ಸ್ವಯಂ ಘೋಷಿತ ದೇವ ಮಾನವ ಸಾರಥಿ ಬಾಬಾ ಬಂಧನ
ಭುವನೇಶ್ವರ, ಆಗಸ್ಟ್ .8: ವಿವಾದಿತ ಸ್ವಯಂ ಘೋಷಿತ ದೇವ ಮಾನವ ಸಾರಥಿ ಬಾಬಾನನ್ನು ಒಡಿಶಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮೊದಲು ಸುಮಾರು 14 ಗಂಟೆಗಳ ಕಾಲ ಬಾಬಾನನ್ನು ವಿಚಾರಣೆಗೊಳಪಡಿಸಿದ್ದು ವಿಶೇಷವಾಗಿತ್ತು.
ಬಾಬಾನ ಬಂಧನಕ್ಕೆ ಆಗ್ರಹಿಸಿ ಒಡಿಶಾ ರಾಜ್ಯದಲ್ಲಿ ಕಳೆದ ಮುರ್ನಾಲ್ಕು ದಿನಗಳಿಂದ ಸಾರ್ವಜನಿಕರಿಂದ ಭಾರಿ ಪ್ರತಿಭಟನೆ, ಆಗ್ರಹಪೂರ್ವಕ ಮನವಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಾಬಾ ಇದ್ದ ಕೇಂದ್ರಪಾರದ ಆಶ್ರಮಕ್ಕೆ ತೆರಳಿದರು. ಶನಿವಾರ ದಿನ ಕಳೆದು ರಾತ್ರಿಯಾದರೂ ವಿಚಾರಣೆ ಮುಗಿಯಲಿಲ್ಲ. ಕೊನೆಗೆ ಬಾಬಾ ಬಂಧಿಸಿ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಪ್ರಕಟಿಸಿದ ಮೇಲೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬಾಬಾನ ವಿರುದ್ಧ ಪೋರ್ಜರಿ, ವಂಚನೆ ಹಾಗೂ ಕ್ರಿಮಿನಲ್ ಹಸ್ತಕ್ಷೇಪ ಸೇರಿದಂತೆ ಅನೇಕ ಪ್ರಕರಣಗಳಿವೆ. ಶ್ರೀಮದ್ ಸಾರಥಿ ದೇವ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಈಗಾಗಲೇ ಅಪರಾಧ ವಿಭಾಗಕ್ಕೆ ಆದೇಶ ನೀಡಿದ್ದರು. ಮೂವರ ತಂಡವೊಂದು ಸಾರಥಿಯ ಆಶ್ರಮವನ್ನು ತಲುಪಿದ್ದು, ತನಿಖೆ ಆರಂಭಿಸಿದೆ.
ಖಾಸಗಿ ಟಿವಿ ವಾಹಿನಿಯೊಂದು ಬಾಬಾನ ಚಿತ್ರವನ್ನು ಪ್ರದರ್ಶಿಸಿ, ಆತ ಹೈದರಾಬಾದ್ನ ಹೊಟೇಲೊಂದರಲ್ಲಿ ಮಹಿಳೆಯೊಬ್ಬಳೊಂದಿಗೆ 2 ದಿನಗಳನ್ನು ಕಳೆದಿದ್ದಾನೆ ಎಂದು ಆರೋಪಿಸಿತ್ತು. ನಂತರ ಒಡಿಶಾದಾದ್ಯಂತ ಆತನ ಬಂಧನಕ್ಕಾಗಿ ಜನರು 3 ದಿನಗಳಿಂದ ಚಳವಳಿ ನಡೆಸುತ್ತಿದ್ದರು.
ಬಾಬಾರೊಂದಿಗೆ ಹೈದರಾಬಾದ್ಗೆ ಹೋಗಿದ್ದ ಮಹಿಳೆಯನ್ನು ತನ್ನ ಪತ್ನಿಯೆಂದು ಆತ ಹೊಟೇಲ್ ದಾಖಲೆ ಪುಸ್ತಕದಲ್ಲಿ ನಮೂದಿಸಿದ್ದ ಎಂದು ತಿಳಿದು ಬಂದಿದೆ. ಈ ನಡುವೆ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಸಾರಥಿ ಬಾಬಾ, ಸಂಬಂಧಿತ ಟಿವಿ ವಾಹಿನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದಾನೆ.