ಇತ್ತೀಚಿನ ಹೆದ್ದಾರಿ ಯೋಜನೆಗಳಿಗೆ ಚೀನಾ ಹಣ ಹೂಡಿಕೆ ಮಾಡಿಲ್ಲ: ಗಡ್ಕರಿ
ನವದೆಹಲಿ, ಸೆಪ್ಟೆಂಬರ್ 21: ಇತ್ತೀಚಿನ ಹೆದ್ದಾರಿ ಯೋಜನೆಗಳಿಗೆ ಚೀನಾ ಕಂಪನಿಗಳು ಹಣ ಹೂಡಿಕೆ ಮಾಡಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಲ್ಲದೆ ಚೀನಾದ ಕಂಪನಿಗಳು ಭಾರತದ ಹೈವೇ ಪ್ರಾಜೆಕ್ಟುಗಳಲ್ಲಿ ಹಣ ಹೂಡಿಕೆ ಮಾಡಲು ನಿರ್ಬಂಧ ವಿಧಿಸಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ನಿತಿನ್ ಗಡ್ಕರಿ ಭಾರತ ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚು ಮಾಡುವ ಬಗ್ಗೆ ಒಲವು ತೋರಿದ್ದರು ಎನ್ನುವುದು ಗಮನಾರ್ಹ.
ಜುಲೈ 2020ರಲ್ಲಿ ಚೀನಾ ಜೊತೆ ಗಡಿ ಸಂಘರ್ಷ ಏರ್ಪಟ್ಟಾಗ ಭಾರತ, ಇನ್ನುಮುಂದೆ ತನ್ನ ನೆಲದಲ್ಲಿ ಚೀನಾ ಸಂಸ್ಥೆಗಳು ಹೂಡಿಕೆ ಮಾಡಲು ಬಿಡುವುದಿಲ್ಲ ಎನ್ನುವ ನಿರ್ಧಾರ ತಳೆದಿತ್ತು.

ಭಾರತ-ಚೀನಾ ಗಡಿ ಬಿಕ್ಕಟ್ಟು ಎರಡೂ ದೇಶಗಳ ನಡುವಣ ವ್ಯಾಪಾರ ವಹಿವಾಟಿನ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಸುಳಿವನ್ನು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಈ ಹಿಂದೆಯೇ ನೀಡಿದ್ದರು.
ಭಾರತದ ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ ಚೀನಾದ ಕಂಪನಿಗಳಿಗೆ ಅವಕಾಶ ಕೊಡುವುದಿಲ್ಲ, ಜಂಟಿ ಯೋಜನೆಗಳಿಂದಲೂ ಚೀನಾವನ್ನು ಹೊರಗೆ ಇಡಲಾಗುವುದು ಎಂದು ಅವರು ಹೇಳಿದ್ದರು.
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ (ಎಂಎಸ್ಎಂಇ) ಚೀನಾ ಹೂಡಿಕೆದಾರರು ಪ್ರವೇಶಿಸದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದೂ ಸುದ್ದಿ ಸಂಸ್ಥೆ ಪಿಟಿಐಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದರು.
ಚೀನಾದ ಕಂಪನಿಗಳನ್ನು ನಿಷೇಧಿಸುವ ಮತ್ತು ಹೆದ್ದಾರಿ ಯೋಜನೆಗಳಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆ ಸಾಧ್ಯವಾಗುವಂತೆ ಮಾನದಂಡಗಳನ್ನು ಸಡಿಲಿಸುವ ನೀತಿಯು ಸದ್ಯವೇ ಪ್ರಕಟವಾಗಲಿದೆ.
ಈಗಿನ ಮತ್ತು ಭವಿಷ್ಯದ ಟೆಂಡರ್ಗಳಿಗೆ ಇದು ಅನ್ವಯ ಆಗಲಿದೆ. ಈಗಾಗಲೇ ಅಂತಿಮಗೊಂಡ ಟೆಂಡರ್ಗಳಲ್ಲಿ ಚೀನಾ ಕಂಪನಿಗಳ ಜಂಟಿ ಸಹಭಾಗಿತ್ವ ಇದ್ದರೆ, ಹೊಸ ಟೆಂಡರ್ ಕರೆಯಲಾಗುವುದು ಎಂದೂ ಗಡ್ಕರಿ ಹೇಳಿದ್ದರು.
ಭಾರತದ ಬಂದರುಗಳಲ್ಲಿ ಚೀನಾದ ಸರಕುಗಳನ್ನು ತಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಚೀನಾ ಸರಕುಗಳನ್ನು ಬಂದರುಗಳಲ್ಲಿ ವಿನಾ ಕಾರಣ ತಡೆಯಲಾಗುತ್ತಿಲ್ಲ ಎಂದಿದ್ದಾರೆ. ದೇಶವು ಸ್ವಾವಲಂಬನೆ ಸಾಧಿಸುವುದಕ್ಕಾಗಿ ಎಂಎಸ್ಎಂಇ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಸರ್ಕಾರ ತರಲಿದೆ ಎಂದು ಹೇಳಿದ್ದಾರೆ.
'ಇದೊಂದು ಉತ್ತಮ ಕ್ರಮ. ಚೀನಾದಿಂದ ಆಮದನ್ನು ನಿರುತ್ಸಾಹಗೊಳಿಸಲಾಗುವುದು. ಸ್ವಾವಲಂಬನೆಯ ದಿಸೆಯಲ್ಲಿ ದೇಶವು ದಾಪುಗಾಲು ಹಾಕಲಿದೆ. ನಾನು ಸ್ವಾವಲಂಬಿ ಭಾರತದ ಅತಿ ದೊಡ್ಡ ಪ್ರತಿಪಾದಕ' ಎಂದಿದ್ದಾರೆ.
ಪರಿಸ್ಥಿತಿಯು ವಿಷಮಗೊಳ್ಳುವುದಕ್ಕೆ ಮೊದಲು, ಅಂದರೆ ಎರಡು ಮೂರು ತಿಂಗಳ ಹಿಂದೆ ಖರೀದಿ ಮಾಡಿದ ಸರಕುಗಳನ್ನು ಬಿಡಿಸಿಕೊಳ್ಳಲು ಅವಕಾಶ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ನಮ್ಮ ಕಂಪನಿಗಳೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವಂತೆ ತಾಂತ್ರಿಕ ಮತ್ತು ಹಣಕಾಸು ಮಾನದಂಡಗಳನ್ನು ಸಡಿಸಲಿಸಲು ಸಂಬಂಧಪಟ್ಟವರ ಜತೆ ಸಭೆ ನಡೆಸುವಂತೆ ಹೆದ್ದಾರಿ ಇಲಾಖೆಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರೊಬ್ಬರು ಸಣ್ಣ ಯೋಜನೆ ಕೈಗೆತ್ತಿಕೊಳ್ಳಲು ಅರ್ಹರಾಗಿದ್ದರೆ ಅವರು ದೊಡ್ಡ ಯೋಜನೆಗೂ ಅರ್ಹರಾಗಬಹುದು ಎಂದು ಗಡ್ಕರಿ ಹೇಳಿದ್ದಾರೆ.
ಎಂಎಸ್ಎಂಇ ಕ್ಷೇತ್ರದಲ್ಲಿ ದೇಶೀ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲಾಗುವುದು. ಹಾಗಿದ್ದರೂ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಲಾಗುವುದು. ಆದರೆ, ಚೀನಾದ ಕಂಪನಿಗಳಿಗೆ ಇಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications