18 ವರ್ಷ ದಾಟಿದವರಿಗೆ ಧರ್ಮ ಆಯ್ಕೆಯ ಸ್ವಾತಂತ್ರ್ಯವಿದೆ: ಸುಪ್ರೀಂಕೋರ್ಟ್
ನವದೆಹಲಿ, ಏಪ್ರಿಲ್ 9: ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಒಂದನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ. 18 ವರ್ಷ ದಾಟಿದ ಜನರು ತಾವು ಬಯಸಿದ ಧರ್ಮವನ್ನು ಅನುಸರಿಸುವ ಆಯ್ಕೆ ಮಾಡುವುದನ್ನು ತಡೆಯಲು ಯಾವುದೇ ಕಾರಣ ಇಲ್ಲ ಎಂದು ಅದು ಹೇಳಿದೆ.
ಕಾನೂನು ಆಯೋಗಕ್ಕೆ ಪ್ರಾತಿನಿಧಿತ್ವ ಸಲ್ಲಿಸಲು ಅರ್ಜಿದಾರರಿಗೆ ಅನುಮತಿ ನೀಡಲು ಸಹ ಸುಪ್ರೀಂಕೋರ್ಟ್ ನಿರಾಕರಿಸಿದೆ. 'ನಾವು ನಿಮಗೆ ಅನುಮತಿ ನೀಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಪ್ರಸರಣ ಪದವು ಏಕೆ ಇದೆ ಎಂಬುದಕ್ಕೆ ಕಾರಣವಿದೆ' ಎಂದು ನ್ಯಾಯಮೂರ್ತಿ ಆರ್ಎಫ್ ನಾರಿಮನ್ ಹೇಳಿದರು.
ಧಾರ್ಮಿಕ ಮತಾಂತರ ಮತ್ತು ಮಂತ್ರವಾದಗಳನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಪಿಐಎಲ್ -ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಅಲ್ಲ, ಬದಲಾಗಿ ಪಬ್ಲಿಸಿಟಿ (ಪ್ರಚಾರ) ಇಂಟರೆಸ್ಟ್ ಲಿಟಗೇಷನ್ ಎಂದು ನ್ಯಾಯಾಲಯ ವ್ಯಾಖ್ಯಾನಿಸಿತು.

ಪವಾಡ, ಮಾಟಮಂತ್ರ, ವಿಶೇಷ ಶಕ್ತಿಗಳನ್ನು ಬಳಸಿಕೊಂಡು ಅಥವಾ ವ್ಯಕ್ತಿಗಳಿಗೆ ಹಣಕಾಸಿನ ಸಹಾಯ ಅಥವಾ ಉಡುಗೊರೆಯ ಪ್ರಲೋಭನೆಗಳನ್ನು ಬಳಸಿಕೊಳ್ಳುವ ಮೂಲಕ ಅಥವಾ ಬೆದರಿಕೆ, ಪ್ರಚೋದನೆಗಳ ಮೂಲಕ ಧಾರ್ಮಿಕ ಮತಾಂತರ ಮಾಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ನ್ಯಾಯಮೂರ್ತಿಗಳಾದ ಆರ್ಎಫ್ ನಾರಿಮನ್, ಬಿಆರ್ ಗವಾಯ್ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ತಿರಸ್ಕರಿಸಿತು.
ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಉಪಾಧ್ಯಾಯ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡರು.












Click it and Unblock the Notifications