ನ್ಯಾಷನಲ್ ಹೆರಾಲ್ಡ್ ಕೇಸ್: ಮೋದಿ ಮುಜುಗರಕ್ಕೆ ಸೋನಿಯಾ ಮಾಸ್ಟರ್ ಪ್ಲಾನ್?
ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ನ್ಯಾಷನಲ್ ಹೆರಾಲ್ಡ್ ಕೇಸಿನ ಸಂಬಂಧ, ವಿಚಾರಣೆಗೆ ಹಾಜರಾಗಲು ಕೊನೆಯ ದಿನವಾದ ಶನಿವಾರ (ಡಿ 19) ಕಾಂಗ್ರೆಸ್ ತಾನಿಡಬೇಕಾಗಿರುವ ಮುಂದಿನ ಹೆಜ್ಜೆಯ ಬಗ್ಗೆ ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ದಪಡಿಸಿಕೊಂಡಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇತರ ಐವರು ಕಾಂಗ್ರೆಸ್ ಮುಖಂಡರು (ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಪ್ರಮುಖರು) ದೆಹಲಿಯ ಪಟಿಯಾಲ ಕೋರ್ಟಿಗೆ ಶನಿವಾರದೊಳಗೆ ಹಾಜರಾಗಿ ವಿಚಾರಣೆ ಎದುರಿಸ ಬೇಕಾಗಿದೆ. (ನ್ಯಾಷನಲ್ ಹೆರಾಲ್ಡ್ ಕೇಸ್ : ಸೋನಿಯಾ ರಾಹುಲ್ ಗೆ ಹಿನ್ನಡೆ)
ನ್ಯಾಷನಲ್ ಹೆರಾಲ್ಡ್ ಆಸ್ತಿ ಪರಭಾರೆ ವಿಚಾರದಲ್ಲಿ ಶೇರುದಾರರ ಹೇಳಿಕೆ ಕೂಡಾ ವ್ಯತಿರಕ್ತವಾಗಿ ಬಂದ ನಂತರ, ಕಾಂಗ್ರೆಸ್ ಮುಖಂಡರು ಅಕ್ರಮ ಎಸಗಿರುವುದು ಬಹುತೇಕ ದೃಢಪಟ್ಟಿರುವುದರಿಂದ ಅವರಿಗೆ ಜಾಮೀನು ಸಿಗುವ ಸಾಧ್ಯತೆಯೂ ಕಮ್ಮಿ ಎನ್ನಲಾಗುತ್ತಿದೆ.
ಇದಕ್ಕಿಂತ ಹೆಚ್ಚಾಗಿ ಸೋನಿಯಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕೋರ್ಟ್ ತೀರ್ಪು ವಿರುದ್ದವಾಗಿ ಬಂದರೆ ಬೇಲ್ ಗೆ ಅರ್ಜಿ ಸಲ್ಲಿಸದೇ ಇರಲು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಬರಲಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿಯನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. (ಖರ್ಗೆಯವರೇ, ನೀವಾದರೂ ನಿಮ್ಮ ಪಕ್ಷದವರಿಗೆ ಬುದ್ದಿ ಹೇಳಿ)
ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೇಲೆಯೇ ಕೋರ್ಟ್ ತೂಗುಗತ್ತಿ ತೂಗುತ್ತಿರುವುದರಿಂದ, ಮುಂದೆ ಇಡಬೇಕಾಗಿರುವ ಹೆಜ್ಜೆ ಮತ್ತು ಅದರಿಂದ ಪಡೆಯಬಹುದಾದ ರಾಜಕೀಯ ಲಾಭದ ಬಗ್ಗೆ ಕಾಂಗ್ರೆಸ್ ಮುಖಂಡರು ಗೌಪ್ಯವಾಗಿ ರಣತಂತ್ರ ರೂಪಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯಿದೆ.
ಕೊನೆಯ ಸ್ಲೈಡ್ ತನಕ ಓದು ಮುಂದುವರಿಸಿ..
ಗಾಂಧಿ ಕುಟುಂಬದ ವೈಯಕ್ತಿಕ ಕೇಸ್
ಗಾಂಧಿ ಕುಟುಂಬದ ವೈಯಕ್ತಿಕ ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರದ ವಿಚಾರವನ್ನು ಮುಂದಿಟ್ಟುಕೊಂದು ಪ್ರಧಾನಿ ಮೋದಿಗೆ ಇನ್ನಷ್ಟು ಮುಜುಗರ ತರಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ. ಒಂದು ವೇಳೆ ಪಟಿಯಾಲ ಕೋರ್ಟ್ ಬೇಲ್ ನೀಡಿದರೂ, ಜಾಮೀನು ಪಡೆಯದೇ ಸೋನಿಯಾ ಮತ್ತು ರಾಹುಲ್ ಗಾಂಧಿ ಜೈಲು ಶಿಕ್ಷೆ ಅನುಭವಿಸಲು ಸಿದ್ದರಾಗಿದ್ದಾರೆ ಎನ್ನುವ ಸುದ್ದಿಯಿದೆ.
ಬಿಜೆಪಿ ದ್ವೇಷದ ರಾಜಕಾರಣ
ಜೈಲು ಸೇರುವ ಮೂಲಕ ಬಿಜೆಪಿ ಸರಕಾರ ಕಾಂಗ್ರೆಸ್ ಪಕ್ಷದ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಮುಂದಾಗಿದೆ ಎಂದು ಅನುಕಂಪದ ಹೊಸ ರಾಜಕೀಯ ದಾಳ ಉರುಳಿಸಲು ಕಾಂಗ್ರೆಸ್ ಬಹುತೇಕ ಸರ್ವಸನ್ನದ್ದವಾಗಿದೆ ಎನ್ನುವ ಮಾಹಿತಿಯಿದೆ.
ಪೋಲಾಗುತ್ತಿರುವ ಸಂಸತ್ತಿನ ಕಲಾಪ
ಸಂಸತ್ತಿನ ಕಲಾಪದ ಸಮಯ ಪೋಲಾಗುತ್ತಿರುವುದಕ್ಕೆ ಸಾರ್ವಜನಿಕವಾಗಿ ಟೀಕೆಯ ಮಹಾಪೂರ ಹರಿದು ಬರುತ್ತಿರುವ ಹಿನ್ನಲೆಯಲ್ಲಿ, ಜೈಲಿಗೆ ಹೋಗುವ ಮೂಲಕ ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಮಹಿಳೆ ಕೂಡಾ ಹೊರತಾಗಿಲ್ಲ ಎಂದು ಸಾರ್ವಜನಿಕವಾಗಿ ಅನುಕಂಪ ಗಿಟ್ಟಿಸುವುದು ಸೋನಿಯಾ ಗಾಂಧಿ ಮಾಸ್ಟರ್ ಪ್ಲಾನ್ ಎನ್ನಲಾಗುತ್ತಿದೆ.
ಶಕ್ತಿ ಪ್ರದರ್ಶನ
ಇದಲ್ಲದೇ, ಶನಿವಾರದಂದು ಕಾಂಗ್ರೆಸ್ ಪಕ್ಷ ಅದ್ದೂರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಲು ಸಜ್ಜಾಗಿದೆ. ಅಂದು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ರಾಜಧಾನಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷ ಆಯೋಜಿಸಿದೆ. ಅಲ್ಲದೇ ಪಟಿಯಾಲ ಕೋರ್ಟ್ ಆವರಣದಲ್ಲಿ ವಿಚಾರಣೆಯ ದಿನದಂದು ಭಾರೀ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಜಮಾಯಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ.
ಸುಬ್ರಮಣಿಯನ್ ಸ್ವಾಮಿ
ಇನ್ನೊಂದು ಮೂಲಗಳ ಪ್ರಕಾರ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೆರಾಲ್ಡ್ ಕೇಸಿನ ವಿಚಾರದಲ್ಲಿ ಕೋರ್ಟ್ ಮೆಟ್ಟಲೇರಿರುವುದರಿಂದ ಅದನ್ನೇ ಮೋದಿ ವಿರುದ್ದ ತಿರುಗಿಸಿ ರಾಜಕೀಯ ಲಾಭ ಪಡೆಯುವ ಏಕಮೇವ ಉದ್ದೇಶ ಕಾಂಗ್ರೆಸ್ ಪಕ್ಷದ್ದು.
ಸ್ವಾಮಿ, ಬಿಜೆಪಿ ಸದಸ್ಯರಾಗಿರಲಿಲ್ಲ
ಗಮನಿಸಬೇಕಾದ ವಿಚಾರವೆಂದರೆ, ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ ಮುಖಂಡರ ವಿರುದ್ದ ಈ ಕೇಸ್ ದಾಖಲಿಸಿದ್ದು 2012ರಲ್ಲಿ. ಆ ಸಮಯದಲ್ಲಿ ಸ್ವಾಮಿ ಬಿಜೆಪಿ ಸದಸ್ಯರಾಗಿರಲಿಲ್ಲ. ಜನತಾ ಪಾರ್ಟಿ ಪಕ್ಷದ ಮುಖ್ಯಸ್ಥರಾಗಿದ್ದ ಸ್ವಾಮಿ 2013ರಲ್ಲಿ ತನ್ನ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದರು.
ವಿನೂತನ ತಂತ್ರ
ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡೇ ಭ್ರಷ್ಟಾಚಾರದ ಸುಳಿಯಲ್ಲಿ ನೇರವಾಗಿ ಸಿಲುಕಿರುವುದರಿಂದ, ಹೇಗಾದರೂ ಮಾಡಿ ಇದನ್ನು ಬಿಜೆಪಿಯ ವಿರುದ್ದ ತಿರುಗಿಸಲು ಸೋನಿಯಾ ಮತ್ತು ಯುವರಾಜರು ಜೈಲಿಗೆ ಹೋಗಲು ಸಿದ್ದರಾಗಿರುವುದು ಸದ್ಯಕ್ಕೆ ಲಭ್ಯವಿರುವ ಮಾಹಿತಿ.
ನ್ಯಾಷನಲ್ ಹೆರಾಲ್ಡ್
ಅಂದಿನ ಪಿಎಂ ನೆಹರೂ ಹುಟ್ಟು ಹಾಕಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ, ಸದ್ಯ ಎರಡು ಸಾವಿರ ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯದ ಆಸ್ತಿಯನ್ನು ಹೊಂದಿದೆ. ಸಾಲದ ಸುಳಿಯಲ್ಲಿದ್ದ ಈ ಸಂಸ್ಥೆಯನ್ನು ಯಂಗ್ ಇಂಡಿಯಾ ಸಂಸ್ಥೆ ಖರೀದಿಸಿತ್ತು. ಈ ಸಂಸ್ಥೆಯ ಶೇ. 76ರಷ್ಟು ಶೇರು ಗಾಂಧಿ ಕುಟುಂಬದ ಯಂಗ್ ಇಂಡಿಯಾ ಹೆಸರಿನಲ್ಲಿದೆ. ಶೇರುದಾರರ ಅನುಮತಿಯಿಲ್ಲದೇ ಮತ್ತು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುಬ್ರಮಣಿಯನ್ ಸ್ವಾಮಿ ಕೋರ್ಟ್ ಮೆಟ್ಟಲೇರಿದ್ದರು. ಇದು ಕಾಂಗ್ರೆಸ್ಸಿನ ಟಾಪ್ ಟು ಮುಖಂಡರ ಮೇಲಿರುವ ಆರೋಪ.
ಇಂದಿರಾ ಗಾಂಧಿ
ತಾನು ಇಂದಿರಾ ಗಾಂಧಿ ಸೊಸೆ, ಯಾವುದಕ್ಕೂ ಭಯ ಪಡಲ್ಲ ಎಂದು ಹೇಳಿರುವ ಸೋನಿಯಾ ಗಾಂಧಿ, ಅತ್ತೆ ಇಂದಿರಾ ತುರ್ತು ಪರಿಸ್ಥಿತಿಯ ನಂತರ ಎದುರಿಸಿದ್ದ ಕಾನೂನು ಹೋರಾಟದ ಹಾದಿಯಲ್ಲಿ ಸಾಗಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಎಮರ್ಜೆನ್ಸಿ ನಂತರ ಎದುರಿಸಿದ್ದ ಕಾನೂನು ಹೋರಾಟವನ್ನು ಅತ್ಯುತ್ತಮವಾಗಿ ರಾಜಕೀಯವಾಗಿ ಬಳಸಿಕೊಂಡಿದ್ದ ಇಂದಿರಾ ಗಾಂಧಿ ಮತ್ತೆ ರಾಜಕೀಯ ಮರುಹುಟ್ಟು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.