ಪಠಾಣ್ ವಿವಾದದಿಂದ ದೂರ ಉಳಿಯಲು ಬಿಜೆಪಿ ಮುಖಂಡರಿಗೆ ಮೋದಿ ಎಚ್ಚರಿಕೆ: ಏನಿದು ಬೆಳವಣಿಗೆ?
ಬೆಂಗಳೂರು, ಜನವರಿ 19: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಹಾಗೂ ಖ್ಯಾತ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಪಠಾಣ್ ಚಿತ್ರವು ಬಿಜೆಪಿ ಹಾಗೂ ಹಿಂದೂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಪಠಾಣ್ ಚಿತ್ರದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಟ್ಟೆ ಧರಿಸಿದ್ದಾರೆ ಎಂಬುದು ವಿವಾದವಾಗಿದೆ. ಈ ವಿಚಾರವಾಗಿ ಮಾತನಾಡಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪಠಾಣ್ ಚಿತ್ರವನ್ನು ನಿಷೇಧಿಸುವ ಕುರಿತು ಹೇಳಿಕೆ ನೀಡಿದ್ದರು. ಆ ನಂತರ ಹಿಂದೂ ಮುಖಂಡರು ಪಠಾಣ್ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳನ್ನೇ ಸುಟ್ಟು ಹಾಕುವುದಾಗಿ ತಿಳಿಸಿದ್ದರು. ಮಹಾರಾಷ್ಟ್ರದ ಬಿಜೆಪಿ ಮುಖಂಡ ರಾಮ್ ಕದಮ್ ಅವರು ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು. ಈ ವಿವಾದವೂ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಚರ್ಚೆಗಳನ್ನು ಹುಟ್ಟುಹಾಕಿತ್ತು. ಬ್ಯಾನ್ ಪಠಾಣ್ ಎಂಬ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿದ್ದವು.
ಸಿನಿಮಾ ವಿವಾದಗಳ ಕುರಿತು ಪ್ರಧಾನಿ ಹೇಳಿದ್ದೇನು?
ದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮೋದಿ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ, ಸಿನಿಮಾ ವಿವಾದಗಳಿಂದ ದೂರ ಉಳಿಯಲು ಬಿಜೆಪಿ ಮುಖಂಡರಿಗೆ ಮೋದಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನಾಯಕರಿಗೆ ಮಾಡಬೇಕಾದ ಮತ್ತು ಮಾಡಬಾರದಂತಹ ಅಂಶಗಳ ಪಟ್ಟಿಯನ್ನು ನೀಡಿದ್ದಾರೆ. 'ಸಿನಿಮಾಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಕಾಮೆಂಟ್ಗಳನ್ನು ಮಾಡದಂತೆ' ಅವರು ತಮ್ಮ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪಠಾಣ್ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ಮೋದಿ ಎಚ್ಚರಿಕೆ?
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರವು ಇತ್ತೀಚಿಗೆ ಪ್ರತಿಭಟನೆ ಮತ್ತು ಬಹಿಷ್ಕಾರದ ಕರೆಗಳ ಎದುರಿಸಿತ್ತು. ಈ ನಡುವೆ ಪ್ರಧಾನಿ ಮೋದಿಯವರ ಹೇಳಿಕೆ ಬಂದಿದೆ. ರಾಮ್ ಕದಮ್ ಮತ್ತು ನರೋತ್ತಮ್ ಮಿಶ್ರಾ ಅವರಂತಹ ಹಲವಾರು ಬಿಜೆಪಿ ನಾಯಕರು ಚಿತ್ರ ನಿರ್ಮಾಪಕರನ್ನು ವಿರುದ್ಧ ವಾಗ್ದಾಳಿ ನಡೆಸಿದ್ದರು. ದೀಪಿಕಾ ಪಡುಕೋಣೆ ಅವರ ಬೇಷರಾಮ್ ರಂಗ್ನ ಕೇಸರಿ ಈಜುಡುಗೆ ವಿವಾದಕ್ಕೆ ಕಾರಣವಾಗಿತ್ತು. ಇದು ಕಳೆದ ತಿಂಗಳು ಬಿಡುಗಡೆಯಾಗಿತ್ತು.
ಭಾರತೀಯ ಚಲನಚಿತ್ರ ನಿರ್ದೇಶಕರ ಸಂಘದ ಹರ್ಷ
'ಪ್ರಧಾನಿಯವರು ತಮ್ಮ ಮುಖಂಡರಿಗೆ ಬಾಯಿ ಮುಚ್ಚಿಕೊಳ್ಳುವಂತೆ ಹೇಳಿದ್ದಾರೆ. ಹಲವು ಮುಖಂಡರು ಚಿತ್ರರಂಗದ ವಿಚಾರದಲ್ಲಿ ಮೂಗು ತೂರಿಸುತ್ತಿದ್ದರು. ಇದು ಕೇವಲ ಪ್ರಚಾರಕ್ಕಾಗಿ ಅಸಂಬದ್ಧವಾಗಿ ಮಾತನಾಡಬೇಡುತ್ತಿದ್ದರು. ಪ್ರಧಾನಿ ಹೇಳಿಕೆ ಉದ್ಯಮದ ವಿಶ್ವಾಸವನ್ನು ಹೆಚ್ಚಿಸಿದೆ. ಇದು ರಾಜಕಾರಣಿಗಳಿಗೆ ಮಾತ್ರವಲ್ಲ. ಮಾಧ್ಯಮದವರಿಗೂ ಎಚ್ಚರಿಕೆಯಾಗಿದೆ' ಎಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದ (IFTDA) ಅಧ್ಯಕ್ಷ ಅಶೋಕ್ ಪಂಡಿತ್ 'ಇಂಡಿಯನ್ ಎಕ್ಸ್ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಹಿಷ್ಕಾರದ ಕರೆಗಳಿಗೆ ಬಳಲಿರುವ ಬಾಲಿವುಡ್
ಕಳೆದ ಕೆಲವು ತಿಂಗಳುಗಳಲ್ಲಿ, ಅನೇಕ ಬಾಲಿವುಡ್ ಚಲನಚಿತ್ರಗಳ ವಿರುದ್ಧ ಬಹಿಷ್ಕಾರದ ಕರೆಗಳು ಕೇಳಿಬಂದಿವೆ. ಇತ್ತೀಚೆಗಷ್ಟೇ, ಪಠಾಣ್ನಲ್ಲಿನ ಬೇಷರಂ ರಂಗ್ ಹಾಡಿಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ದೀಪಿಕಾ ಪಡುಕೋಣೆ ಧರಿಸಿರುವ ಉಡುಪು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ. ಶಾರುಖ್ ಖಾನ್ರನ್ನು ಸುಟ್ಟುಹಾಕುವುದಾಗಿಯೂ ಕೆಲವರು ಬೆದರಿಕೆ ಒಡ್ಡಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ ಹಾಗೂ ಫೇಸ್ಬುಕ್ಗಳಲ್ಲಿ ಪಠಾಣ್ ವಿರುದ್ಧ ದ್ವೇಷ ಪ್ರಚಾರದಲ್ಲಿ ತೊಡಗಿದ್ದಾರೆ. ಇದು ದೇಶದೆಲ್ಲಡೆ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಪಠಾಣ್ ಚಿತ್ರದಲ್ಲಿ ಶಾರುಖ್ ಅವರು ನಾಯಕರು. ದೀಪಿಕಾ ಪಡುಕೋಣೆ ನಾಯಕಿ. ಜಾನ್ ಅಬ್ರಾಹಿಂ ಕೂಡ ನಟಿಸಿದ್ದಾರೆ. ಇದಕ್ಕೂ ಮೊದಲ ಬಾಲಿವುಡ್ನ ಅನೇಕ ಚಿತ್ರಗಳು ನಿಷೇಧ ಬೆದರಿಕೆಗೆ ಒಳಗಾಗಿವೆ.