20 ವರ್ಷಗಳ ಹಿಂದೆ ಅಂದು ಮತ್ತು ಇಂದು...
ಬೆಂಗಳೂರು, ಜುಲೈ 20 : ಭಾರತದ 14ನೇ ರಾಷ್ಟ್ರಪತಿಯಾಗಿ 71 ವರ್ಷದ ರಾಮ್ ನಾಥ್ ಕೋವಿಂದ್ ಅವರು ಆಯ್ಕೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಪರೂಪದ ಚಿತ್ರಗಳೆರಡನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾರೆ.
20 ವರ್ಷಗಳ ಹಿಂದೆ ರಾಮ್ ನಾಥ್ ಕೋವಿಂದ್ ಅವರ ಮಗ ಪ್ರಶಾಂತ್ ಕುಮಾರ್ ಅವರ ಮದುವೆಯಲ್ಲಿ ಭಾಗಿಯಾಗಿದ್ದಾಗ ಮತ್ತು ಇಂದು ತೆಗೆಸಿಕೊಳ್ಳಲಾಗ ಚಿತ್ರಗಳೆರಡನ್ನು ನರೇಂದ್ರ ಮೋದಿಯವರು ಪ್ರಕಟಿಸಿದ್ದು, "20 ವರ್ಷಗಳ ಹಿಂದೆ ಮತ್ತು ಇಂದು... ನಿಮ್ಮ ಬಗ್ಗೆ ತಿಳಿದಿರುವುದು ನನ್ನ ಸೌಭಾಗ್ಯ" ಎಂದು ಅವರು ಬರೆದುಕೊಂಡಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ, ಕೊನೆಯ ಕ್ಷಣದವರೆಗೆ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿ ಅಭ್ಯರ್ಥಿ ಎಂಬ ಸಂಗತಿಯನ್ನು ಬಿಜೆಪಿ ಬಿಟ್ಟುಕೊಟ್ಟಿರಲಿಲ್ಲ. ಅವರ ಬದಲಾಗಿ, ರಜನಿಕಾಂತ್, ನಂದನ್ ನಿಲೇಕಣಿ, ಅಮಿತಾಭ್ ಬಚ್ಚನ್ ಸೇರಿದಂತೆ ಹಲವಾರು ಹೆಸರುಗಳು ಹರಿದಾಡುತ್ತಿದ್ದವು. ಕೊನೆಗೆ ದಲಿತ ನಾಯಕನನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿ ಅಚ್ಚರಿ ಮೋದಿ ಮೂಡಿಸಿದ್ದರು.
ಉತ್ತರಪ್ರದೇಶದವರಾದ ರಾಮ್ ನಾಥ್ ಕೋವಿಂದ್ ಅವರಿಗೆ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ಬೆಂಬಲವಿದ್ದ ಮೀರಾ ಕುಮಾರ್ ಅವರು ತುರುಸಿನ ಸ್ಪರ್ಧೆಯನ್ನು ನೀಡಿದ್ದರು. ಅಂತಿಮವಾಗಿ, ರಾಮ್ ನಾಥ್ ಕೋವಿಂದ್ ಅವರು ಶೇ.65.6 ಮತಗಳನ್ನು ಪಡೆದರೆ, ಮೀರಾ ಅವರು ಶೇ.34.4 ಮತಗಳನ್ನು ಪಡೆದು ವೀರೋಚಿತ ಸೋಲು ಅನುಭವಿಸಿದರು.

ದಲಿತ ನಾಯಕರಾಗಿರುವ ರಾಮ್ ನಾಥ್ ಕೋವಿಂದ್ ಅವರನ್ನು ಸ್ಪರ್ಧೆಗೆ ಎನ್ಡಿಎ ಇಳಿಸುತ್ತಿದ್ದಂತೆ, ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿ ಮಾಡಿದ್ದ ಕಾಂಗ್ರೆಸ್ ಮತ್ತಿತರ ಪಕ್ಷಗಳು ಮತ್ತೊಬ್ಬ ದಲಿತ ನಾಯಕಿ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿತ್ತು. ಈಗ ಜಯದ ಮಾಲೆ ಕೋವಿಂದ್ ಅವರ ಕೊರಳಿಗೆ ಬಿದ್ದಿದೆ.












Click it and Unblock the Notifications