ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿದ ಟಿಡಿಪಿ
ನವದೆಹಲಿ, ಜುಲೈ 25 : ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರ ವಿರುದ್ಧ ಟಿಡಿಪಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡನೆ ಮಾಡಲಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಸದನವನ್ನು ತಪ್ಪುದಾರಿಗೆ ಎಳೆದಿದ್ದಾರೆ ಎಂದು ಹಕ್ಕುಚ್ಯುತಿ ಮಂಡನೆ ಮಾಡಲಾಗುತ್ತಿದೆ.
ಲೋಕಸಭೆ ಮತ್ತು ರಾಜ್ಯಸಭೆ ಹಲವು ಚರ್ಚೆಗಳಿಗೆ ಬುಧವಾರ ಸಾಕ್ಷಿಯಾಯಿತು. ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ ಸಂಸದರು ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರ ವಿರುದ್ಧ ಹಕ್ಕುಚ್ಯುತಿಯನ್ನು ಮಂಡನೆ ಮಾಡುತ್ತಿದ್ದಾರೆ.

* ರೆಫಲ್ ಹಗರಣದ ಬಗ್ಗೆ ಮಾತನಾಡಿದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಸಂಸತ್ ಜಂಟಿ ಸಮಿತಿಯನ್ನು ರಚನೆ ಮಾಡಬೇಕು. ಅವಿಶ್ವಾಸ ನಿರ್ಣಯ ಮಂಡನೆ ಮೇಲೆ ಮಾತನಾಡುವಾಗ ಪ್ರಧಾನಿ ಹೇಳಿದ್ದಕ್ಕಿಂತ ಕಡಿಮೆ ವೆಚ್ಚವಾಗಿದೆಯೇ?' ಎಂದು ಪ್ರಶ್ನಿಸಿದರು.
* ರಾಜ್ಯಸಭೆ ಕಲಾಪದಲ್ಲಿ ಹಣಕಾಸು ಸಚಿವ ಪಿಯೂಷ್ ಘೋಯಲ್ ಅವರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ (2018) ಮಂಡನೆ ಮಾಡಿದರು. ಈ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆಯಾಗಿದೆ.
* 'ಇತ್ತೀಚಿನ ವರ್ಷಗಳಲ್ಲಿ ಸ್ವಿಸ್ ಬ್ಯಾಂಕ್ಗೆ ಭಾರತೀಯರು ಹಣ ಜಮಾವಣೆ ಮಾಡುವುದು ಹೆಚ್ಚಿದೆ' ಎಂಬ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ಕೊಟ್ಟ ಸಚಿವ ಪಿಯೂಷ್ ಘೋಯಲ್, 'ಸರಿಯಾದ ಮಾಹಿತಿಗಳು ಇಲ್ಲದೇ ಈ ರೀತಿ ಆರೋಪ ಮಾಡುತ್ತಿದ್ದಾರೆ. ಹಣ ಜಮಾವಣೆ ಶೇ 34.5ರಷ್ಟು ಕಡಿಮೆಯಾಗಿದೆ' ಎಂದರು.
* ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ (2018) ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ.












Click it and Unblock the Notifications