ಪಠಾಣ್ ಕೋಟ್ ದಾಳಿ : ಸಲ್ವಿಂದರ್ ಸಿಂಗ್ ಆರೋಪಿ?
ಬೆಂಗಳೂರು, ಜನವರಿ 12 : ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಪ್ರಕರಣದಲ್ಲಿ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರು ಆರೋಪಿಯಾಗುವ ಸಾಧ್ಯತೆ ಇದೆ. ಈ ಕುರಿತು ರಾಷ್ಟ್ರೀಯ ತನಿಖಾ ದಳ ಕೇಂದ್ರ ಗೃಹ ಇಲಾಖೆ ಜೊತೆ ಚರ್ಚೆ ನಡೆಸಿದೆ.
ಉಗ್ರರು ತಮ್ಮನ್ನು ಅಪಹರಣ ಮಾಡಿದ ಬಗ್ಗೆ ಸಲ್ವಿಂದರ್ ಸಿಂಗ್ ನೀಡಿರುವ ಹೇಳಿಕೆಗಳು ಎನ್ಐಎಗೆ ತೃಪ್ತಿ ತಂದಿಲ್ಲ. ಸಿಂಗ್ ಹೇಳಿಕೆಯಲ್ಲಿ ಇನ್ನೂ ಹಲವಾರು ಗೊಂದಲಗಳಿವೆ. ಸೋಮವಾರವೂ ಎನ್ಐಎ ಸಿಂಗ್ ಅವರನ್ನು 2ನೇ ಬಾರಿ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಿದೆ. [ಪಠಾಣ್ ಕೋಟ್ ದಾಳಿ : ಶಾಂತಿ ಮಾತುಕತೆ ರದ್ದು]

ಡಿಸೆಂಬರ್ 31ರಂದು ಅಡುಗೆ ಸಹಾಯಕ ಮದನ್ ಗೋಪಾಲ್ ಮತ್ತು ಸ್ನೇಹಿತ ರಾಜೇಶ್ ವರ್ಮಾ ಜೊತೆಗಿದ್ದಾಗ ನಾಲ್ವರು ಉಗ್ರರು ಸಿಂಗ್ ಅವರನ್ನು ಅಪಹರಣ ಮಾಡಿದ್ದರು. ನಂತರ ಎಲ್ಲರನ್ನು ಕಾಡಿನಲ್ಲಿ ಬಿಟ್ಟು, ಕಾರಿನೊಂದಿಗೆ ಪರಾರಿಯಾಗಿ ವಾಯುನೆಲೆ ತಲುಪಿದ್ದರು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]
ಎನ್ಐಎ ಮದನ್ ಗೋಪಾಲ್ ಅವರಿಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದು, ಅವರ ವಿಚಾರಣೆ ಬಳಿಕ ಸಿಂಗ್ ನೀಡಿರುವ ಹೇಳಿಕೆಗಳ ಬಗ್ಗೆ ನಿಖರವಾದ ಮಾಹಿತಿ ದೊರೆಯಲಿದೆ. ಸಿಂಗ್ ಅವರನ್ನು ಆರೋಪಿಯನ್ನಾಗಿ ಮಾಡಬೇಕೆ? ಅಥವ ಪ್ರತ್ಯಕ್ಷ ಸಾಕ್ಷಿಯಾಗಿ ಪರಿಗಣಿಸಬೇಕೆ? ಎಂದು ಎನ್ಐಎ ಚಿಂತನೆ ನಡೆಸುತ್ತಿದೆ. [ಎಸ್ಪಿ ಸಲ್ವಿಂದರ್ ಸಿಂಗ್ ಉತ್ತರಿಸಬೇಕಾದ ಮೂರು ಪ್ರಶ್ನೆಗಳು]
ಸೋಮವಾರ ಬೆಳಗ್ಗೆ 10.45ಕ್ಕೆ ಸಿಂಗ್ ದೆಹಲಿಯಲ್ಲಿರುವ ಎನ್ಐಎ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು, ಮಧ್ಯರಾತ್ರಿಯಲ್ಲಿ ಸಿಂಗ್ ಭಾರತ-ಪಾಕ್ ಗಡಿಯ ಸಮೀಪ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ. ತಾವು ದೇವಾಲಯಕ್ಕೆ ಹೋಗಿದ್ದಾಗಿ ಸಿಂಗ್ ಹೇಳಿದ್ದಾರೆ.
ಭಾರತ-ಪಾಕ್ ಗಡಿಯ ಸಮೀಪ ಸಿಂಗ್ ಸುಮಾರು 90 ನಿಮಿಷ ಕಳೆದಿದ್ದರು ಎಂದು ವಿಚಾರಣೆ ವೇಳೆ ಅವರು ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಜಲಂಧರ್ಗೆ ವರ್ಗಾವಣೆಗೊಂಡಿದ್ದರೂ ಸಿಂಗ್ ಅವರು ಗುರುದಾಸ್ಪುರದಲ್ಲಿ ಏನು ಮಾಡುತ್ತಿದ್ದರು? ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.












Click it and Unblock the Notifications