧ ರಾಹುಲ್ ಕಿಡಿ ಕಾರಿದ್ದಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲಿನ ಅತ್ಯಾಚಾರಕ್ಕೆ ಕಠಿಣವಾದ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಡಿಸೆಂಬರ್ 2023 ರ ಹಿಂದೆಯೇ, ನಮ್ಮ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಇತಿಹಾಸ ಮತ್ತು ದುಷ್ಕೃತ್ಯದ ಚಿತ್ರೀಕರಿಸಿದ ವೀಡಿಯೊಗಳ ಬಗ್ಗೆ ತಿಳಿದಿತ್ತು ಎಂದು ತಿಳಿದು ನನಗೆ ತುಂಬಾ ಆಘಾತವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ತನಿಖೆ ಹಳಿ ತಪ್ಪಿಸಲು ಪ್ರಜ್ವಲ್ ಪರಾರಿ
ಇನ್ನೊಂದು ಆಘಾತಕಾರಿ ಸಂಗತಿಯೆಂದರೆ ಈ ಭೀಕರ ಆರೋಪಗಳನ್ನು ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅತ್ಯಂತ ಹಿರಿಯ ನಾಯಕತ್ವದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದಲ್ಲದೆ ತನಿಖೆಯನ್ನು ಹಳಿತಪ್ಪಿಸಲು ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಪ್ರಜ್ವಲ್ ರೇವಣ್ಣ ಅವರನ್ನು ಭಾರತದಿಂದ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟಿತು. ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ಆಶೀರ್ವಾದದೊಂದಿಗೆ ಪ್ರಜ್ವಲ್ ರೇವಣ್ಣ ಅವರು ಪಲಾಯನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಗಂಭೀರ ಆರೋಪಗಳ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ. ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದುಪಡಿಸಲು ಮತ್ತು ಅವರನ್ನು ಶೀಘ್ರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ.
ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರದ ಜನತಾ ದಳ (ಜಾತ್ಯತೀತ) ಶಾಸಕ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪುತ್ರ ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.












Click it and Unblock the Notifications