ಬಕ್ರೀದ್ : ಮಸೀದಿಗಳು ಬಂದ್, ಭಾರತ ಪಾಕ್ ಗಡಿಯಲ್ಲಿ ಸಿಹಿ ವಿನಿಮಯವಿಲ್ಲ
ನವದೆಹಲಿ, ಆಗಸ್ಟ್ 13:ಬಕ್ರೀದ್ ದಿನ ಸಾಮಾನ್ಯವಾಗಿ ಮುಸಲ್ಮಾನರು ಮಸೀದಿಗಳಿಗೆ ತೆರಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇಡೀ ಜಮ್ಮು ಕಾಶ್ಮೀರದ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು.
ಜಮ್ಮು ಮತ್ತು ಕಾಶ್ಮೀರ ಪಾಕ್ ಗಡಿಯಲ್ಲಿ ಸೈನಿಕರು ಪರಸ್ಪರ ಸಿಹಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಜಮ್ಮು ಕಾಶ್ಮೀರ ಅಕ್ಷರಶಃ ಸ್ಮಶಾನದಂತಾಗಿತ್ತು. ಎರಡೂ ದೇಶಗಳು ತಮ್ಮ ಸೈನಿಕರನ್ನು ಕಳುಹಿಸಿಕೊಡಲು ತಿರಸ್ಕರಿಸಿತ್ತು.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ತೀವ್ರಗೊಂಡ ಪ್ರತಿಭಟನೆ
ಭಾರತ ಸರ್ಕಾರವು ಸಂವಿಧಾನ ವಿಧಿ 370 ರದ್ದುಗೊಳಿಸಿದ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವೂ ರದ್ದುಗೊಂಡಿತ್ತು. ಇದಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈಗ ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿರದೆ ಕೇಂದ್ರಾಡಳಿತ ಪ್ರದೇಶವಾಗಿದೆ. ಇದಕ್ಕೆ ವಿಧಾನಸಭೆಯೂ ಕೂಡ ಇದೆ.
ಆದರೆ ವಿಶೇಷ ಸ್ಥಾನಮಾನ ಕಸಿದುಕೊಂಡಿರುವುದಕ್ಕೆ ಕೋಪಗೊಂಡಿರುವ ಪಾಕಿಸ್ತಾನ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿ ಕುಳಿತಂತಿದೆ. ಒಂದು ಕಡೆ ಏರೋಸ್ಪೇಸ್ಗೆ ಭಾರತದ ವಿಮಾನಗಳು ಬಾರದಂತೆ ನಿರ್ಬಂಧ ಹೇರಿದೆ. ಇನ್ನೊಂದೆಡೆ ಪಾಕಿಸ್ತಾನದಿಂದ ಬರುತ್ತಿದ್ದ ಸಂಜೋತಾ ಹಾಗೂ ಥಾರ್ ಎಕ್ಸ್ಪ್ರೆಸ್ನ್ನೂ ಸ್ಥಗಿತಗೊಳಿಸಿದೆ.
ಅಷ್ಟೇ ಅಲ್ಲದೆ ಹಬ್ಬ ಬೇಡ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಹೋರಾಡಿ ಎಂದು ಪಾಕಿಸ್ತಾನ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಮಸೀದಿಗಳು ಸೋಮವಾರ ತೆರೆಯಲೇ ಇಲ್ಲ. ಹಾಗೆಯೇ ಭಾರತ ಮತ್ತು ಪಾಕ್ ನಡುವೆ ಸಿಹಿ ವಿನಿಮಯ ಕೂಡ ಆಗಿಲ್ಲ.