ಲೋಕಸಭಾ ಅಧಿವೇಶನಕ್ಕೂ ಮುನ್ನ ಸೋನಿಯಾ ಗಾಂಧಿ ಚಾಣಾಕ್ಷ ನಡೆ
ಆಡಳಿತಾರೂಢ ಬಿಜೆಪಿಗೆ ಠಕ್ಕರ್ ನೀಡಲು ಸತತವಾಗಿ ವಿಫಲವಾಗುತ್ತಿರುವ ಕಾಂಗ್ರೆಸ್ಸಿಗೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನು ಆಯ್ಕೆ ಮಾಡುವುದು ಎನ್ನುವ ಗೊಂದಲದಲ್ಲಿದೆ.
ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಆ ಹುದ್ದೆಯನ್ನು ನಿಭಾಯಿಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ, ಅಧೀರ್ ರಂಜನ್ ಚೌಧುರಿಯವರನ್ನು ಆ ಹುದ್ದೆಗೆ ನೇಮಿಸಲಾಗಿತ್ತು.
ಖರ್ಗೆಯವರಷ್ಟು ಪವರ್ಫುಲ್ ಆಗಿ ಪಕ್ಷದ ನಿಲುವನ್ನು ಮಂಡಿಸುವಲ್ಲಿ ಅಧೀರ್ ರಂಜನ್ ಯಶಸ್ಸನ್ನು ಕಾಣಿರಲಿಲ್ಲ. ಇದರ ಜೊತೆಗೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸೀಟನ್ನೂ ಗೆಲ್ಲಲಾಗಿರಲಿಲ್ಲ. ಅಧೀರ್ ರಂಜನ್ ಅವರು ಪಶ್ಚಿಮ ಬಂಗಾಳದ ಬೆಹ್ರಾಂಪುರ ಕ್ಷೇತ್ರದ ಸಂಸದರಾಗಿದ್ದಾರೆ.
ಬಂಗಾಳದ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಆ ಹುದ್ದೆಗೆ ಬೇರೊಬ್ಬರನ್ನು ಆಯ್ಕೆ ಮಾಡುವ ಚಿಂತನೆಯಲ್ಲಿದ್ದಾರೆ. ಈ ಸಂಬಂಧ, ನಾಲ್ವರ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಪಕ್ಷದ ಕಾರ್ಯವೈಖರಿಯ ಬಗ್ಗೆ ಧ್ವನಿ ಎತ್ತಿದ್ದ G-23 ಮುಖಂಡರು
ಪಕ್ಷದ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿಯೇ ಧ್ವನಿ ಎತ್ತಿದ್ದ G-23 (ಸೋನಿಯಾ ಗಾಂಧಿಗೆ ಪತ್ರ ಬರೆದು ಸಹಿ ಹಾಕಿದ್ದ 23 ಮುಖಂಡರು) ನಾಯಕರೊಬ್ಬರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ, ಈ ಮುಖಂಡರನ್ನು ಒಗ್ಗೂಡಿಸುವ ಕೆಲಸಕ್ಕೆ ಸೋನಿಯಾ ಮುಂದಾಗಿದ್ದಾರೆ.

ಲೋಕಸಭೆಯ ಮುಂಗಾರು ಅಧಿವೇಶನ ಇದೇ ಜುಲೈ 19ರಿಂದ ಆರಂಭ
ಲೋಕಸಭೆಯ ಮುಂಗಾರು ಅಧಿವೇಶನ ಇದೇ ಜುಲೈ 19ರಿಂದ ಆರಂಭವಾಗಲಿದೆ. ಅಧಿಕೃತ ವಿರೋಧ ಪಕ್ಷದ ನಾಯಕನ ಪಟ್ಟ ಸಿಗಲು ಕಾಂಗ್ರೆಸ್ಸಿಗೆ ಸಂಖ್ಯಾಬಲದ ಕೊರತೆಯಿದೆ. ಆದರೂ, ವಿರೋಧ ಪಕ್ಷದ ಸಾಲಿನಲ್ಲಿ ದೊಡ್ಡ ಪಕ್ಷವಾಗಿರುವುದರಿಂದ, ಈ ಹುದ್ದೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಾಲ್ವರ ಹೆಸರನ್ನು ಸೋನಿಯಾ ಗಾಂಧಿ ಪರಿಶೀಲಿಸುತ್ತಿದ್ದಾರೆ.

ರಾಹುಲ್ ಗಾಂಧಿಯವರ ಕಾರ್ಯವೈಖರಿಯ ಬಗ್ಗೆ ಧ್ವನಿ
ಶಶಿ ತರೂರ್, ಮನೀಶ್ ತಿವಾರಿ, ಗೌರವ್ ಗೊಗೊಯಿ ಮತ್ತು ರವನೀತ್ ಬಿಟ್ಟು ಈ ನಾಲ್ಕು ಹೆಸರು ಆ ಹುದ್ದೆಗೆ ಅಂತಿಮವಾಗಿರುವ ಹೆಸರುಗಳು. ಇವರೆಲ್ಲರೂ, ಪ್ರಮುಖವಾಗಿ ರಾಹುಲ್ ಗಾಂಧಿಯವರ ಕಾರ್ಯವೈಖರಿಯ ಬಗ್ಗೆ ಧ್ವನಿ ಎತ್ತಿದ್ದವರು. ಪಕ್ಷದ ವಿರುದ್ದ ಇವರು ಮಾತಾಡಿದ್ದರೂ, ಇವರ ಡಿಮ್ಯಾಂಡ್ಗಳನ್ನು ಈಡೇರಿಸುವ ಕೆಲಸ ಇಷ್ಟು ದಿನ ನಡೆದಿರಲಿಲ್ಲ. ಈಗ, ಸೋನಿಯಾ ಆ ಕೆಲಸಕ್ಕೆ ಮುಂದಾಗಿದ್ದಾರೆ.

ಶಶಿ ತರೂರ್ ಮತ್ತು ಮನೀಶ್ ತಿವಾರಿಯವರ ಹೆಸರು ಮಂಚೂಣಿಯಲ್ಲಿ
ಈ ನಾಲ್ವರ ಪೈಕಿ ಶಶಿ ತರೂರ್ ಮತ್ತು ಮನೀಶ್ ತಿವಾರಿಯವರ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿದೆ. ಮನೀಶ್ ತಿವಾರಿ ಒಂದು ಕಾಲದಲ್ಲಿ ಸೋನಿಯಾ ಗಾಂಧಿ ಆಪ್ತವಲಯದಲ್ಲಿ ಇದ್ದವರು. ಶಶಿ ತರೂರ್ ಕೂಡಾ ಹೈಕಮಾಂಡ್ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡವರು. ಹಾಗಾಗಿ, ಈ ಇಬ್ಬರಲ್ಲಿ ಒಬ್ಬರು ಕಾಂಗ್ರೆಸ್ ನಾಯಕರಾಗಿ ಆಯ್ಕೆ ಆಗಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications