ಮೈಗೆ ಹೊಕ್ಕಿದ್ದು ಆರು ಬುಲೆಟ್, ನಿಮಗಿದೋ ಸೆಲ್ಯೂಟ್
ಪಠಾಣ್ಕೋಟ್, ಜನವರಿ, 08: ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾರೆ. ಮೈ ಕೈ ಎಲ್ಲಾ ಬ್ಯಾಂಡೇಜ್ ಸುತ್ತಿಕೊಂಡಿದೆ. ಆರು ಗುಂಡುಗಳನ್ನು ಹೊರತೆಗೆದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಚೀತ್ಕರಿಸಬೇಕು ಎನ್ನುವ ನೋವಲ್ಲೂ ಅವರು ವಿಜಯದ ಸಂಕೇತ ತೋರಿಸುತ್ತಿದ್ದಾರೆ.
ಹೌದು.. ಇದು ನಮ್ಮ ಸೈನಿಕರ ಶಕ್ತಿ, ಆತ್ಮ ಸ್ಥೈರ್ಯ.. ಉಗ್ರರ ಆರು ಗುಂಡುಗಳು ಮೈ ಯಲ್ಲಿ ಹೊಕ್ಕಿದ್ದರೂ ಗಟ್ಟಿ ಗುಂಡಿಗೆಯ ಯೋಧ ಮತ್ತೆ ದೇಶಕ್ಕೆ ಹೋರಾಡಲು ಎದ್ದು ನಿಲ್ಲುತ್ತಿದ್ದಾನೆ. ಪಠಾಣ್ಕೋಟ್ ದಾಳಿಯಲ್ಲಿ ಗುಂಡೇಟು ತಿಂದ ಶೈಲೇಶ್ ಗೌರ್ ಕಣ್ಣಲ್ಲಿ ಇಂದು ದೇಶಕ್ಕಾಗಿ ಹೋರಾಡಿದ ಪುಳಕ.[ಜನವರಿ 1ರಂದೇ ಇಬ್ಬರು ಉಗ್ರರು ದೇಶದ ಒಳಕ್ಕೆ ನುಗ್ಗಿದ್ದರು]
ನಿರಂಜನ್ ಅವರಂಥ ವೀರರನ್ನು ಕಳೆದುಕೊಂಡ ದೇಶ ಒಂದೆಡೆ ಮರುಗುತ್ತಿದ್ದರೆ. ಅಬ್ಬಾ ಶೈಲೇಶ್ ಅಂಥವರ ಜೀವ ಉಳಿಯಿತಲ್ಲಾ ಎಂದು ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವುದೊಂದೆ ಉಳಿದಿರುವ ದಾರಿ.
ಉಗ್ರರೊಂದಿಗೆ ಕಾದಾಟಕ್ಕಿಳಿದು ತಮ್ಮ ಕೊನೆ ಉಸಿರಿನವರೆಗೂ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿ ಗುರುಸೇವಕ್ ಸಿಂಗ್ ಹುತಾತ್ಮರಾದರು. ಇತ್ತ ಶೈಲೇಶ್ ದೇಹಕ್ಕೆ 6 ಗುಂಡುಗಳು ತಾಗಿದ್ದವು. ಶೈಲೇಶ್ ಈಗ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.[ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು]
24 ವರ್ಷದ ಶೈಲೇಶ್ 6 ಬುಲೆಟ್ ಮೈಯಲ್ಲಿ ನುಗ್ಗಿಸಿಕೊಂಡ ಮೇಲೂ ಹೋರಾಟ ಮಾಡುತ್ತಲೇ ಇದ್ದರು. ಫೈಟರ್ ಜೆಟ್ ಇರುವ ಜಾಗಕ್ಕೆ ಉಗ್ರರಿಗೆ ಹೋಗಲು ಬಿಡದೇ, ಕೊನೆಗೆ ರಕ್ತದ ಮಡುವಿನಲ್ಲಿಯೇ ಬಿದ್ದಿದ್ದರು. ಶೈಲೇಶ್ ಬೇಗ ಗುಣಮುಖವಾಗಲಿ ಎಂಬುದೇ ಎಲ್ಲರ ಹಾರೈಕೆ. ಯೋಧರಿಗೊಂದು ಸಲಾಂ.