ಮತ್ತೆ ಅಧಿಕಾರಕ್ಕೆ ಬರಲು ಯಾತ್ರೆ ನಡೆಸುತ್ತಿದ್ದಾರೆ: ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
ಸುರೇಂದ್ರನಗರ, ನವೆಂಬರ್ 21: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಾಗ್ದಾಳಿ ನಡೆಸಿದರು.
ಗುಜರಾತ್ನ ಸುರೇಂದ್ರನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಅಧಿಕಾರದಿಂದ ಹೊರಹಾಕಲ್ಪಟ್ಟವರು ಮತ್ತೆ ಅಧಿಕಾರಕ್ಕೆ ಬರಲು ಯಾತ್ರೆ ನಡೆಸುತ್ತಿದ್ದಾರೆ' ಎಂದು ಟೀಕಿಸಿದರು. ಈ ಮೂಲಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ವಿರುದ್ಧ ಹರಿಹಾಯ್ದಿದರು.
'ಗುಜರಾತ್ನಲ್ಲಿ ಉತ್ಪಾದನೆಯಾಗುವ ಉಪ್ಪನ್ನು ತಿಂದ ನಂತರವೂ ಕೆಲವರು ರಾಜ್ಯವನ್ನು ನಿಂದಿಸುತ್ತಿದ್ದಾರೆ. ದೇಶದ ಶೇ. 80 ರಷ್ಟು ಉಪ್ಪನ್ನು ಗುಜರಾತ್ ಉತ್ಪಾದಿಸುತ್ತದೆ' ಎಂದು ಅವರು ಹೇಳಿದರು.
ಕೆಲ ವರ್ಷಗಳ ಹಿಂದೆ ಅಧಿಕಾರದಿಂದ ಕೆಳಗಿಳಿದ ಜನರು ಮತ್ತೆ ಅಧಿಕಾರ ಪಡೆಯಲು ಯಾತ್ರೆ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೇಧಾ ಪಾಟ್ಕರ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ನರ್ಮದಾ ಅಣೆಕಟ್ಟು ಯೋಜನೆಗೆ ಅಡ್ಡಗಾಲು ಹಾಕಿದವರು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು. ಕಳೆದ ವಾರ ಮಹಾರಾಷ್ಟ್ರದಲ್ಲಿ ಸಾಗಿದ ಭಾರತ್ ಜೋಡೊ ಯಾತ್ರೆಯಲ್ಲಿ ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ಪಾಲ್ಗೊಂಡ ವಿಚಾರವನ್ನು ಮೋದಿ ಪ್ರಸ್ತಾಪಿಸಿದರು.
'ನರ್ಮದಾ ಅಣೆಕಟ್ಟು ಯೋಜನೆಗೆ 40 ವರ್ಷಗಳ ಕಾಲ ಅಡ್ಡಗಾಲು ಹಾಕಿದವರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಅಂತಹವರಿಗೆ ಶಿಕ್ಷೆ ನೀಡಲು ಗುಜರಾತ್ ಜನರು ನಿರ್ಧರಿಸಿದ್ದಾರೆ' ಎಂದು ಮೋದಿ ಹೇಳಿದರು.

ಪ್ರತಿಷ್ಠೆ ತೋರಿಸಿಕೊಳ್ಳಲು ಕಾಂಗ್ರೆಸ್ ಯತ್ನ
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ, ತನ್ನ ಒಣ ಪ್ರತಿಷ್ಠೆಯನ್ನು ತೋರಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷವು ನನಗೆ ನೀಚ್ ಆದ್ಮಿ, ಮೌತ್ ಕಾ ಸೌದಾಗರ್, ನಾಲಿ ಕಾ ಕೀಡಾ ಎಂಬ ಪದಗಳನ್ನು ಬಳಸಿತ್ತು. ಮೋದಿಗೆ ಯಾವುದೇ ಪ್ರತಿಷ್ಠೆ ಇಲ್ಲ. ಸ್ಥಾನಮಾನವಿಲ್ಲ. ಅವರು ಕೇವಲ ಜನರ ಸೇವಕ ಎಂದು ಪ್ರಧಾನಿ ಹೇಳಿದರು.

ತೀವ್ರ ಕುತೂಹಲ ಕೆರಳಿಸಿದ ಗುಜರಾತ್ ಚುನಾವಣೆ
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 01 ಹಾಗೂ 05ರಂದು ಮತದಾನ ನಡೆಯಲಿದೆ. ಡಿಸೆಂಬರ್ 08ರಂದು ಮತ ಫಲಿತಾಂಶ ಹೊರಬೀಳಲಿದೆ. ಈ ಬಾರಿಯ ಚುನಾವಣೆಯು ತೀವ್ರ ಕುತೂಹಲ ಕೆರಳಿಸಿದೆ. ಗುಜರಾತ್ನಲ್ಲಿ ಇಷ್ಟು ವರ್ಷಗಳ ಕಾಲ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಈ ಸಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಆಮ್ ಆದ್ಮಿ ಪಕ್ಷವು ತೊಡೆತಟ್ಟಿದೆ. ಪಂಜಾಬ್ ಹಾಗೂ ದೆಹಲಿಯಲ್ಲಿ ಅಧಿಕಾರ ಹಿಡಿದಿರುವ ಎಎಪಿ ಗುಜರಾತ್ನಲ್ಲೂ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಸಮೀಕ್ಷೆಗಳ ಪ್ರಕಾರ, ಗುಜರಾತ್ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ.

ರಾಹುಲ್ ನೇತೃತ್ವದ ಭಾರತ್ ಜೋಡೊ ಯಾತ್ರೆಗೆ ಜನಬೆಂಬಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವ ಭಾರತ್ ಜೋಡೊ ಯಾತ್ರೆಗೆ ದೇಶದಾದ್ಯಂತೆ ಜನಬೆಂಬಲ ವ್ಯಕ್ತವಾಗುತ್ತಿದೆ. ಕೇರಳ, ತಮಿಳು ನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಸಾಗಿರುವ ಯಾತ್ರೆಯು ಸಧ್ಯ ಮಧ್ಯಪ್ರದೇಶದಲ್ಲಿ ಮುನ್ನೆಡೆಯುತ್ತಿದೆ. ತಮಿಳುನಾಡಿ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದ ವರೆಗೂ ಭಾರತ್ ಜೋಡೊ ಯಾತ್ರೆಯು ಸುಮಾರು 3500 ಕಿ.ಮೀ ಕ್ರಮಿಸಲಿದೆ.












Click it and Unblock the Notifications