'ಓಮಿಕ್ರಾನ್' ಭಾರತಕ್ಕೆ ಎಚ್ಚರಿಕೆ ಗಂಟೆಯಾಗಬಹುದು; ಸೌಮ್ಯ
ನವದೆಹಲಿ, ನವೆಂಬರ್ 28; ದಕ್ಷಿಣ ಆಫ್ರಿಕಾ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ಕಾಣಿಸಿಕೊಂಡ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ವಿವಿಧ ದೇಶಗಳಲ್ಲಿ ತಲ್ಲಣ ಉಂಟು ಮಾಡಿದೆ. ಇದರ ಬಗ್ಗೆ ಈಗಾಗಲೇ ಅಧ್ಯಯನಗಳು ಆರಂಭವಾಗಿವೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಸಂಶೋಧಕಿ ಡಾ. ಸೌಮ್ಯ ಸ್ವಾಮಿನಾಥನ್ ಎನ್ಡಿಟಿವಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಕೋವಿಡ್ -19ನ ಹೊಸ ರೂಪಾಂತರವು ಭಾರತದಲ್ಲಿ ಕೋವಿಡ್ ಸೂಕ್ತ ನಡವಳಿಕೆ ಕುರಿತು ಎಚ್ಚರಿಸುವ ಕರೆಯಾಗಿದೆ" ಎಂದು ಹೇಳಿದ್ದಾರೆ.
"ಕೋವಿಡ್ ವಿರುದ್ಧ ನಾವು ಜಾಗೃತವಾಗಿರಬೇಕು. ಮಾಸ್ಕ್ ಧರಿಸುವುದನ್ನು ಮುಂದುವರೆಸಬೇಕು. ಮಾಸ್ಕ್ ಧರಿಸುವುದು ನಮ್ಮ ಜೇಬಿನಲ್ಲಿ ಲಸಿಕೆಗಳು ಇದ್ದಂತೆ. ವಿಶೇಷವಾಗಿ ಒಳಾಂಗಣಗಳಲ್ಲಿ ಮಾಸ್ಕ್ ಧರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ" ಎಂದು ತಿಳಿಸಿದ್ದಾರೆ.

"ವಯಸ್ಕರು ಸಂಪೂರ್ಣವಾಗಿ ಲಸಿಕೆ ಪಡೆದಿರುವುದು, ಗುಂಪು ಸೇರುವುದನ್ನು ತಡೆಯುವುದು, ಅನಿಯಮಿತ ಬೆಳವಣಿಗೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಓಮಿಕ್ರಾನ್ ವಿರುದ್ಧ ಹೋರಾಡಲು ವಿಜ್ಞಾನಿಗಳು ನೀಡಿರುವ ಸಲಹೆಗಳಾಗಿದೆ" ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
"ಹೊಸ ಓಮಿಕ್ರಾನ್ ವಿರುದ್ಧದ ಹೋರಾಟಕ್ಕೆ ನಮಗೆ ವಿಜ್ಞಾನ ಆಧಾರಿತ ತಂತ್ರದ ಅಗತ್ಯವಿದೆ. ಡೆಲ್ಟಾಕ್ಕಿಂತಲೂ ಅತಿ ವೇಗವಾಗಿ ಈ ರೂಪಾಂತರಿ ಹರಡಬಹುದಾಗಿದೆ. ಈ ವೈರಸ್ ಹರಡುವಿಕೆ ಬಗ್ಗೆ ಕೆಲವೇ ದಿನಗಳಲ್ಲಿ ನಮಗೆ ತಿಳಿಯಲಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
"ವಿಶ್ವ ಆರೋಗ್ಯ ಸಂಸ್ಥೆ ಆತಂಕದ ರೂಪಾಂತರ ವೈರಸ್ ಎಂದು ಕರೆದಿದೆ. ಹಿಂದಿನ ರೂಪಾಂತರಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಆದರೂ ಇದು ಇತರ ತಳಿಗಳಿಗೆ ಹೋಲಿಸಿದರೆ ಹೆಚ್ಚು ಅಥವಾ ಕಡಿಮೆ ತೀವ್ರತರವಾಗಿದೆಯೇ? ಎಂಬುದು ತಜ್ಞರಿಗೆ ಇನ್ನೂ ತಿಳಿದಿಲ್ಲ" ಎಂದು ಹೇಳಿದ್ದಾರೆ.
"ಹೊಸ ರೂಪಾಂತರದ ಗುಣಲಕ್ಷಣಗಳನ್ನು ಗುರುತಿಸಲು ನಮಗೆ ಹೆಚ್ಚಿನ ಅಧ್ಯಯನಗಳು ಬೇಕಾಗುತ್ತವೆ. ಇತರ ಕೋವಿಡ್ ರೂಪಾಂತರಗಳೊಂದಿಗೆ ಹೋಲಿಕೆಗಳನ್ನು ಮಾಡಿ ಅಧ್ಯಯನ ಮಾಡಬೇಕಾಗುತ್ತದೆ" ಎಂದು ಬಗ್ಗೆ ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.
"ಹೊಸ ರೂಪಾಂತರಿ ಜೊತೆ ಹೋರಾಟ ಮಾಡಲು ಲಸಿಕೆ ಪಡೆಯುವುದು ನಮ್ಮ ಆದ್ಯತೆಯಾಗಿದೆ. ಅನುವಂಶಿಕ ರಚನೆಯನ್ನು ಕಂಡುಹಿಡಿಯುವ ಪ್ರಕ್ರಿಯೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖವಾಗಿದೆ. ಪ್ರಯಾಣ ನಿಷೇಧಗಳು ತಾತ್ಕಾಲಿಕವಾಗಿರಬೇಕು ಮತ್ತು ಅದನ್ನು ಆಗಾಗ ಪರಿಶೀಲಿಸಬೇಕು" ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದರು.
ಈಗಾಗಲೇ ಹೊಸ ರೂಪಾಂತರಿ ವೈರಸ್ ಜಗತ್ತಿನ ವಿವಿಧ ದೇಶಗಳಲ್ಲಿ ತಲ್ಲಣ ಉಂಟು ಮಾಡಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್, ಓಮಿಕ್ರಾನ್ ಜಾಗತಿಕವಾಗಿ ಕಾಳಜಿಯನ್ನು ಉಂಟುಮಾಡಿದೆ, ಕೋವಿಡ್ ಸಾಂಕ್ರಾಮಿಕದ ಎರಡು ವರ್ಷಗಳ ಬಳಿಕ ಈಗ ಆರ್ಥಿಕ ಚೇತರಿಕೆಯಾಗುತ್ತಿದೆ. ಹೊಸ ರೂಪಾಂತರಿಯಿಂದ ಪ್ರಯಾಣ ನಿರ್ಬಂಧ ಮುಂತಾದ ಕ್ರಮಗಳಿಂದ ಹಣಕಾಸು ಮಾರುಕಟ್ಟೆಗಳಿಗೆ ನಿರ್ಬಂಧ ಹೇರಿದಂತೆ ಆಗುತ್ತದೆ ಎಂದು ವರದಿ ಮಾಡಿದೆ.
ಅಧ್ಯಯನ ಅಗತ್ಯ; ಓಮಿಕ್ರಾನ್ ಬಗ್ಗೆ ಮುಂದಿನ ಕ್ರಮಗಳನ್ನು ನಿರ್ಧರಿಸುವುದಕ್ಕೂ ಮೊದಲು ಕ್ಲಿನಿಕಲ್ ಮಾಹಿತಿ ಕಲೆ ಹಾಕುವ ಕೆಲಸವಾಗಬೇಕಿದೆ. ಸೋಂಕಿಗೀಡಾದ ಸಮುದಾಯಗಳನ್ನು ಪತ್ತೆ ಮಾಡಿ ವಿಸ್ತೃತ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.
"ಪ್ರಯಾಣ ನಿರ್ಬಂಧ ವಿಧಿಸುವುದರಿಂದ ಅಥವ ಕೆಲವು ದೇಶಗಳಿಂದ ಬರುವವರನ್ನು ತಡೆಯುವುದರಿಂದ ಓಮಿಕ್ರಾನ್ ನಿಗ್ರಹ ಅಥವ ಹರಡದಂತೆ ನಿಯಂತ್ರಿಸಲು ಸಹಕಾರಿಯಾಗುವುದಿಲ್ಲ. ಪ್ರಕರಣ ಪತ್ತೆಯಾದ ಸಮುದಾಯಗಳನ್ನು ಗುರುತಿಸಿ ಜೆನೊಮಿಕ್ ಸೀಕ್ವೆನ್ಸ್ ಅಧ್ಯಯನ ಮಾಡಬೇಕು ಎಂದು ತಜ್ಞರು ತಿಳಿಸಿದ್ದಾರೆ.
ಓಮಿಕ್ರಾನ್ ಈಗ ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಬ್ರಿಟನ್ನಲ್ಲಿ ವರದಿಯಾಗಿದೆ. ದೊಡ್ಡ ಮಟ್ಟದಲ್ಲಿ ಕ್ಲಿನಿಕಲ್ ಮಾಹಿತಿ ಸಂಗ್ರಹವಾಗಬೇಕು. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಈ ತಳಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹಿಂದಿನ ತಳಿಗಿಂತ ವೇಗವಾಗಿ ಹಬ್ಬುತ್ತಿದೆ. ಆದ್ದರಿಂದ ಆರ್ಟಿಪಿಸಿಆರ್ ಪರೀಕ್ಷೆಗೆ ಆದ್ಯತೆ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
(ಕೃಪೆ; ಎನ್ಡಿಟಿವಿ)












Click it and Unblock the Notifications