ಮೋದಿ ಅಸಮಾಧಾನ: ಹಣಕಾಸು ಖಾತೆಯಿಂದ ಜೇಟ್ಲಿ ಎತ್ತಂಗಡಿ?
ನವದೆಹಲಿ, ಜ 22: ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆ ಮಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಣದುಬ್ಬರ ನಿಯಂತ್ರಿಸುವಲ್ಲಿ ವಿಫಲ, ಡಿಡಿಸಿಎ ಹಗರಣ, ಆರ್ಥಿಕ ಸುಧಾರಣೆಗಳು ತೀವ್ರ ಸ್ವರೂಪ ಪಡೆಯದಿರುವ ಹಿನ್ನಲೆ... ಹೀಗೆ, ಸಚಿವ ಅರುಣ್ ಜೇಟ್ಲಿ ಕಾರ್ಯಶೈಲಿಯ ವಿರುದ್ದ ಪ್ರಧಾನಿ ಮೋದಿ ಅಸಮಾಧಾನ ಹೊಂದಿದ್ದಾರೆನ್ನುವ ಸುದ್ದಿಯಿದೆ. (ಮೋದಿ ಸರಕಾರದ ಪವರ್ ಸ್ಟಾರ್)
ಹೀಗಾಗಿ, ಆಯಕಟ್ಟಿನ ಹಣಕಾಸು ಸಚಿವಾಲಯ ಅರುಣ್ ಜೇಟ್ಲಿ ಕೈತಪ್ಪುವ ಸಾಧ್ಯತೆಯಿದ್ದು, ಆ ಸ್ಥಾನಕ್ಕೆ ಪಿಯೂಷ್ ಗೋಯೆಲ್ ಅವರನ್ನು ತರುವಲ್ಲಿ ಮೋದಿ ಒಲವು ತೋರಿದ್ದಾರೆ ಎನ್ನುವ ಮಾಹಿತಿಯಿದೆ.
ಈ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ಮತ್ತು ಬರುವ ವರ್ಷ ನಡೆಯಲಿರುವ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ, ಮುಂದಿನ ದಿನಗಳಲ್ಲಿ ಮಹತ್ತರ ಬದಲಾವಣೆ ತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅದೇ ರೀತಿ, ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲಿ ಉತ್ತರಪ್ರದೇಶದ ಚುನಾವಣೆ ಮುಗಿಯುವ ತನಕ ಅಮಿತ್ ಶಾ ಅವರನ್ನೇ ಮುಂದುವರಿಸಲು ಮೋದಿ ಪಕ್ಷದ ಪ್ರಮುಖರಲ್ಲಿ ಮತ್ತು ಆರ್ ಎಸ್ ಎಸ್ ಮುಖಂಡರಲ್ಲಿ ಮಾತುಕತೆ ನಡೆಸಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ದೇಶದ ಆರ್ಥಿಕತೆ ವೇಗ ಪಡೆದುಕೊಂಡಿದ್ದರೂ, ತೆರಿಗೆ ಸುಧಾರಣೆಯಲ್ಲಿ ವಿತ್ತ ಸಚಿವಾಲಯ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದಿರುವ ಹಿನ್ನಲೆಯಲ್ಲಿ ಜೇಟ್ಲಿ ಅವರನ್ನು ಹಣಕಾಸು ಸಚಿವಾಲಯದಿಂದ ಎತ್ತಂಗಡಿ ಮಾಡಿ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ. ಮುಂದೆ ಓದಿ..
ಪಿಯೂಷ್ ಗೋಯೆಲ್
ಇಂಧನ ಮತ್ತು ಕಲ್ಲಿದ್ದಲು ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಪಿಯೂಷ್ ಗೋಯೆಲ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿ, ಹೂಡಿಕೆದಾರರನ್ನು ಆಕರ್ಷಿಸುವುದು, ಹಣದುಬ್ಬರ ಕಡಿಮೆ ಮಾಡುವುದು ಪ್ರಧಾನಿ ಮೋದಿಯ ಮುಂದಾಲೋಚನೆ ಎನ್ನಲಾಗುತ್ತಿದೆ.
ಬಜೆಟ್ ನಂತರ
ಪ್ರಮುಖವಾಗಿ ಉತ್ತರಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಈ ಬದಲಾವಣೆ ತರಲು ಮುಂದಾಗಿದ್ದು, ಫೆಬ್ರವರಿ ತಿಂಗಳಲ್ಲಿ ಬಜೆಟ್ ಮಂಡನೆಯಾದ ನಂತರ ಅರುಣ್ ಜೇಟ್ಲಿ, ರಕ್ಷಣಾ ಸಚಿವರಾಗಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ವಾಗ್ದಾನ
ಉದ್ಯೋಗ, ಹಣದುಬ್ಬರ ನಿಯಂತ್ರಣ, ಬಂಡವಾಳ ಆಕರ್ಷಣೆ ಮುಂತಾದ ವಿಚಾರದಲ್ಲಿ ಲೋಕಸಭಾ ಚುನಾವಣೆಯ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿಲ್ಲದಿಲ್ಲ. ಯಾಕೆಂದರೆ ಪ್ರಧಾನಿಯಾಗಿ ಮುಂದಿನ ಅವಧಿಗೆ ಮುಂದುವರಿಯಲು ಉತ್ತರಪ್ರದೇಶದ ಫಲಿತಾಂಶ ನಿರ್ಣಾಯಕ.
ಮನೋಹರ್ ಪಾರಿಕ್ಕರ್
ರಕ್ಷಣಾ ಸಚಿವರಾಗಿರುವ ಮನೋಹರ್ ಪಾರಿಕ್ಕರ್ ಅವರಿಗೆ ಯಾವ ಪೋರ್ಟ್ ಫೋಲಿಯೋ ಮತ್ತು ಇಂಧನ ಸಚಿವ ಸ್ಥಾನ ಯಾರಿಗೆ ಸಿಗಬಹದು ಎನ್ನವ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ.
ಹೊಸಬರಿಗೆ ಅವಕಾಶ
ಪ್ರತಿಭಾವಂತ, ಹೊಸ ಮತ್ತು ಯುವ ಮುಖಗಳಿಗೆ ಆಯಕಟ್ಟಿನ ಹುದ್ದೆಯನ್ನು ನೀಡಲು ಮೋದಿ ಉತ್ಸುಕರಾಗಿದ್ದರೂ, ಪಕ್ಷದೊಳಗಿನ ಒತ್ತಡದಿಂದಾಗಿ ಹಿರಿಯರು ಮತ್ತು ಕಿರಿಯರು ಇಬ್ಬರಿಗೂ ಪ್ರಾತಿನಿಧ್ಯತೆ ನೀಡುತ್ತಿದ್ದಾರೆ.