ಮೊರ್ಬಿಯಲ್ಲಿ ಮೂಗುಮುಚ್ಚಿಕೊಂಡು ಇಂದಿರಾರನ್ನು ಅಣಕಿಸಿದ ಮೋದಿ!
ಮೊರ್ಬಿ(ಗುಜರಾತ್), ನವೆಂಬರ್ 29: "ಇಂದಿರಾ ಬೆನ್, ಮೊರ್ಬಿಗೆ ಬಂದಿದ್ದಾಗ ದುರ್ವಾಸನೆ ತಾಳಲಾರದೆ ಮೂಗುಮುಚ್ಚಿಕೊಂಡಿದ್ದರು. ಆದರೆ ಜನಸಂಘ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮಾತ್ರ ಮೋರ್ಬಿಯ ರಸ್ತೆಗಳಲ್ಲಿ ಮಾನವೀಯತೆಯ ಸುವಾಸನೆಯೇ ಸಿಗುತ್ತಿತ್ತು" ಎಂದು ಪ್ರಧಾನಿ ನರೇಂದ್ರ ಮೋದಿ, ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಅನ್ನು ಅಣಕಿಸಿದರು.
ಕಾಂಗ್ರೆಸ್ ವಿರುದ್ಧ ಕಟು ಟೀಕೆ, ಹಿಂದುಳಿದ ವರ್ಗದ ದಾಳ ಉರುಳಿಸಿದ ಮೋದಿ
ಗುಜರಾತ್ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಗುಜರಾತಿನ ಮೊರ್ಬಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮೋದಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
"ನನಗೆ ಈಗಲೂ ನೆನಪಿದೆ, ಇಂದಿರಾ ಬೆನ್, ಮೊರ್ಬಿಗೆ ಬಂದಿದ್ದಾಗ ಅವರ ಚಿತ್ರವೊಂದನ್ನು 'ಚಿತ್ರಲೇಖ' ಎಂಬ ಪತ್ರಿಕೆಯೊಂದರಲ್ಲಿ ಪ್ರಕಟಿಸಲಾಗಿತ್ತು. ಅವರು ಮೊರ್ಬಿಯಲ್ಲಿ ನಡೆಯುವಾಗ, ದುರ್ವಾಸನೆಯನ್ನು ತಾಳಲಾರದಂತೆ ತಮ್ಮ ಕರವಸ್ತ್ರವನ್ನು ಮೂಗಿನ ಮೇಲಿಟ್ಟುಕೊಂಡಿದ್ದ ಚಿತ್ರ ಅದಾಗಿತ್ತು. ಆದರೆ ಜನಸಂಘ ಮತ್ತು ಆರ್ ಎಸ್ ಎಸ್ ಮಾತ್ರ ಮೊರ್ಬಿಯ ರಸ್ತೆಗಳಲ್ಲಿ ಮಾನವೀಯತೆಯ ಸುವಾಸನೆಯನ್ನು ಗಮನಿಸಿತ್ತು" ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೂಗಿನ ಮೇಲೆ ಕೈಯಿಟ್ಟಿದ್ದ ಆ ದೃಶ್ಯವನ್ನು ಅಭಿನಯಿಸಿ, ಕಾಂಗ್ರೆಸ್ಸಿಗರನ್ನು ಅಣಕಿಸಿದರು.
ಗುಜರಾತ್, ಗೆಲುವು ಯಾರಿಗೆ? ಬಿಜೆಪಿ Vs ಕಾಂಗ್ರೆಸ್: ಒಂದು ಅವಲೋಕನ
ಬಿಜೆಪಿ ಈ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನಗೆ ಹೆಮ್ಮೆಯಿದೆ. ಬಿಜೆಪಿಯ ಗುರಿ ಜನಸೇವೆಯೇ ಹೊರತು ಚುನಾವಣೆಯನ್ನು ಗೆಲ್ಲುವುದಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಇದೇ ಡಿಸೆಂಬರ್ 9 ಮತ್ತು 14 ರಂದು ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿ.18ರಂದು ಫಲಿತಾಂಶ ಹೊರಬೀಳಲಿದೆ.