ಶಾಲೆಯಲ್ಲಿ ಬಿಸಿಯೂಟ ಸಿಗದಿದ್ದಕ್ಕೆ ಇಲಿ, ಅಳಿಲುಗಳನ್ನು ತಿಂದ ಬಾಲಕಿ
ಸಾಹೇಬ್ ಗಂಜ್ (ಜಾರ್ಖಂಡ್), ಮಾರ್ಚ್ 17: ಮಧ್ಯಾಹ್ನ ಬಿಸಿಯೂಟದ ಹೆಸರಿನಲ್ಲಿ ಲೂಟಿಕೋರರ ದಂಧೆಯ ಕರಾಳ ಮುಖವೊಂದು ಜಾರ್ಖಂಡ್ ನಲ್ಲಿ ಬಹಿರಂಗವಾಗಿದೆ. ಇಲ್ಲಿನ ಸಾಹೇಬ್ ಗಂಜ್ ನ ಶಾಲೆಯೊಂದಕ್ಕೆ ಸೇರಿದ 9 ವರ್ಷ ವಯಸ್ಸಿನ ಪಿಂಕಿ ಪಹರೀನ್ ಎಂಬ ಬಾಲಕಿ ತನ್ನ ನಿತ್ಯದ ಹಸಿವನ್ನು ನೀಗಿಸಿಕೊಳ್ಳಲು ಇಲಿ, ಹೆಗ್ಗಣ ಹಾಗೂ ಅಳಿಲುಗಳನ್ನು ತಿನ್ನುತ್ತಾಳೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.
ಈ ರಾಜ್ಯದ ಸಾಹೇಬ್ ಗಂಜ್ ಜಿಲ್ಲೆಯ ರಾಜ ಮಹಲ್ ಹಿಲ್ಸ್ ನ ಚುಹಾ ಪಹಾರ್ ಎಂಬಲ್ಲಿಯೂ ಒಂದು ಪ್ರಾಥಮಿಕ ಶಾಲೆಯಿದೆ. ಅಲ್ಲಿಗೂ ಶಾಲಾ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯೂ ಇದೆ. ಆದರೆ, ಆ ಯೋಜನೆಯಿರುವುದು ಸರ್ಕಾರದ ಫೈಲುಗಳಲ್ಲಿ ಮಾತ್ರ.
ಫೈಲುಗಳ ಪ್ರಕಾರ, ಈಕೆಗೆ ಪ್ರತಿ ದಿನ ಅನ್ನ, ಸಾಂಬಾರು, ಹಸಿರು ತರಕಾರಿಗಳ ಪಲ್ಯ ಸಿಗಬೇಕು. ಆದರೆ, ಇದ್ಯಾವುದೂ ಈಕೆಗೆ ಸಿಕ್ಕಿಲ್ಲ. ಹಾಗಾಗಿಯೇ, ಆಕೆ ಇಲಿ, ಹೆಗ್ಗಣಗಳನ್ನು ತಿನ್ನುವಂಥ ಪರಿಸ್ಥಿತಿ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಾಲಿ ಚಾಲ್ತಿಯಲ್ಲಿರುವ ಬಜೆಟ್ ಪ್ರಕಾರ, ಜಾರ್ಖಂಡ್ ಸರ್ಕಾರ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆಂದು ಕಳೆದ ಹಣಕಾಸು ವರ್ಷದಲ್ಲಿ 10 ಸಾವಿರ ಕೋಟಿ ರು. ಘೋಷಿಸಿತ್ತು. ಆದರೆ, ಇದ್ಯಾವುದೂ ಅವರಿಗೆ ಸಿಕ್ಕಿಲ್ಲ.