ನಿತ್ಯಾನಂದ ಸ್ವಾಮಿ ಪ್ರಕರಣ: ಯುವತಿಯಿಂದ ಸ್ಫೋಟಕ ವಿಡಿಯೋ ಬಹಿರಂಗ
ನವದೆಹಲಿ, ಜನವರಿ 6: ನಿತ್ಯಾನಂದ ಸ್ವಾಮಿ ಆಶ್ರಮದಿಂದ ಯುವತಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇನ್ನೊಂದು ತಿರುವು ಸಿಕ್ಕಿದೆ. ತಾನು ಸ್ವ ಇಚ್ಛೆಯಿಂದ ನಿತ್ಯಾನಂದನ ಆಶ್ರಮ ಸೇರಿರುವುದಾಗಿ ಈ ಹಿಂದೆ ವಿಡಿಯೋದಲ್ಲಿ ಹೇಳಿಕೊಂಡಿದ್ದ ಯುವತಿ, ಈಗ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ಬೆಂಗಳೂರು ಮೂಲದ ಜನಾರ್ದನ ಶರ್ಮಾ ಎಂಬುವವರು ಇತ್ತೀಚೆಗೆ ಅಹಮದಾಬಾದ್ನಲ್ಲಿರುವ ನಿತ್ಯಾನಂದ ಆಶ್ರಮದಿಂದ ತಮ್ಮ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಬಲವಂತವಾಗಿ ಬಂಧಿಸಿಟ್ಟು ಅಪಹರಿಸಲಾಗಿದೆ ಎಂದು ಗುಜರಾತ್ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು.
ಕೆಲವು ದಿನಗಳಲ್ಲಿಯೇ ಫೇಸ್ಬುಕ್ನಲ್ಲಿ ಲೈವ್ ವಿಡಿಯೋ ಮಾಡಿದ್ದ ಅವರ ದೊಡ್ಡ ಮಗಳು, ತಮ್ಮನ್ನು ಯಾರೂ ಅಪಹರಿಸಿಲ್ಲ. ತಮ್ಮ ಗುರುಗಳಾದ ನಿತ್ಯಾನಂದ ಸ್ವಾಮಿ ಮೇಲೆ ವಿನಾಕಾರಣ ಆರೋಪ ಹೊರಿಸಲಾಗಿದೆ. ಸ್ವಾಮೀಜಿ ನಮಗೆ ತಂದೆ ಸಮಾನರು. ನಮ್ಮನ್ನು ಯಾರೂ ಅಪಹರಿಸಿಲ್ಲ. ವೈಯಕ್ತಿಕ ಕಾರಣದಿಂದ ಹಾಗೂ ಕುಟುಂಬದಲ್ಲಿ ವೈಮನಸ್ಸು ಇರುವುದರಿಂದ ಹೆತ್ತವರ ಜತೆ ಇರಲು ಸಾಧ್ಯವಾಗದೆ ಆಶ್ರಮದಲ್ಲಿದ್ದೇವೆ. ಸ್ವ ಇಚ್ಛೆಯಿಂದ ಸನ್ಯಾಸತ್ವ ಪಡೆದುಕೊಂಡಿದ್ದೇನೆ ಎಂದು ಯುವತಿ ತಂದೆಯ ವಿರುದ್ಧವೇ ಕಿಡಿಕಾರಿದ್ದಳು.

ಮತ್ತೆ ಬದುಕಿರುತ್ತೇನೋ ಗೊತ್ತಿಲ್ಲ
ಆದರೆ ನಿತ್ಯಾನಂದನ ಆಶ್ರಮದಿಂದ ನಾಪತ್ತೆಯಾಗಿರುವ ಸಹೋದರಿಯರ ಪೈಕಿ ನಿತ್ಯ ತತ್ವ ಪ್ರಿಯಾ ಆನಂದ ಎಂದು ಗುರುತಿಸಿಕೊಂಡಿರುವ ಜನಾರ್ದನ ಶರ್ಮಾ ಅವರ ಮೊದಲ ಮಗಳು ಲೋಪಮುದ್ರಾ ಯುವತಿಯ ಇನ್ನೊಂದು ವಿಡಿಯೋ ಸೋಮವಾರ ಬಹಿರಂಗವಾಗಿದ್ದು, ತನಗೆ ಜೀವ ಬೆದರಿಕೆ ಇದ್ದು, ಮುಂದಿನ ವಿಡಿಯೋ ಬಿಡುಗಡೆ ಮಾಡಲು ಜೀವಂತ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ.
|
ಪ್ರಾಣಕ್ಕೆ ಅಪಾಯವಿದೆ ಎಂದ ಯುವತಿ
ತನ್ನ ಪ್ರಾಣಕ್ಕೆ ಎರವಾಗುವ ಸನ್ನಿವೇಶ ಸೃಷ್ಟಿಯಾಗಿದೆ. ತನ್ನನ್ನು ರಕ್ಷಿಸಿ ಎಂದು ಆಕೆ ಹೊಸ ವಿಡಿಯೋದಲ್ಲಿ ಮನವಿ ಮಾಡಿದ್ದಾಳೆ. ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಇಲ್ಲ. ಈ ವಿಡಿಯೋವನ್ನು ನಾಪತ್ತೆ ಮತ್ತು ಅಪಹರಣದ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಜನಾರ್ದನ ಶರ್ಮಾ ಪರ ವಕೀಲರು ತಿಳಿಸಿದ್ದಾರೆ.

ನಾವು ಬರುವುದಿಲ್ಲ ಎಂದಿದ್ದ ಯುವತಿ
ಸ್ವಾಮೀಜಿಯ ಮೇಲೆ ವೈಯಕ್ತಿಕ ಕಾರಣಗಳಿಂದ ವೃಥಾ ಆರೋಪ ಮಾಡಿದ್ದಾರೆ. ಅಲ್ಲದೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರು ಆರೋಪಿಸಿರುವುದು ಸುಳ್ಳು. ದೂರಿನಲ್ಲಿ ಉಲ್ಲೇಖ ಮಾಡಿರುವ ಅಂಶಗಳು ಸಹ ಸತ್ಯಕ್ಕೆ ದೂರವಾಗಿವೆ. ನಮ್ಮನ್ನು ಸ್ವಾಮೀಜಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಮತ್ತು ನನ್ನ ಸಹೋದರಿ ಜತೆಯಲ್ಲಿ ಇದ್ದೇವೆ. ಅಪ್ಪ ಅಮ್ಮ ಸನ್ಯಾಸತ್ವ ಬಿಟ್ಟು ಬರುವಂತೆ ಹೇಳುತ್ತಿದ್ದಾರೆ. ಇದಕ್ಕೆ ನಾವು ಸಿದ್ಧರಿಲ್ಲ ಎಂದು ಆಕೆ ಹಳೆಯ ವಿಡಿಯೋದಲ್ಲಿ ಹೇಳಿದ್ದಳು.

ಏನಿದು ಆರೋಪ?
ಬೆಂಗಳೂರು ಮೂಲದ ಜನಾರ್ದನ ಶರ್ಮಾ ಎಂಬುವವರು ನಿತ್ಯಾನಂದ ಬಿಡದಿ ಆಶ್ರಮದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ನಾಲ್ವರು ಹೆಣ್ಣುಮಕ್ಕಳನ್ನು ಆಶ್ರಮದಲ್ಲಿಯೇ ಬಿಟ್ಟಿದ್ದರು. ಆಶ್ರಮದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಅವರು ಅಲ್ಲಿಂದ ಹೊರಬಂದಿದ್ದರು. ಆಗ ಅವರ ಜತೆ ಇಬ್ಬರು ಹೆಣ್ಣುಮಕ್ಕಳು ವಾಪಸ್ ಬಂದಿದ್ದರು. ಆದರೆ ಇನ್ನಿಬ್ಬರು ಹೆಣ್ಣುಮಕ್ಕಳು ಅವರ ಜತೆಗೆ ಬರಲು ನಿರಾಕರಿಸಿದ್ದರು. ತಮ್ಮ ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಳ್ಳಲಾಗಿದೆ. ಅವರನ್ನು ಅಹಮದಾಬಾದ್ ಆಶ್ರಮಕ್ಕೆ ಕಳುಹಿಸಲಾಗಿದೆ ಎಂದು ಜನಾರ್ದನ ಶರ್ಮ ಆರೋಪಿಸಿದ್ದರು.












Click it and Unblock the Notifications