ಲಸಿಕೆ ತಲುಪಿಸುವ ವೇಗದಷ್ಟೇ ಸುರಕ್ಷತೆಯೂ ಮುಖ್ಯ: ನರೇಂದ್ರ ಮೋದಿ
ನವದೆಹಲಿ, ನವೆಂಬರ್ 24: ಸಮಯೋಚಿತ ಕೋವಿಡ್-19 ಲಸಿಕೆ ರವಾನೆಯ ಜತೆಗೆ ಜನರ ಸುರಕ್ಷತೆಯು ಮುಖ್ಯವಾಗಿದೆ ಎಂದು ಒತ್ತಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ನಾಗರಿಕರಿಗೆ ನೀಡುವ ಯಾವುದೇ ಲಸಿಕೆಯು ಎಲ್ಲ ವೈಜ್ಞಾನಿಕ ಗುಣಮಟ್ಟಗಳಲ್ಲಿ ಸುರಕ್ಷಿತವಾಗಿರಲಿದೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯಗಳೊಂದಿಗಿನ ಸಾಮೂಹಿಕ ಸಹಕಾರ ಹೊಂದಾಣಿಕೆಯೊಂದಿಗೆ ಲಸಿಕೆ ಹಂಚಿಕೆಯು ನಡೆಯಲಿದೆ ಎಂದಿರುವ ಅವರು, ರಾಜ್ಯಗಳು ಶೈತ್ಯ ಸಂಗ್ರಹಾಗಾರ ಸೌಲಭ್ಯಗಳನ್ನು ಆರಂಭಿಸಬೇಕು ಎಂದು ನಿರ್ದೇಶಿಸಿದ್ದಾರೆ.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಆನ್ಲೈನ್ ಸಭೆ ನಡೆಸಿದ ಪ್ರಧಾನಿ ಮೋದಿ, ಲಸಿಕೆ ಅಭಿವೃದ್ಧಿಯ ಪ್ರತಿ ಹೆಜ್ಜೆಯನ್ನೂ ಸರ್ಕಾರ ಸೂಕ್ಷ್ಮವಾಗಿ ಹಿಂಬಾಲಿಸುತ್ತಿದೆ. ನಾವು ಭಾರತೀಯ ಲಸಿಕೆ ಅಭಿವೃದ್ಧಿ ಸಂಸ್ಥೆಗಳು ಮತ್ತು ಉತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಜತೆಗೆ ಜಾಗತಿಕ ನಿಯಂತ್ರಕರು, ವಿವಿಧ ದೇಶಗಳ ಸರ್ಕಾರಗಳು, ಅಂತಾರಾಷ್ಟ್ರೀಯ ಕಂಪೆನಿಗಳು ಮತ್ತು ಬಹುರಾಷ್ಟ್ರೀಯ ಸಂಘಟನೆಗಳ ಜತೆಯೂ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

'ಒಂದು, ಎರಡು ಅಥವಾ ಮೂರು, ಎಷ್ಟು ಡೋಸ್ ಲಸಿಕೆಗಳು ಇರಲಿವೆ ಎನ್ನುವುದು ಖಾತರಿಯಿಲ್ಲ. ಕೋವಿಡ್ ಲಸಿಕೆಗಳ ಬೆಲೆಯನ್ನು ಸಹ ಇನ್ನೂ ನಿರ್ಧರಿಸಲಾಗಿಲ್ಲ. ಆದಷ್ಟು ಕಡಿಮೆ ಬೆಲೆಗೆ ಲಸಿಕೆಗಳನ್ನು ಪಡೆದುಕೊಳ್ಳುವ ಬಗ್ಗೆ ಹೇಗೆ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಆದಷ್ಟು ಶೀಘ್ರವೇ ವಿಸ್ತೃತ ಯೋಜನೆ ಕಳುಹಿಸಿಕೊಡಿ. ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ನಾನು ಆಶಿಸುತ್ತೇನೆ. ಲಸಿಕೆ ಕಾರ್ಯ ಇನ್ನೂ ಸಾಗುತ್ತಿದೆ. ಆದರೆ ನೀವು ನಿರ್ಲಕ್ಷ್ಯವಹಿಸಬಾರದು ಎಂದು ಮನವಿ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಲಸಿಕೆ ನೀಡುವಿಕೆಯ ಮಿಷನ್ ರಾಷ್ಟ್ರೀಯ ಬದ್ಧತೆಯಂತೆ ಇರಲಿದೆ. ಪ್ರತಿ ರಾಜ್ಯ ಮತ್ತು ಪಾಲುದಾರರು ಈ ಪ್ರಕ್ರಿಯೆಯು ವ್ಯವಸ್ಥಿತವಾಗಿ, ಸುಗಮವಾಗಿ ಮತ್ತು ಸುಸ್ಥಿರ ಪ್ರಯತ್ನವಾಗಿರುವಂತೆ ಖಾತರಿಪಡಿಸಿಕೊಳ್ಳಲು ತಂಡವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.












Click it and Unblock the Notifications