ಬಿಹಾರ ದೋಣಿ ದುರಂತ: ಸಾವಿನ ಸಂಖ್ಯೆ 24ಕ್ಕೇರಿಕೆ
ಶನಿವಾರದಂದು ಬಿಹಾರದ ರಾಜಧಾನಿ ಪಾಟ್ನಾ ಬಳಿ ಸಂಭವಿಸಿದ್ದ ದೋಣಿ ದುರಂತದಲ್ಲಿನ ಸಾವಿನ ಸಂಖ್ಯೆ 24ಕ್ಕೇರಿದೆ.
ಪಾಟ್ನಾ, ಜನವರಿ 15: ಪಾಟ್ನಾ ಸಮೀಪ ಗಂಗಾ ನದಿಯಲ್ಲಿ ಶನಿವಾರ (ಜ. 14) ಸಂಭವಿಸಿದ್ದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೇರಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬಿಹಾರ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ದೋಣಿಗಳಲ್ಲಿ ಶನಿವಾರ ಸಂಜೆ ಹಿಂದಿರುಗುವಾಗ ಈ ಘಟನೆ ನಡೆದಿತ್ತು. ಸುಮಾರು 50 ಮಂದಿಯನ್ನು ತುಂಬಿಕೊಂಡಿದ್ದ ದೋಣಿಯೊಂದು ಪಲ್ಟಿ ಹೊಡೆದು ದುರ್ಘಟನೆ ಸಂಭವಿಸಿತ್ತು.

ಶನಿವಾರ ರಾತ್ರಿ ವೇಳೆಗೆ, 15 ಜನರ ಮೃತ ದೇಹಗಳು ಸಿಕ್ಕಿದ್ದವು. ರಾತ್ರಿಯಿಡೀ ಶೋಧ ಕಾರ್ಯ ಮುಂದುವರಿದಿತ್ತು. ಬೆಳಗ್ಗೆ ಸುಮಾರಿಗೆ ಮತ್ತಷ್ಟು ಮೃತ ದೇಹಗಳು ಸಿಕ್ಕಿದ್ದು, ಅಧಿಕೃತ ಮಾಹಿತಿಯ ಪ್ರಕಾರ, ಈವರೆಗೆ 24 ಜನರು ಈ ದುರಂತದಲ್ಲಿ ಸಾವಿಗೀಡಾಗಿದ್ದರೆಂದು ಹೇಳಲಾಗಿದೆ.
ರಾಜಕೀಯ ಕೆಸರೆರೆಚಾಟ
ಏತನ್ಮಧ್ಯೆ, ಈ ಘಟನೆಯು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಭದ್ರತೆ ವಿಚಾರದಲ್ಲಿ ಸರ್ಕಾರವು ತೋರಿದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೃತರ ಕುಟಂಬಕ್ಕೆ ತಲಾ 2 ಲಕ್ಷ ರು. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಪ್ರಕಟಿಸಿದ್ದಾರೆ.












Click it and Unblock the Notifications