ಗುಜರಾತಿನಲ್ಲಿ ಬಿಜೆಪಿ 115 ಸ್ಥಾನ ಗೆಲ್ಲಬಹುದಿತ್ತು, ಆದರೆ ಎಡವಿದ್ದೆಲ್ಲಿ..?!
ಅಹ್ಮದಾಬಾದ್, ಡಿಸೆಂಬರ್ 20: ಗುಜರಾತ್ ವಿಧಾನ ಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ಗೆದ್ದ ಖುಷಿಯೇನೂ ಬಿಜೆಪಿಗೆ ಇದ್ದಂತೆ ಕಾಣಲಿಲ್ಲ!
ವೋಟ್ ಶೇರ್ ಲೆಕ್ಕದಲ್ಲಿ ನಾವು 2012 ರ ಚುನಾವಣೆಗಿಂತ ಹೆಚ್ಚು ಸಾಧನೆ ಮೆರೆದಿದ್ದೇವೆ, ಜಿಎಸ್ಟಿ, ಅಪನಗದೀಕರಣದ ಅಸಮಾಧಾನದ ನಡುವಲ್ಲೂ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂಬಿತ್ಯಾದಿ ಹೇಳಿಕೆಗಳೆಲ್ಲ ಕೇವಲ ಸಮಜಾಯಿಷಿ ಆದೀತು ಅಷ್ಟೆ! ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಹಾಗೆ! ಆದರೆ ಈ ಫಲಿತಾಂಶ ಬಿಜೆಪಿಗೆ ತನ್ನ ಕಾರ್ಯಶೈಲಿ, ಆಡಳಿತವೈಖರಿಯನ್ನು ಮತ್ತೊಮ್ಮೆ ನಿಕಷಕ್ಕೆ ಹಚ್ಚುವಂತೆ ಮಾಡಿದೆ.
2012 ರ ವಿಧಾನಸಭೆ ಚುನಾವಣೆಯಲ್ಲಿ 115 ಸ್ಥಾನ ಗೆದ್ದಿದ್ದ ಬಿಜೆಪಿಗೆ ಈ ಬಾರಿ ಮೂರಂಕಿ ದಾಟುವುದಕ್ಕೂ ಸಾಧ್ಯವಾಗಲಿಲ್ಲ ಎಂಬುದು ಚಿಂತಿಸಬೇಕಾದ ವಿಷಯವೇ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಹೊರಬಂದ ತರುವಾಯ, ಒಬ್ಬ ಸಮರ್ಥ ನಾಯಕರನ್ನು ಆರಿಸುವಲ್ಲಿ ಗುಜರಾತ್ ಬಿಜೆಪಿ ಸಫಲವಾಗಿಲ್ಲದಿರುವುದೂ ಇದಕ್ಕೆ ಕಾರಣವಿದ್ದೀತು! ಬಿಜೆಪಿಯ ಸಣ್ಣ ಪುಟ್ಟ ದೌರ್ಬಲ್ಯಗಳನ್ನೂ ಈ ಬಾರಿ ಕಾಂಗ್ರೆಸ್ ಜಾಣತನದಿಂದ ಬಳಸಿಕೊಂಡಿದ್ದಿರಬಹುದು. ಒಟ್ಟಿನಲ್ಲಿ ಈ ಎಲ್ಲಾ ಕಾರಣಕ್ಕೆ ಬಿಜೆಪಿಯ ಸಾಧನೆ ಕಳೆದ ಬಾರಿಗೆ ಹೋಲಿಸಿದರೆ ಪೇಲವವೇ.
ಹಾಗಾದರೆ ಗುಜರಾತಿನಲ್ಲಿ 115 ಸ್ಥಾನ ಗೆಲ್ಲಲು ಸಾಧ್ಯವಿದ್ದರೂ, ಬಿಜೆಪಿಗೆ ಅದು ಸಾಧ್ಯವಾಗದಿರುವುದಕ್ಕೆ ಮುಖ್ಯ ಕಾರಣಗಳೇನು...?

ಬಿಜೆಪಿಗೆ ನೋಟಾ ಕಾಟ!
ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ನೋಟಾ(NOTA- None of the Above) ಆಯ್ಕೆಯನ್ನು ಪರಿಚಯಿಸಲಾಗಿತ್ತು. ಇದೇ ಬಿಜೆಪಿಗೆ ಮುಳುವಾಯ್ತಾ...? ಗುಜರಾತಿನಲ್ಲಿ 5 (5,24,709) ಲಕ್ಷಕ್ಕೂ ಹೆಚ್ಚು ಮತಗಳು ನೋಟಾಕ್ಕೆ ಬಿದ್ದಿವೆ ಅಂದ್ರೆ ನಂಬುತ್ತೀರಾ?! ಈ ಐದು ಲಕ್ಷ ಮತಗಳೂ ಬಿಜೆಪಿಗೇ ಬೀಳುವವಾಗಿದ್ದಿರಬಹುದು ಎಂಬುದೂ ಒಂದು ಅಂದಾಜು. ಅಂದರೆ ಬಿಜೆಪಿಗೆ ಬೀಳಬೇಕಿದ್ದ 5ಲಕ್ಷ ಮತಗಳು ನೋಟಾ ಖಾತೆ ಸೇರಿವೆ! ಇದು ಬಿಜೆಪಿಗೆ ಬಹುದೊಡ್ಡ ನಷ್ಟವೆನ್ನಿಸಿದೆ!

ಕಡಿಮೆ ಅಂತರದಲ್ಲೇ ಸೋಲು!
ಇನ್ನೂ ಅಚ್ಚರಿ ಎಂದರೆ ಬಿಜೆಪಿ ಗೆಲ್ಲಬಹುದು ಎಂದು ತಿಳಿದಿದ್ದ ಹಲವು ಕ್ಷೇತ್ರಗಳಲ್ಲೆಲ್ಲ ಸೋತಿದ್ದು, ಕೆಲವೇ ನೂರು ಮತಗಳ ಅಮತರದಲ್ಲಿ! ಆ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಬಿಜೆಪಿಗೆ ಅಗತ್ಯವಿದ್ದ ವೋಟುಗಳಿಗಿಂತ ಹೆಚ್ಚು ಮತಗಳು ನೋಟಾಕ್ಕೆ ಬಿದ್ದಿರುವುದು ಮತ್ತೊಂದು ಅಚ್ಚರಿಯ ಸಂಗತಿ. ಅಂದರೆ ಅಲ್ಲೂ ನೋಟಾಕ್ಕೆ ಹೋಗುವ ಮತ ಬಿಜೆಪಿಯತ್ತ ತಿರುಗಿದ್ದರೆ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತಿತ್ತು! ಚೋಟಾ ಉದಯ್ಪುರ, ದಸಾಡಾ, ದಿಯೋದರ್, ಧಾನೆರಾ, ಜಾಮ್ಜೋದ್ಪುರ, ಮಾನ್ಸಾ, ಮೊಡಸಾ, ಮಾರ್ಬಿ, ಮೊರ್ವಾ ಹಡಾಫ್ ಸೇರಿದಂತೆ ಹಲವೆಡೆ ಬಿಜೆಪಿಯನ್ನು ಸೋಲಿಸಿದ ಮತಗಳ ಅಂತರಕ್ಕಿಂತ ನೋಟಾಕ್ಕೆ ಬಿದ್ದ ಮತಗಳೇ ಹೆಚ್ಚಿವೆ!

ಬಿಜೆಪಿ ಮೇಲಿನ ಕೋಪಕ್ಕೆ ನೋಟಾ ಒತ್ತಿದ ವ್ಯಾಪಾರಿಗಳು!
ಜಿಎಸ್ಟಿ ಮತ್ತು ಅಪನಗದೀಕರಣದಿಂದಾಗಿ ಹೆಚ್ಚು ನಷ್ಟ, ಕಷ್ಟ ಅನುಭವಿಸಿದ ವರ್ತಕರು ಮತ್ತು ಪಾಟೀದಾರ್ ಸಮುದಾಯದ ಮತದಾರರು, ಬಿಜೆಪಿ ಮೇಲಿನ ಕೋಪಕ್ಕೆ ನೋಟಾ ಆಯ್ಕೆ ಒತ್ತಿಬಿಟ್ಟಿದ್ದಾರೆ ಎಂಬ ವಿಶ್ಲೇಷಣೆಯನ್ನೂ ಅಲ್ಲಗಳೆಯುವಂತಿಲ್ಲ. ಕೆಲವು ಕಡೆಗಳಲ್ಲಿ ಬಿಜೆಪಿ ತಪ್ಪು ಮಾಡಿದ್ದರೆ, ಮತ್ತಷ್ಟು ಕಡೆ ಜನರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಕಾಂಗ್ರೆಸ್ ಯಶಸ್ವಿಯಾಯಿತು. ಇದರಿಂದಾಗಿ ಬಿಜೆಪಿಗೆ ನಷ್ಟವಾಯಿತು.

ರಾಹುಲ್ ಗಾಂಧಿ ಮ್ಯಾಜಿಕ್ ಅಲ್ಲವೇ ಅಲ್ಲ!
ಎಷ್ಟೋ ಜನ ಹೇಳುವಂತೆ, ಗುಜರಾತಿನಲ್ಲಿ ನಡೆದಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮ್ಯಾಜಿಕ್ ಅಲ್ಲವೇ ಅಲ್ಲ. ಬದಲಾಗಿ ಬಿಜೆಪಿ ಮಾಡಿಕೊಂಡ ಎಡವಟ್ಟುಗಳೇ ಅದಕ್ಕೆ ಮುಳುವಾಯಿತು. ಇದರಿಂದ ಕಾಂಗ್ರೆಸ್ ಗೆ ಲಾಭವಾಯಿತೇ ವಿನಃ, ಕಾಂಗ್ರೆಸ್ ಗುಜರಾತಿನಲ್ಲಿ ಛಾಪು ಮೂಡಿಸುವುದಕ್ಕೆ ಮಾಡಿದ ಘನಂದಾರಿ ಪ್ರಯತ್ನಗಳೇನೂ ಇರಲಿಲ್ಲ ಅನ್ನೋದು ಕೆಲವರ ಅಭಿಪ್ರಾಯ. ಏನೇ ಆಗಲಿ, ಬಿಜೆಪಿ ಗುಜರಾತಿನಲ್ಲಿ ಬಹುಮತ ಪಡೆದು ಸರ್ಕಾರ ರಚಿಸುತ್ತಿದೆ. ಆದರೆ ಮುಂಬರುವ 2019 ರ ಲೋಕಸಭಾ ಚುನಾವಣೆಗೆ ಮತ್ತು ಐದು ವರ್ಷದ ನಂತರ ನಡೆವ ವಿಧಾನ ಸಭೆ ಚುನಾವಣೆಗೆ ಈಗಿನಿಂದಲೇ ತಂತ್ರಗಾರಿಕೆ ಹೆಣೆಯುವುದಂತೂ ಬಿಜೆಪಿ ಅನಿವಾರ್ಯವಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications