ಪ್ರತ್ಯೇಕ ಪಕ್ಷ ಕಟ್ಟುವುದಿಲ್ಲ, ಪಕ್ಷ ಒಡೆಯಲು ಬಿಡಲ್ಲ: ಮುಲಾಯಂ
ಲಖನೌ, ಜ. 11: ಸಮಾಜವಾದಿ ಪಕ್ಷದಲ್ಲಿ ತಮಗೆ ಹಾಗೂ ತಮ್ಮ ಪುತ್ರ ಅಖಿಲೇಶ್ ಯಾದವ್ ನಡುವೆ ಉಲ್ಬಣಿಸಿರುವ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಯಾವುದೇ ಹೊಸ ಪಕ್ಷ ಕಟ್ಟುವುದಿಲ್ಲ ಎಂದು ಆ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈವರೆಗೆ ನಡೆದಿರುವ ಎಲ್ಲಾ ಬೆಳವಣಿಗಳಿಂದ ನೊಂದಿರಬಹುದಾದ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದರು.

"ಸಮಾಜವಾದಿ ಪಕ್ಷದ ಹುಟ್ಟಿನ ಹಿಂದೆ ಹಲವಾರು ಕಾರ್ಯಕರ್ತರ ಪರಿಶ್ರಮ, ತ್ಯಾಗಗಳಿವೆ. ಈ ಪಕ್ಷವನ್ನು ಕಟ್ಟುವಾಗ ನಾನೂ ಕಷ್ಟಪಟ್ಟಿದ್ದೆ. ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದ್ದೆ. ಆಗಿನ್ನೂ ಅಖಿಲೇಶ್ ಯಾದವ್ ಕೇವಲ ಎರಡೂವರೆ ವರ್ಷದ ಮಗು. ಹಾಗಾಗಿ, ಪಕ್ಷದ ಹುಟ್ಟಿನ ಹಿಂದೆ ಸರ್ವರ ಶ್ರಮವಿದೆ. ಇನ್ನು ಮುಂದೆಯೂ ಪಕ್ಷದ ಉಳಿವಿನಲ್ಲೇ ಎಲ್ಲರ ನೆಮ್ಮದಿಯಿದೆ. ಹಾಗಾಗಿ, ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ವಿಧಾನಸಭೆ ಚುನಾವಣೆ ಎದುರಿಸಬೇಕಿದೆ" ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನೇ ಏಕೆ ಮತ್ತೆ ಪಕ್ಷದ ಸಿಎಂ ಅಭ್ಯರ್ಥಿಯನ್ನಾಗಿಸಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ಬಹುಮತ ಗಳಿಸಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರುತ್ತದೆಂಬ ವಿಶ್ವಾಸದಲ್ಲಿ ಆ ರೀತಿ ಘೋಷಿಸಿರುವುದಾಗಿ ತಿಳಿಸಿದರು.












Click it and Unblock the Notifications