2 ಕ್ಷೇತ್ರಗಳಲ್ಲಿ ಒಟ್ಟಿಗೆ ಸ್ಪರ್ಧೆಗೆ ಕಡಿವಾಣ ಹಾಕುವಂತೆ ಅರ್ಜಿ
ನವದೆಹಲಿ, ಮಾರ್ಚ್ 27: ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸೌಲಭ್ಯಕ್ಕೆ ಕಡಿವಾಣ ಅಗತ್ಯ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಸುಪ್ರೀಂಕೋರ್ಟ್ ಸ್ವೀಕರಿಸಿದೆ.
ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎಸ್.ಎಸ್. ಬೊಬ್ಡೆ ನೇತೃತ್ವದ ನ್ಯಾಯಪೀಠವು ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ನಂತರ ಕೈಗೆತ್ತಿಕೊಳ್ಳಲಿದೆ.
ಲೋಕಸಭೆ ಚುನಾವಣೆ: ಕೆಲವು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ
ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 33 (7) ಅನ್ವಯ ಅಭ್ಯರ್ಥಿಯು ಸಾರ್ವತ್ರಿಕ ಚುನಾವಣೆ, ದ್ವೈವಾರ್ಷಿಕ ಚುನಾವಣೆ, ಉಪ ಚುನಾವಣೆಯಲ್ಲೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಅರ್ಹತೆ ಹೊಂದಿರುತ್ತಾರೆ.
ಆದರೆ, ಪ್ರಜಾಪ್ರಭುತ್ವ ಉಳಿಯಲು ಒಬ್ಬ ವ್ಯಕ್ತಿ, ಒಂದು ವೋಟ್, ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರ ಎಂಬುದು ಅಗತ್ಯ. ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 70ರ ಅನ್ವಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಅಭ್ಯರ್ಥಿಯು ಒಂದು ಕ್ಷೇತ್ರವನು ಮಾತ್ರ ಉಳಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ, ಉಪ ಚುನಾವಣೆ ನಡೆಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ ಬೀಳಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮತದಾರರಿಗೂ ಹೊರೆ ಹಾಗೂ ಒಂದು ಕ್ಷೇತ್ರದ ಮತದಾರರಿಗೆ ಮಾಡುವ ಅನ್ಯಾಯ, ಸರ್ಕಾರಿ ಆಡಳಿತ ವ್ಯವಸ್ಥೆಗೂ ಹೊರೆ, ಮಾನವ ಸಂಪನ್ಮೂಲ ಹೊಂದಿಸುವ ಕಷ್ಟವನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಈ ಹಿಂದೆ ಖುದ್ದು ಚುನಾವಣಾ ಆಯೋಗವೇ ಪ್ರಸ್ತಾಪಿಸಿದೆ ಎಂದು ತಮ್ಮ ಅರ್ಜಿಯಲ್ಲಿ ಅಶ್ವಿನಿ ಅವರು ಹೇಳಿದ್ದಾರೆ.