Maharashtra Assembly Election 2024: ಎಂವಿಎ ಸೀಟು ಹಂಚಿಕೆಗೆ ಕಗ್ಗಂಟು ಬಿಡಿಸಲಿದ್ದಾರೆ ಶರದ್ ಪವಾರ್!
ಮುಂಬೈ, ಅಕ್ಟೋಬರ್ 21: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ದಿನಾಂಕ ಘೋಷಣೆಯಾಗಿದೆ. ಬಿಜೆಪಿ 99 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 22ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಆದರೆ ಎಂವಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟಾಗಿದೆ. ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಘೋಷಣೆಯಾಗಲಿದೆ.
ಮಹಾರಾಷ್ಟ್ರ ಚುನಾವಣೆಗೆ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಮಹಾವಿಕಾಸ್ ಅಘಾಡಿ (ಎಂವಿಎ) ಸೀಟು ಹಂಚಿಕೆ ಮಾಡಿಕೊಳ್ಳಲು ಸಮಸ್ಯೆ ಎದುರಾಗಿದೆ. ಉದ್ಧವ್ ಠಾಕ್ರೆ ನಿಲುವು ಕಾಂಗ್ರೆಸ್ಗೆ ಸಮಸ್ಯೆ ತಂದಿದೆ. ಆದ್ದರಿಂದ ಶರದ್ ಪವಾರ್ ಮಧ್ಯಸ್ಥಿಕೆ ವಹಿಸಲಿದ್ದಾರೆ.

ಎಂವಿಎ ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಜೊತೆ ಮಾತುಕತೆ ನಡೆಸಲು ಉದ್ಧವ್ ಠಾಕ್ರೆ ನಿರಾಕರಿಸಿದ್ದಾರೆ. ಈ ಕುರಿತು ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೂ ಸಂದೇಶ ನೀಡಿದ್ದಾರೆ. ಆದ್ದರಿಂದ ಸೀಟುಗಳ ಹಂಚಿಕೆ ಕಗ್ಗಂಟಾಗಿದೆ.
ಶರದ್ ಪವಾರ್ ಮಧ್ಯಸ್ಥಿಕೆ: ರಾಜಕೀಯವಾಗಿ ಅಪಾರ ಅನುಭವ ಹೊಂದಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆಯೂ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದ್ದರಿಂದ ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಅವರು ಗಮನಹರಿಸಿದ್ದಾರೆ.
ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ನಡುವೆ ಸೀಟು ಹಂಚಿಕೆ ಕಗ್ಗಂಟಾಗಿದೆ. ಇಂದು ಸಂಜೆ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಸಭೆಯೂ ನಡೆಯಲಿದೆ. ಮಹಾರಾಷ್ಟ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಎಂವಿಎ ಮೈತ್ರಿಕೂಟದ 2 ರಿಂದ 3 ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮೈತ್ರಿಕೂಟದ ಸೀಟು ಹಂಚಿಕೆ ಕಗ್ಗಂಟಿನ ಹಿನ್ನಲೆಯಲ್ಲಿ ಶನಿವಾರ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ ಮುಂಬೈಗೆ ಆಗಮಿಸಿದ್ದರು. ಅವರು ಉದ್ಧವ್ ಠಾಕ್ರೆ, ಶರದ್ ಪವಾರ್ ಜೊತೆ ಮಾತುಕತೆ ನಡೆಸಿ, ದೆಹಲಿಗೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ಶರದ್ ಪವಾರ್ ಬಳಿ ಮಧ್ಯಸ್ತಿಕೆ ವಹಿಸುವಂತೆ ರಮೇಶ್ ಮನವಿ ಮಾಡಿದ್ದಾರೆ.
ಎಂವಿಎ ಮೈತ್ರಿಕೂಟ 260 ಸೀಟುಗಳಲ್ಲಿ ಸಮೀಕ್ಷೆಯನ್ನು ನಡೆಸಿ ಯಾರಿಗೆ ಟಿಕೆಟ್ ನೀಡಬೇಕು? ಎಂದು ವರದಿ ತಯಾರು ಮಾಡಿದೆ. ಆದರೆ 28 ಸೀಟುಗಳ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಪಕ್ಷದ 62 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಈ ಅಭ್ಯರ್ಥಿಗಳ ಘೋಷಣೆ ನಿರೀಕ್ಷೆ ಇದೆ.
ಕೆಲವು ಸೀಟುಗಳ ಹಂಚಿಕೆ ಬಗ್ಗೆ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನಡುವೆ ಒಮ್ಮತವಿಲ್ಲ. ಆದ್ದರಿಂದ ಸೀಟು ಹಂಚಿಕೆ ಕಗ್ಗಂಟಾಗಿದೆ. ಕಾಂಗ್ರೆಸ್ ಮತ್ತು ಶಿವಸೇನೆಗೆ ತಲಾ 100 ಸೀಟು, 88 ಸೀಟು ಎನ್ಸಿಪಿ (ಶರದ್ ಪವಾರ್ ಬಣ)ಕ್ಕೆ ಎಂಬುದು ಉದ್ಧವ್ ಠಾಕ್ರೆ ಸೂತ್ರವಾಗಿದೆ. ಆದರೆ ಈ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಜೊತೆ ಮಾತುಕತೆ ನಡೆಸುವುದಿಲ್ಲ ಎಂಬುದು ಉದ್ಧವ್ ಠಾಕ್ರೆ ಸ್ಪಷ್ಟ ಸಂದೇಶವಾಗಿದೆ.
ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟಕ್ಕೆ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಎದುರಾಳಿ. ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮಗೊಂಡು ಬಿಜೆಪಿ 99 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಆದರೆ ಎಂವಿಎ ಮೈತ್ರಿಕೂಟದಲ್ಲಿ ಇನ್ನೂ ಸೀಟು ಹಂಚಿಕೆಯೇ ಅಂತಿಮವಾಗಿಲ್ಲ.












Click it and Unblock the Notifications