ಭವಿಷ್ಯ ಅರಸುತ್ತ ಜ್ಯೋತಿಷಿ ಮೊರೆಹೋಗುವ ರಾಜಕಾರಣಿಗಳು
ಮಾನವನ ಭವಿಷ್ಯವಲ್ಲದೇ ದೇಶದ ಆರ್ಥಿಕ, ರಾಜಕೀಯ, ನೈಸರ್ಗಿಕ ವಿಕೋಪದ ಬಗ್ಗೆ ಭವಿಷ್ಯ ತಿಳಿಯಬಹುದಾದ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಲ್ಲಿ ಮಾತ್ರ ಯಾವ ಪಾರ್ಟಿಗಳ ನಡುವೆಯೂ ಪಕ್ಷಬೇಧವಿಲ್ಲ.
ಜಾತ್ಯಾತೀತ ಮುಖವಾಡ ಹೊತ್ತಿರುವ ಕೆಲವು ನಾಯಕರುಗಳೂ ಜ್ಯೋತಿಷಿಗಳ ಮೊರೆ ಹೋಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವ್ಯತ್ಯಾಸವೇನಂದರೆ, ಕೆಲವರು ಮುಂಬಾಗಿಲಿನಿಂದ ಹೋದರೆ ಮತ್ತಷ್ಟು ನಾಯಕರು ಹಿಂಬಾಗಿಲಿನಿಂದ ಹೋಗುತ್ತಾರೆ. (ಗೌಡರಿಗೆ ಕೇರಳದ ಜ್ಯೋತಿಷಿ ನುಡಿದ ಭವಿಷ್ಯ)
ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮ್ರುತಿ ಇರಾನಿ ರಾಜಸ್ಥಾನದ ಜ್ಯೋತಿಷಿಯೊಬ್ಬರ ಬಳಿ ಹೋಗಿರುವ ಚಿತ್ರ ಅಂತರ್ಜಾಲದಲ್ಲಿ ಹರಡುತ್ತಿದ್ದಂತೆಯೇ ಜ್ಯೋತಿಷ್ಯ, ಭವಿಷ್ಯದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.
ಈ ಚಿತ್ರ ಸಾವಿರ ಮಾತನ್ನು ಹೇಳುತ್ತದೆ. ಬಿಜೆಪಿಯ ನಿಜವಾದ ಬಣ್ಣ ಈಗ ಬಯಲಾಗಿದೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯಲು ತಡಕಾಡುತ್ತಿರುವ ಕಾಂಗ್ರೆಸ್ ಲೇವಡಿ ಮಾಡಿದೆ. (ಯಡಿಯೂರಪ್ಪ ಮತ್ತೆ ಶಾಂತಿ ಮಾಡಿಸಿದ್ರು)
ಹಾಗಂತ ಕಾಂಗ್ರೆಸ್ ಮುಖಂಡರು ಜ್ಯೋತಿಷ್ಯ ನಂಬುವುದೇ ಇಲ್ಲ ಎಂದರೆ ಅದು ತಪ್ಪಾಗುತ್ತದೆ. ಕಾಂಗ್ರೆಸ್ ನಲ್ಲಾಗಲಿ, ಜೆಡಿಎಸ್ ನಲ್ಲಾಗಲಿ ಭವಿಷ್ಯ, ರಾಹುಕಾಲ, ಗುಳಿಗಕಾಲ ನಂಬುವವರ ಸಂಖ್ಯೆ ಕಮ್ಮಿ ಏನೂ ಇಲ್ಲ.
ಜ್ಯೋತಿಷ್ಯ ಬೊಗಳೆ ಎನ್ನುವ ಕೆಲವು ರಾಜಕಾರಣಿಗಳು ಜ್ಯೋತಿಷ್ಯ ಶಾಸ್ತ್ರದ ಮೊರೆಹೋಗಿದ್ದ (ಪಕ್ಷಾತೀತವಾಗಿ) ಕೆಲವೊಂದು ಘಟನೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ದಿವಂಗತ ಪ್ರಧಾನಿ ಇಂದಿರಾ ಗಾಂಧಿ
ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಯೋಗಗುರು ಮತ್ತು ಜ್ಯೋತಿಷಿ ಧೀರೇಂದ್ರ ಬ್ರಹ್ಮಚಾರಿ ಸಲಹಗಾರರಾಗಿದ್ದರು. ತುರ್ತು ಪರಿಸ್ಥಿತಿ ಘೋಷಿಸುವ ಸಮಯದಲ್ಲಿ ಪ್ರತೀ ಹೆಜ್ಜೆಗೂ ಇಂದಿರಾ ಗಾಂಧಿ ಇವರ ಸಲಹೆ ಪಡೆಯುತ್ತಿದ್ದರು. ಇವರು ನೀಡುತ್ತಿದ್ದ ಸಲಹೆಗೆ ಇವರಿಗೆ ಕೇಂದ್ರದ ಮಂಡಳಿಯೊಂದರ ಕೌನ್ಸಿಲರ್ ಆಗಿ ಆಯ್ಕೆ ಮಾಡಿ ಇಂದಿರಾ ಖುಣ ತೀರಿಸಿದ್ದರು.
ದಿಗ್ವಿಜಯ್ ಸಿಂಗ್
ಬಿಜೆಪಿಯನ್ನು ಲೇವಡಿ, ತರಾಟೆಗೆ ತೆಗೆದುಕೊಳ್ಳುವುದರಲ್ಲಿ ಮಂಚೂಣಿಯಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ದ್ವಾರಕಾ ಪೀಠದ ಶಂಕರಾಚಾರ್ಯರ ಅವರ ಅನುಯಾಯಿ. ಟಿವಿ ನಿರೂಪಕಿಯೊಬ್ಬರ ಪ್ರೇಮ ಪ್ರಕರಣ ದೇಶವ್ಯಾಪಿ ಸುದ್ದಿಯಾದಾಗ ಸ್ವಾಮೀಜಿಗಳ ಮುಂದೆ ಮಂಡಿಯೂರಿ ಭವಿಷ್ಯ ಕೇಳಿದ್ದರು.
ಎಚ್ ಡಿ ದೇವೇಗೌಡ
ಮಾಜಿ ಪ್ರಧಾನಿ, ಮಣ್ಣಿನಮಗ ದೇವೇಗೌಡರ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ. ಕೇರಳದಲ್ಲೂ ಹೋಮ ಮಾಡಿಸುತ್ತಾರೆ, ಕೊಲ್ಲೂರಿನಲ್ಲೂ ಹವನ ಮಾಡಿಸುತ್ತಾರೆ. ಪ್ರತೀ ಹೆಜ್ಜೆಯನ್ನು ಶಾಸ್ತ್ರದ ಪ್ರಕಾರವೇ ಇಡುವ ಜಾತ್ಯಾತೀತ ಜನತಾದಳದ ರಾಷ್ಟೀಯ ಅಧ್ಯಕ್ಷರಿವರು.
ಬಿ ಎಸ್ ಯಡಿಯೂರಪ್ಪ
ಜ್ಯೋತಿಷ್ಯ ಶಾಸ್ತ್ರದ ಮೇಲೆ ಅತೀವ ನಂಬಿಕೆಯಿರುವ ಮತ್ತೊಬ್ಬ ರಾಜಕಾರಣಿ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿ ಎಸ್ ಯಡಿಯೂರಪ್ಪ. ವಾಸ್ತು ಹೋಮ, ಶಾಂತಿ ಹೋಮಗಳನ್ನು ಮನೆ, ಕಚೇರಿಯಲ್ಲಿ ನಡೆಸುತ್ತಲೇ ಇರುವ ಬಿಎಸ್ವೈಗೆ ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ.
ವಸುಂಧರಾ ರಾಜೇ
ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಕೂಡ ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆಯುಳ್ಳವರು. ರಾಜಸ್ಥಾನ ಮೂಲದ ಕೇದಾರ್ ಶರ್ಮಾ ಎನ್ನುವ ಜ್ಯೋತಿಷಿಯ ಬಳಿ ವಸುಂಧರಾ ಅವಾಗಾವಾಗ ಭವಿಷ್ಯ ಕೇಳಲು ಬರುತ್ತಾರೆ. ಕೇದಾರ್ ಶರ್ಮಾ ಅವರು ವಸುಂಧರಾ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದಾರಂತೆ.
ಪಿ ವಿ ನರಸಿಂಹ ರಾವ್
ಚಂದ್ರಸ್ವಾಮಿ ಎನ್ನುವ ದೇವಮಾನವರ ಜೊತೆ ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಅತೀವ ನಂಟು ಹೊಂದಿದ್ದರು. ಪಿವಿಎನ್ ಅವರಿಗೆ ಆಧ್ಯಾತ್ಮಕ ಗುರುಗಳಾಗಿದ್ದ ಚಂದ್ರಹಾಸ್, ಪಿವಿಎನ್ ಅಧಿಕಾರದ ಅವಧಿಯಲ್ಲಿ ದೆಹಲಿಯಲ್ಲಿ ಆಶ್ರಮವನ್ನೂ ತೆರೆದರು.
ಜೆ ಜಯಲಲಿತಾ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ದೇವರು ಮತ್ತು ಭವಿಷ್ಯದ ಮೇಲೆ ಇನ್ನಿಲ್ಲದ ನಂಬಿಕೆ. ಕೇರಳ ಮೂಲದ ಉನ್ನಿಕೃಷ್ಣ ಪಾರಿಕ್ಕರ್ ಅವರ ಜ್ಯೋತಿಷ್ಯವನ್ನು ನಂಬುವ ಇವರು ಉನ್ನಿಕೃಷ್ಣ ಅವರಿಗೆ ಹತ್ತು ಲಕ್ಷ ರೂಪಾಯಿ ಕಾಣಿಕೆ ನೀಡಿದ್ದರು. ಇವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆಂದು ಉನ್ನಿಕೃಷ್ಣ ಭವಿಷ್ಯ ನುಡಿದಿದ್ದು ಸತ್ಯವಾಗಿತ್ತು.
ಲಾಲೂ ಪ್ರಸಾದ್ ಯಾದವ್
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ವಿಭೂತಿ ನಾರಾಯಣ್ ಆಲಿಯಾಸ್ ಪಗ್ಲಾ ಬಾಬಾ ಎಂದೇ ಹೆಸರಾಗಿರುವ ಜ್ಯೋತಿಷಿಯ ಮೊರೆ ಹೋಗುತ್ತಿರುತ್ತಾರೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿರುವ ಇವರ ಬಾಬಾ ಅವರ ಆಶ್ರಮಕ್ಕೆ ಎರಡು ತಿಂಗಳಿಗೊಮ್ಮೆ ಲಾಲೂ ಭೇಟಿ ನೀಡುವ ಪರಿಪಾಠ ಇಟ್ಟುಕೊಂಡಿದ್ದಾರೆ.