ಸುಳ್ಳು ಪತ್ತೆ ಪರೀಕ್ಷೆಗೆ ಪ್ರಧಾನಿ ಮೋದಿ ಒಳಪಡಲಿ: ಬಿಜೆಪಿಗೆ ಎಎಪಿ ತಿರುಗೇಟು
ನವದೆಹಲಿ, ಅಕ್ಟೋಬರ್ 18: ಪ್ರಧಾನಿ ನರೇಂದ್ರ ಮೋದಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲಿ. ಆ ಬಳಿಕ, ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಬಿಜೆಪಿ ಯಾವುದೇ ಸಂಬಂಧ ಹೊಂದಿಲ್ಲ ಎಂಬುದಾಗಿ ಸ್ಪಷ್ಟಪಡಿಸಲಿ ಎಂದು ಎಎಪಿ ಮಂಗಳವಾರ ಹೇಳಿದೆ.
ನನ್ನ ಮೇಲೆ ಸಿಬಿಐ ಒತ್ತಡ ಹೇರಲು ಯತ್ನಿಸಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಸಿಸೋಡಿಯಾ ಅವರನ್ನು ಸುಳ್ಳು ಪರೀಕ್ಷೆ ಒಳಪಡಿಸಬೇಕೆಂದು ಹೇಳಿದ್ದರು.
ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿರುವ ಎಎಪಿ, ಮೊದಲು ಪ್ರಧಾನಿ ಮೋದಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲಿ ಎಂದು ಹೇಳಿದೆ.
'ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಳ್ಳು ಪತ್ತೆ ಮತ್ತು ನಾರ್ಕೋ-ಅನಾಲಿಸಿಸ್ ಪರೀಕ್ಷೆಗೆ ಒಳಗಾಗುವಂತೆ ಹೇಳಬೇಕು. ಸಿಬಿಐ ಹಾಗೂ ಇಡಿಯಂತಹ ಸ್ವಾಯತ್ತ ಸಂಸ್ಥೆಗಳು ಬಿಜೆಪಿಯೊಂದಿಗೆ ಸಂಬಂಧ ಹೊಂದಿಲ್ಲವೆಂಬುದನ್ನು ಬಹಿರಂಗಗೊಳಿಸಬೇಕು' ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಕೇಂದ್ರದ ತನಿಖಾ ಸಂಸ್ಥೆಗಳು ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಹೊಂದಿವೆ ಎಂಬುದು ದೊಡ್ಡ ಸುಳ್ಳು ಎಂದು ಅವರು ಹೇಳಿದರು.
ಸುಳ್ಳಗಳನ್ನು ಸರಾಗವಾಗಿ ಹೇಳುವ ವಿಷಯದಲ್ಲಿ, ದೇಶದ ಎಲ್ಲಾ ನಾಯಕರಿಗಿಂತ ಪ್ರಧಾನಿ ಮೋದಿ ಮುಂದಿದ್ದಾರೆ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.
ಎಎಪಿ ತೊರೆಯುವಂತೆ ಒತ್ತಡ ಹೇರಿದ ಸಿಬಿಐ: ಸಿಸೋಡಿಯಾ
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಸಿಬಿಐ ವಿರುದ್ಧ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.

'ಎಎಪಿ ತೊರೆದು ಬಿಜೆಪಿ ಸೇರುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತು. ಒಂದು ವೇಳೆ, ನಾನು ಬಿಜೆಪಿಗೆ ಸೇರ್ಪಡೆಗೊಂಡರೆ, ದೆಹಲಿಯ ಮುಖ್ಯಮಂತ್ರಿ ಮಾಡುವುದಾಗಿ ಸಿಬಿಐ ಅಧಿಕಾರಿಗಳು ಹೇಳಿದರು' ಎಂದು ಸಿಸೋಡಿಯಾ ತಿಳಿಸಿದ್ದಾರೆ.
'ಗುಜರಾತ್ ಚುನಾವಣೆ ಪ್ರಚಾರಕ್ಕೆ ತೆರಳದಂತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ಮೇಲೆ ಒತ್ತಡ ಹೇರುತ್ತಿದೆ. ನನ್ನ ಬಂಧನವಾದರೂ ಸಹಿತ, ಗುಜರಾತ್ನಲ್ಲಿ ಎಎಪಿಯ ಚುನಾವಣೆ ಪ್ರಚಾರ ಮುಂದುವರಿಯುತ್ತದೆ. ತಮ್ಮ ಮಕ್ಕಳಿಗೆ ಉತ್ತಮ ಶಾಲೆಗಳನ್ನು ನಿರ್ಮಿಸುವವರಿಗೆ ಮತ ನೀಡಲು ಗುಜರಾತಿಗಳು ತೀರ್ಮಾನಿಸಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರು(ಬಿಜೆಪಿ ನಾಯಕರು) ಸಿಬಿಐ, ಇಡಿ ಮೂಲಕ ನನಗೆ ಕಿರುಕುಳ ನೀಡಬಹುದು. ಆದರೆ, ಶಾಲೆ ನಿರ್ಮಿಸುವವರನ್ನು ಬಂಧಿಸಲು ಸಾಧ್ಯವಿಲ್ಲ' ಎಂದು ಸಿಸೋಡಿಯಾ ಹೇಳಿದ್ದಾರೆ.
ಬಿಜೆಪಿಗೆ ಎಎಪಿ ಪೈಪೋಟಿ
ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿವೆ. ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತ್ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸನ್ನಾಹದಲ್ಲಿದೆ. ಆದರೆ, ಗುಜರಾತ್ ಚುನಾವಣೆ ಬಿಜೆಪಿಗೆ ಸುಗಮ ಹಾದಿಯಾಗಿ ಉಳಿದಿಲ್ಲ. ಇದಕ್ಕೆ ಕಾರಣ, ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ಒಡ್ಡಿದೆ. ಅತ್ತ ಕಾಂಗ್ರೆಸ್ ಪಕ್ಷದ ನಾಯಕರು ಹಳ್ಳಿಹಳ್ಳಿಗೆ ತೆರಳಿ ಕೆಳ ಹಂತದ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯ ವೋಟ್ ಬ್ಯಾಂಕ್ ಆಗಿರುವ ಗುಜರಾತ್ನ ನಗರ ಪ್ರದೇಶಗಳಲ್ಲಿ ಎಎಪಿ ನೆಲೆಕಂಡುಕೊಂಡಿರುವುದು ಕೇಸರಿ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ದೆಹಲಿ ಹಾಗೂ ಪಂಜಾಬ್ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಎಎಪಿ ಗುಜರಾತ್ನಲ್ಲಿಯೂ ಅಧಿಕಾರ ಹಿಡಿಯಲಿದೆ ಎಂದು ಪಕ್ಷದ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಗುಜರಾತ್ಗೆ ಹಲವು ಬಾರಿ ಭೇಟಿ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಚಿತ ಕೊಡುಗೆಗಳ ಭರವಸೆಗಳನ್ನು ನೀಡಿದ್ದಾರೆ. ನಿರುದ್ಯೋಗ, ಕುಡಿಯುವ ನೀರಿನ ತೊಂದರೆ, ವಿದ್ಯುತ್ ಕೊರತೆ, ಬೆಲೆ ಏರಿಕೆ, ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.












Click it and Unblock the Notifications