ಮೋದಿ ವಿರುದ್ಧ ಪಾಕ್ ಅವಹೇಳನಕಾರಿ ಹೇಳಿಕೆ: ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬಿಜೆಪಿ ಕರೆ
ನವದೆಹಲಿ ಡಿಸೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು (ಡಿಸೆಂಬರ್ 17) ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ. ಪಾಕ್ ಸಚಿವರ ಅವಹೇಳನಕಾರಿ ಹೇಳಿಕೆಗೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಮತ್ತು ಪಾಕ್ ವಿದೇಶಾಂಗ ಸಚಿವರ ಪ್ರತಿಕೃತಿ ದಹಿಸಲಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ನಾಚಿಕೆಗೇಡಿನ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ. ದೇಶಾದ್ಯಂತ ಡಿಸೆಂಬರ್ 17ರಂದು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಬಿಜೆಪಿಯು ತಿಳಿಸಿದೆ.
"ದೇಶದಾದ್ಯಂತ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ಪ್ರತಿಕೃತಿಗಳನ್ನು ಸುಟ್ಟುಹಾಕುತ್ತಾರೆ ಮತ್ತು ಪಾಕ್ ವಿದೇಶಾಂಗ ಸಚಿವರ ನಾಚಿಕೆಗೇಡಿನ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಭುಟ್ಟೋ ಬಳಸಿದ ಭಾಷೆ ಅತ್ಯಂತ ಖಂಡನೀಯವಾಗಿದೆ" ಎಂದು ಬಿಜೆಪಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿ ಕಾರ್ಯಕರ್ತರ ಆಕ್ರೋಶ
'ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ, ಆದರೆ ಗುಜರಾತ್ನ ಕಟುಕ ಇನ್ನೂ ಜೀವಂತವಾಗಿದ್ದಾನೆ ಮತ್ತು ಆತ ಭಾರತದ ಪ್ರಧಾನಿಯಾಗಿದ್ದಾನೆ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಗುರುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರುದ್ಧ ಸದ್ಯ ದೇಶಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ.ಈ ಹೇಳಿಕೆ ವಿರುದ್ಧ ಬಿಜೆಪಿ ಸಿಡಿದೆದ್ದಿದೆ.

ಜಾಗತಿಕ ಗಮನವನ್ನು ಬೇರೆಡೆ ಸೆಳೆಯುವ ಕೆಲಸ
ಬಿಲಾವಲ್ ಭುಟ್ಟೊ ಅವರ ಈ ಹೇಳಿಕೆಯನ್ನು ವಿರೋಧಿಸಿ, ಬಿಜೆಪಿ ಕಾರ್ಯಕರ್ತರು ಶುಕ್ರವಾರ ದೆಹಲಿಯ ಪಾಕಿಸ್ತಾನ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿದರು. ಭಾರತದ ವಿದೇಶಾಂಗ ನೀತಿಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನ ಸಣ್ಣ ದೇಶಗಳಿಂದಲೂ ಹಿನ್ನಡೆ ಎದುರಿಸುತ್ತಿದೆ ಎಂದು ಬಿಜೆಪಿ ಹೇಳಿದೆ.
ಬಿಲಾವಲ್ ಭುಟ್ಟೊ ಅವರ ಹೇಳಿಕೆಯನ್ನು ಬಿಜೆಪಿಯು ಅತ್ಯಂತ ಅವಹೇಳನಕಾರಿ ಮತ್ತು ಹೇಡಿತನದ ಹೇಳಿಕೆ ಎಂದು ದೂರಿದೆ. ಪಾಕಿಸ್ತಾನದ ಕುಸಿಯುತ್ತಿರುವ ಆರ್ಥಿಕತೆ, ಪಾಕಿಸ್ತಾನದಲ್ಲಿನ ಅವ್ಯವಸ್ಥೆ ಮತ್ತು ಅರಾಜಕತೆಯಿಂದ ಜಾಗತಿಕ ಗಮನವನ್ನು ಬೇರೆಡೆ ಸೆಳೆಯಲು ಈ ಹೇಳಿಕೆಯನ್ನು ಮಾಡಲಾಗಿದೆ ಎಂದು ಬಿಜೆಪಿ ದೂರಿದೆ.

ಭಾರತದ ವಿದೇಶಾಂಗ ನೀತಿ ಪ್ರಶಂಸೆ
ಒಂದೆಡೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿವಿಧ ಜಾಗತಿಕ ವೇದಿಕೆಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ಮತ್ತೊಂದೆಡೆ ಪಾಕಿಸ್ತಾನ ಯಾವಾಗಲೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅಪಹಾಸ್ಯ ಮತ್ತು ಅವಮಾನವನ್ನು ಸ್ವೀಕರಿಸುತ್ತದೆ ಎಂದು ಬಿಜೆಪಿ ಹೇಳಿದೆ. ಒಂದು ಕಡೆ ಭಾರತದ ವಿದೇಶಾಂಗ ನೀತಿಯನ್ನು ಜಾಗತಿಕವಾಗಿ ಪ್ರಶಂಸಿಸಲಾಗುತ್ತಿದೆ, ಮತ್ತೊಂದೆಡೆ ಪಾಕಿಸ್ತಾನವು ಸಣ್ಣ ದೇಶಗಳ ವಿರೋಧವನ್ನು ಎದುರಿಸುತ್ತಿದೆ ಎಂದಿದೆ.

ಪಾಕ್ ಹೇಳಿಕೆಗೆ ತೀವ್ರ ಖಂಡನೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪಾಕಿಸ್ತಾನದ ವಿದೇಶಾಂಗ ಸಚಿವರಿಗೆ ಪ್ರಧಾನಿ ಮೋದಿಯವರ "ಅಸಂಸ್ಕೃತ ಟೀಕೆ" ಗಾಗಿ ವಾಗ್ದಂಡನೆ ವಿಧಿಸಿದೆ. "ಈ ಹೇಳಿಕೆಗಳು ಪಾಕಿಸ್ತಾನಕ್ಕೂ ಕೆಳಮಟ್ಟವನ್ನು ತಂದಿದೆ" ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಪಾಕಿಸ್ತಾನ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದರೆ ಅಸ್ಪೃಶ್ಯನಾಗಿ ಉಳಿಯಬೇಕಾಗುತ್ತದೆ ಎಂದು ಬಿಜೆಪಿ ಆಕ್ರೊಶ ಹೊರಹಾಕಿದೆ.












Click it and Unblock the Notifications