ನೂಪುರ್ ವಿವಾದ: ದೆಹಲಿಯಲ್ಲಿ ಪ್ರತಿಭಟನೆ- ಕೋವಿಡ್ ನಿಯಮಗಳ ಅಡಿಯಲ್ಲಿ ಪ್ರಕರಣ
ಹೊಸದಿಲ್ಲಿ ಜೂನ್ 11: ಶುಕ್ರವಾರ (ಜೂನ್ 10) ರಾಜಧಾನಿಯ ಜಾಮಾ ಮಸೀದಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರ ವಿರುದ್ಧ ಕೊರೊನಾ ವೈರಸ್ನ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಸಭೆಗಳು ಮತ್ತು ಪ್ರತಿಭಟನೆಯನ್ನು ಮಾಡಿದ್ದಕ್ಕೆ ದಿಲ್ಲಿ ಪೊಲೀಸರು ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ನಂತರ ಸುಮಾರು 500 ಪ್ರತಿಭಟನಾಕಾರರು ಜಮಾ ಮಸೀದಿ ಮತ್ತು ಸುತ್ತಮುತ್ತ ಜಮಾಯಿಸಿ, ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಎತ್ತಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಮಸೀದಿಯ ಗೇಟ್ ಒಂದರ ಬಳಿಯ ಮೆಟ್ಟಿಲುಗಳ ಮೇಲೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು ಮತ್ತು ಇದು ಸುಮಾರು 15 ರಿಂದ 20 ನಿಮಿಷಗಳ ಕಾಲ ನಡೆಯಿತು. ನಂತರ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಲಾಗಿದೆ ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮ
ಹಿರಿಯ ಪೊಲೀಸ್ ಅಧಿಕಾರಿ ಶ್ವೇತಾ ಚೌಹಾಣ್ ಪ್ರಕಾರ, "ಸುಮಾರು 1,500 ಜನರು ಶುಕ್ರವಾರದ ಪ್ರಾರ್ಥನೆಗಾಗಿ ಮಸೀದಿಯಲ್ಲಿ ಜಮಾಯಿಸಿದ್ದರು. ಪ್ರಾರ್ಥನೆಗಳು ಶಾಂತಿಯುತವಾಗಿ ಮುಗಿದಾಗ, ಕೆಲವರು ಹೊರಗೆ ಬಂದು, ಫಲಕಗಳನ್ನು ತೋರಿಸಲು ಮತ್ತು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ನಂತರ ಕೆಲವರು ಅವರೊಂದಿಗೆ ಸೇರಿಕೊಂಡರು. ಪ್ರತಿಭಟನಾಕಾರರ ಸಂಖ್ಯೆ ಸುಮಾರು 300ಕ್ಕೂ ಹೆಚ್ಚಾಯಿತು" ಎಂದಿದ್ದಾರೆ.
"ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಜಾಮಾ ಮಸೀದಿಯಲ್ಲಿ ಯಾವಾಗಲೂ ಪೊಲೀಸ್ ನಿಯೋಜನೆ ಇರುತ್ತದೆ. ಪ್ರತಿಭಟನಾಕಾರರನ್ನು 10 ರಿಂದ 15 ನಿಮಿಷಗಳಲ್ಲಿ ಚದುರಿಸಲಾಗಿದೆ ಮತ್ತು ಪರಿಸ್ಥಿತಿ ಶಾಂತಿಯುತವಾಗಿದೆ. ಘಟನೆಯ ಬಗ್ಗೆ ಕಾನೂನು ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ನಾವು ಕೆಲವು ಕಿಡಿಗೇಡಿಗಳನ್ನು ಗುರುತಿಸಿದ್ದೇವೆ ಮತ್ತು ನಮ್ಮ ತಂಡಗಳು ಇತರರನ್ನು ಗುರುತಿಸಲು ಕೆಲಸ ಮಾಡುತ್ತಿದೆ"ಎಂದು ಅವರು ಹೇಳಿದರು.

ಓವೈಸಿಯ ಜನರು ಪ್ರತಿಭಟನೆಯಲ್ಲಿ ಭಾಗಿ - ಶಾಹಿ ಇಮಾಮ್
ಇದೇ ವೇಳೆ ಜಾಮಾ ಮಸೀದಿ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಪ್ರತಿಭಟನೆಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. "ಇದನ್ನು ಯಾರು ಪ್ರಾರಂಭಿಸಿದರು ಎಂಬುದು ನಮಗೆ ತಿಳಿದಿಲ್ಲ. ಶುಕ್ರವಾರದ ಪ್ರಾರ್ಥನೆಯ ನಂತರ ಕೆಲವರು ಘೋಷಣೆಗಳನ್ನು ಕೂಗಿದರು ಮತ್ತು ದೊಡ್ಡ ಗುಂಪು ಜಮಾಯಿಸಿತು. ಅವರು ಶೀಘ್ರದಲ್ಲೇ ಚದುರಿದರು. ಈಗ ಎಲ್ಲವೂ ಸರಿಯಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಜಾಮಾ ಮಸೀದಿಯ ಇಮಾಮ್ ಈ ಪ್ರತಿಭಟನೆಗೆ AIMIM ಅನ್ನು ದೂಷಿಸಿದ್ದಾರೆ. ಶಾಹಿ ಇಮಾಮ್ ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿ, "ಈ ಜನರು ಯಾರೆಂದು ನಮಗೆ ತಿಳಿದಿಲ್ಲ. ಅವರು ಎಐಎಂಐಎಂ ಅಥವಾ ಓವೈಸಿಯವರಿಗೆ ಸಂಬಂಧಿಸಿದವರು ಎಂದು ನಾನು ಭಾವಿಸುತ್ತೇನೆ. ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನೀವು ಬಯಸಿದರೆ , ನೀವು ಪ್ರತಿಭಟನೆ ಮಾಡಬಹುದು ಆದರೆ ನಾವು ಅವರನ್ನು ಬೆಂಬಲಿಸುವುದಿಲ್ಲ" ಎಂದು ಈಗಾಗಲೇ ಓವೈಸಿಗೆ ಸ್ಪಷ್ಟಪಡಿಸಿರುವುದಾಗಿ ಶಾಹಿ ಇಮಾಮ್ ಹೇಳಿದ್ದಾರೆ.

ಸರ್ಕಾರದ ಮೇಲೆ ಒತ್ತಡ
ಟಿವಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಸೌದಿ ಅರೇಬಿಯಾ, ಕುವೈತ್, ಕತಾರ್ ಮತ್ತು ಇರಾನ್ನಂತಹ ದೇಶಗಳ ಪ್ರತಿಭಟನೆಯೊಂದಿಗೆ ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಳ ಮೇಲಿನ ಗಲಾಟೆ ಉಲ್ಬಣಗೊಂಡಿತು. ವಿರೋಧ ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ತನ್ನ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸಲಾಗಿದೆ. ಜೊತೆಗೆ ತಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ಶರ್ಮಾ ವಿರುದ್ಧ ಪ್ರತ್ಯೇಕ ಪ್ರಕರಣ
ದೆಹಲಿ ಪೊಲೀಸರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ದ್ವೇಷಿ ಯತಿ ನರಸಿಂಹಾನಂದ ಸೇರಿದಂತೆ 31 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ದ್ವೇಷವನ್ನು ಹರಡುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಶರ್ಮಾ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications