ನೆಹರೂ, ಇಂದಿರಾಗೂ ಇತ್ತು ಆರ್ಎಸ್ಎಸ್ ಜತೆ ಬಾಂಧವ್ಯ
Recommended Video

ಬೆಂಗಳೂರು, ಜೂನ್ 7: ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ನ ಹಿರಿಯ ನಾಯಕ ಪ್ರಣವ್ ಮುಖರ್ಜಿ ಅವರು ನಾಗಪುರದಲ್ಲಿ ಗುರುವಾರ ಸಂಜೆ ನಡೆಯಲಿರುವ ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಕಾಂಗ್ರೆಸ್ ತೀವ್ರವಾಗಿ ವಿರೋಧಿಸುವ ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಪ್ರಣವ್ ಭಾಗವಹಿಸುತ್ತಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.
ಪಕ್ಷದ ಜಾತ್ಯಾತೀತ ಮತ್ತು ಸೈದ್ಧಾಂತಿಕ ನಿಲುವುಗಳಿಗೆ ಪ್ರಣವ್ ನಡೆಯಿಂದ ಘಾಸಿ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ, ವಿರೋಧದ ನಡುವೆಯೂ ಪ್ರಣವ್ ಮುಖರ್ಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಆರ್ಎಸ್ಎಸ್ಅನ್ನು ಅದರ ಸಿದ್ಧಾಂತದ ಕಾರಣ ಆರಂಭದಿಂದಲೂ ವಿರೋಧಿಸಿಕೊಂಡು ಬಂದಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ, ಇತಿಹಾಸ ಕೆದಕಿದರೆ ಪಕ್ಷವನ್ನು ಪ್ರಬಲವಾಗಿ ಕಟ್ಟಿದ ಪ್ರಮುಖ ನಾಯಕರು ಆರ್ಎಸ್ಎಸ್ ಜತೆ ಸೈದ್ಧಾಂತಿಕ ಸಂಘರ್ಷ, ವೈಮನಸ್ಸು ಹೊಂದಿರಲಿಲ್ಲ ಎಂಬುದು ತಿಳಿಯುತ್ತದೆ.
ಮುಖ್ಯವಾಗಿ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ಆರ್ಎಸ್ಎಸ್ ಜತೆ ಈ ರೀತಿಯ ಭಿನ್ನಾಭಿಪ್ರಾಯ ಹೊಂದಿರಲಿಲ್ಲ.
1962ರಲ್ಲಿ ನಡೆದ ಚೀನಾದೊಂದಿಗನ ಯುದ್ಧದ ವೇಳೆ ಗಡಿಯಲ್ಲಿ ಸಂಘದ ಸ್ವಯಂ ಕಾರ್ಯಕರ್ತರ ಸೇವೆಯನ್ನು ಆಗಿನ ಪ್ರಧಾನಿ ನೆಹರೂ ಮೆಚ್ಚಿಕೊಂಡಿದ್ದರು. ಇದರಿಂದ 1963ರಲ್ಲಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸುವಂತೆ ಆರ್ಎಸ್ಎಸ್ಗೆ ಸ್ವತಃ ನೆಹರೂ ಆಹ್ವಾನ ನೀಡಿದ್ದರು. 3,000ಕ್ಕೂ ಅಧಿಕ ಸ್ವಯಂ ಕಾರ್ಯಕರ್ತರು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಅದನ್ನು ಕಟುವಾಗಿ ವಿರೋಧಿಸಿ ಹೋರಾಟ ನಡೆಸಿ ಜೈಲಿಗೆ ಹೋದವರಲ್ಲಿ ಆರ್ಎಸ್ಎಸ್ ಹಿನ್ನೆಲೆಯ ವ್ಯಕ್ತಿಗಳೂ ಅನೇಕರಿದ್ದರು.
ಆದರೆ, 1977ರಲ್ಲಿ ಇಂದಿರಾ ಗಾಂಧಿ ಅವರು ಆರ್ಎಸ್ಎಸ್ನ ಆಹ್ವಾನವನ್ನು ಒಪ್ಪಿಕೊಂಡು ವಿವೇಕಾನಂದ ರಾಕ್ ಮೆಮೋರಿಯಲ್ ಅನ್ನು ಉದ್ಘಾಟನೆ ಮಾಡಿದ್ದರು.
ಈ ಹಿಂದೆ ಮಹಾತ್ಮ ಗಾಂಧಿ ಅವರೂ ತನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಆರ್ಎಸ್ಎಸ್ ಹೇಳಿದೆ.
ಸರ್ವೋದಯ ಮುಖಂಡ ಪ್ರಭಾಕರ ರಾವ್, ಲೋಕಮಾನ್ಯ ಜಯಪ್ರಕಾಶ್ ನಾರಾಯಣ್, ವಿಜ್ಞಾನಿಗಳಾದ ಕೆ. ರಾಧಾಕೃಷ್ಣನ್, ಮಾಧವನ್ ನಾಯರ್, ಕೆ. ಕಸ್ತೂರಿ ರಂಗನ್, ನ್ಯಾಯಮೂರ್ತಿ ಕೆ.ಟಿ. ಥಾಮಸ್ ಮುಂತಾದವರು ಸಹ ಆರ್ಎಸ್ಎಸ್ನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು ಎಂದು ಆರ್ಎಸ್ಎಸ್ ತನ್ನ ಮುಖವಾಣಿ 'ಆರ್ಗನೈಸರ್'ನಲ್ಲಿ ಹೇಳಿಕೊಂಡಿದೆ.












Click it and Unblock the Notifications