ದುರ್ಗಮ ಹಾದಿಯಲ್ಲಿ 15 ಕಿ.ಮೀ ನಡೆದು ಕುಗ್ರಾಮ ತಲುಪಿದ ಅಧಿಕಾರಿ
ಸಿಯಾಹಾ(ಮಿಜೋರಂ), ಆಗಸ್ಟ್ 31: ಆಡಳಿತಾಧಿಕಾರಿಗಳು ಬಹುತೇಕ ಎಸಿ ಕಚೇರಿಯಲ್ಲಿ, ಎಸಿ ಕಾರಿನಲ್ಲಿ ತಿರುಗುವುದೇ ಹೆಚ್ಚು ಆದರೆ ಇಲ್ಲೊಬ್ಬ ಅಧಿಕಾರಿ ಕುಗ್ರಾಮವೊಂದನ್ನು ಸಂದರ್ಶಿಸಲು 15 ಕಿ.ಮೀ ದುರ್ಗಮ ರಸ್ತೆಯನ್ನು ಕಾಲ್ನಡಿಗೆಯಲ್ಲಿ ಸವೆಸಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಐಎಎಸ್ ಅಧಿಕಾರಿ ಭೂಪೇಶ್ ಚೌಧರಿ ಅವರು ತಮ್ಮ ಆಡಳಿತ ವ್ಯಾಪ್ತಿಯ ಅಡಿಯಲ್ಲಿ ಬರುವ ಕುಗ್ರಾಮ ತಿಸೋಪಿ ಎಂಬ ಹಳ್ಳಿಗೆ ಹದಿನೈದು ಕಿ.ಮೀ ನಡೆದು ಹೋಗಿದ್ದಾರೆ. ತಿಸೋಪಿ ಹಳ್ಳಿಯನ್ನು ತಲುಪುವ ಹಾದಿ ದುರ್ಗಮವಾದ ಬೆಟ್ಟ ಗುಡ್ಡಗಳು, ಕಾಡು ಹಾದು ಹೋಗಬೇಕಾಗಿದೆ. ಅದನ್ನೆಲ್ಲವನ್ನೂ ದಾಟಿ ಅವರು ಹಳ್ಳಿ ತಲುಪಿದ್ದಾರೆ.
ತಮ್ಮ ಗ್ರಾಮಕ್ಕೆ ಬಂದ ಅತಿಥಿಯನ್ನು ಹಳ್ಳಿಯ ಜನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅವರಿಗೆ ಹಾರ ಹಾಕಿ, ಅಧಿಕಾರಿಯನ್ನು ಬಿದಿರಿನ ಪಲ್ಲಕ್ಕಿಯ ಮೇಲೆ ಕೂರಿಸಿ ಹಳ್ಳಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಹಳ್ಳಿಗೆ ಅಧಿಕಾರಿಯೊಬ್ಬರು ಬಂದಿರುವುದಂತೆ.

ಐಎಎಸ್ ಅಧಿಕಾರಿ ಬೆಟ್ಟ ಗುಡ್ಡಗಳು, ಕಣಿವೆಗಳ ಪಕ್ಕ ಹಾದು ಬರುತ್ತಿರುವ ಚಿತ್ರಗಳು, ಹಳ್ಳಿಗರು ಅಧಿಕಾರಿಗೆ ನೀಡಿದ ಅದ್ಧೂರಿ ಸ್ವಾಗತದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ವತಃ ಭೂಪೇಶ್ ಚೌದರಿ ಸಹ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಿಸೋಪಿ ಹಳ್ಳಿಯಲ್ಲಿ ಸುಮಾರು 400 ಜನರು ವಾಸವಿದ್ದಾರೆ. ಈ ಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದಾಗಿ ಅಧಿಕಾರಿಯು ಹಳ್ಳಿಗೆ ಭೇಟಿ ನೀಡಿದ್ದರು.












Click it and Unblock the Notifications