ಅಯೋಧ್ಯಾ ತೀರ್ಪು: ಭಾರತದಲ್ಲಿ ಭಯಕ್ಕೆ ಸ್ಥಾನವಿಲ್ಲ ಎಂದ ಮೋದಿ
ನವದೆಹಲಿ, ನವೆಂಬರ್ 9: ಅಯೋಧ್ಯಾ ವಿವಾದದ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಐತಿಹಾಸಿಕ ಪ್ರಕರಣದ ತೀರ್ಪು ನೀಡಿದೆ ಎಂದಿದ್ದಾರೆ.
ಪಂಜಾಬ್ನಲ್ಲಿ ಕರ್ತಾರ್ಪುರ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಶನಿವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಮ್ಮ ಪ್ರಜಾಪ್ರಭುತ್ವ ಎಷ್ಟು ಪ್ರಬಲವಾಗಿದೆ ಎಂಬುದನ್ನು ಈಗ ಜಗತ್ತು ನೋಡುತ್ತಿದೆ. ಇಂದಿನ ಘಟನಾವಳಿಗಳು ಇತಿಹಾಸದಲ್ಲಿ ದಾಖಲಾಗಲಿವೆ. ಅಯೋಧ್ಯಾ ತೀರ್ಪನ್ನು ಒಪ್ಪಿಕೊಳ್ಳುವಿಕೆ ನಮ್ಮಲ್ಲಿನ ಸಹನೀಯ ಗುಣವನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದರು.
ಇಡೀ ದೇಶವು ಅಯೋಧ್ಯಾ ಪ್ರಕರಣದ ವಿಚಾರಣೆಯನ್ನು ದಿನವೂ ಕೇಳಲು ಬಯಸುತ್ತಿತ್ತು. ಅದು ಹಾಗೆಯೇ ನಡೆದು ಇಂದು ತೀರ್ಪು ಪ್ರಕಟವಾಯಿತು. ದಶಕಗಳ ಕಾಲ ನಡೆದಿದ್ದ ಈ ಪ್ರಕರಣ ಕೊನೆಗೂ ಅಂತ್ಯಗೊಂಡಿದೆ ಎಂದು ಮೋದಿ ಹೇಳಿದರು.

ಇಡೀ ದೇಶಕ್ಕೆ ಸಂತಸದ ಸಂಗತಿ
ಸುಪ್ರೀಂಕೋರ್ಟ್ ಈ ಪ್ರಕರಣದ ಎಲ್ಲಾ ಬಗೆಯ ವಾದಗಳನ್ನು ವಿಚಾರಣೆಯುದ್ದಕ್ಕೂ ಅತ್ಯಂತ ತಾಳ್ಮೆಯಿಂದ ಆಲಿಸಿದೆ. ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ತೀರ್ಪು ಪ್ರಕಟವಾಗಿರುವುದು ಇಡೀ ದೇಶಕ್ಕೆ ಸಂತಸ ತಂದಿರುವ ಸಂಗತಿ ಎಂದರು.

ಪ್ರಾಚೀನ ಭಾರತದ ಸಂಸ್ಕೃತಿಗೆ ಸಾಕ್ಷಿ
ಭಾರತದ ವಿವಿಧತೆಯಲ್ಲಿನ ಏಕತೆಯ ಮಂತ್ರವು ಇಂದು ತನ್ನ ಪರಿಪೂರ್ಣತೆಯಲ್ಲಿ ಕಾಣಿಸಿತು. ತೀರ್ಪಿನ ಬಳಿಕ ಸಮಾಜದ ಪ್ರತಿಯೊಂದು ಧರ್ಮದ ಪ್ರತಿ ವರ್ಗವೂ ಅದನ್ನು ಸ್ವಾಗತಿಸಿದ್ದು, ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆಯ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಮುಂದಿನ ಪೀಳಿಗೆಯಿಂದ ನವಭಾರತ ನಿರ್ಮಾಣ
ಇಂದಿನ ಸಂದೇಶವು ಒಂದಾಗಿ ಸಾಗುವ ಮತ್ತು ಜತೆಯಾಗಿ ಬದುಕುತ್ತಾ ಸಾಗುವುದನ್ನು ತೋರಿಸಿದೆ. ನವ ಭಾರತದಲ್ಲಿ ಭಯಕ್ಕೆ, ಕಹಿ ಅನುಭವ ಮತ್ತು ನಕಾರಾತ್ಮಕತೆಗೆ ಸ್ಥಾನವಿಲ್ಲ. ಸುಪ್ರೀಂಕೋರ್ಟ್ ತೀರ್ಪು ಹೊಸ ಮುಂಜಾವನ್ನು ತಂದಿದೆ. ಇನ್ನು ಮುಂದಿನ ಪೀಳಿಗೆ ನವ ಭಾರತವನ್ನು ನಿರ್ಮಿಸುತ್ತದೆ ಎಂದರು.

ಇಂದು ಒಗ್ಗಟ್ಟಿನ ದಿನ
ನಮ್ಮ ಶಾಂತಿ, ಒಗ್ಗಟ್ಟು ಮತ್ತು ಸೌಹಾರ್ದವು ಭಾರತದ ಅಭಿವೃದ್ಧಿಗೆ ಅತ್ಯವಶ್ಯಕವಾಗಿವೆ. ಇಂದು ನ.9. ಬರ್ಲಿನ್ ಗೋಡೆಯನ್ನು ಕೆಡವಿದ ದಿನ. ಇಂದು ಕರ್ತಾರ್ಪುರ ಕಾರಿಡಾರ್ಅನ್ನು ಉದ್ಘಾಟಿಸಲಾಗಿದೆ. ಈಗ ಅಯೋಧ್ಯಾ ತೀರ್ಪು ಪ್ರಕಟವಾಗಿದೆ. ಹೀಗಾಗಿ ಈ ದಿನ ನಾವು ಒಗ್ಗಟ್ಟಿನಿಂದ ಇರುವುದಕ್ಕೆ ಮತ್ತು ಮುಂದೆ ಸಾಗುವುದಕ್ಕೆ ಸಂದೇಶ ನೀಡಿದೆ ಎಂದು ತಿಳಿಸಿದರು.












Click it and Unblock the Notifications