ನನ್ನನ್ನು ನಿಂದಿಸಲು ಹೊರಗುತ್ತಿಗೆ ನೀಡಿದ ಕಾಂಗ್ರೆಸ್: ಗುಜರಾತ್ನಲ್ಲಿ ಮೋದಿ ಹೇಳಿಕೆ
ರಾಜ್ಕೋಟ್, ಅಕ್ಟೋಬರ್ 11: ನನ್ನನ್ನು ನಿಂದಿಸಲು ಬೇರೊಂದು ಪಕ್ಷಕ್ಕೆ ಕಾಂಗ್ರೆಸ್ ಹೊರಗುತ್ತಿಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಕೋಟ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಗುಜರಾತ್ನ ಹಳ್ಳಿಗಳ ಮತಗಳನ್ನು ಸೆಳೆಯಲು ಮೌನವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

'ಕಳೆದ 20 ವರ್ಷಗಳಲ್ಲಿ, ಕಾಂಗ್ರೆಸ್ ಪಕ್ಷದವರು ರಾಜ್ಯವನ್ನು ನಿಂದಿಸುತ್ತಲೇ ಬಂದರು. ಅವರು ನನ್ನನ್ನು ಸಾವಿನ ವ್ಯಾಪಾರಿ ಎಂದು ಕರೆದರು. ನನ್ನ ವಿರುದ್ಧ ಹಲವಾರು ಅವಹೇಳನಕಾರಿ ಪದಗಳನ್ನು ಬಳಸಿದರು' ಎಂದು ಮೋದಿ ಆರೋಪಿಸಿದರು.
ಈಗ ಅವರು(ಕಾಂಗ್ರೆಸ್ ನಾಯಕರು) ಇದ್ದಕ್ಕಿದ್ದಂತೆ ಮೌನವಾಗಿದ್ದಾರೆ. ಹಳ್ಳಿಗಳಿಗೆ ಹೋಗಿ ಜನ ಬಳಿ ಮತ ಕೇಳುತ್ತಿದ್ದಾರೆ. ಗಲಭೆ ಸೃಷ್ಟಿಸುವ ಹಾಗೂ ನನ್ನನ್ನು ನಿಂದಿಸುವ ಹೊರಗುತ್ತಿಗೆಯನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ಪರೋಕ್ಷವಾಗಿ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಈ ಮೂಕ ತಂತ್ರದ ಕುರಿತು ನಾನು ನಿಮಗೆ ಎಚ್ಚರಿಕೆ ನೀಡಲೇಬೇಕು. ದೆಹಲಿಯಲ್ಲಿ ಕುಳಿತವರು ಗುಜರಾತ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಇದೆಲ್ಲವನ್ನೂ ಅವರೇ ನಿಯಂತ್ರಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಆರೋಪಿಸಿದರು.
ಗುಜರಾತ್ನಲ್ಲಿ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಗೆ ಭೇಟಿ ನೀಡಿದ್ದೀರಾ ಎಂದು ಕಾಂಗ್ರೆಸ್ ನಾಯರನ್ನು ಪ್ರಶ್ನಿಸಿ ಎಂದು ಜನರಿಗೆ ಮೋದಿ ಹೇಳಿದರು.
ಸರ್ದಾರ್ ಪಟೇಲ್ ಅವರನ್ನು ಗೌರವಿಸದವರಿಗೆ ಗುಜರಾತ್ನಲ್ಲಿ ಸ್ಥಾನ ನೀಡಬಾರದು ಎಂದು ಅವರು ಕರೆ ನೀಡಿದರು.
ಭ್ರಷ್ಟರ ವಿರುದ್ಧ ಕ್ರಮಕೈಗೊಂಡರೆ, ಒಂದು ಗುಂಪು ನಮ್ಮನ್ನು ಟೀಕಿಸುತ್ತದೆ. ಜನರನ್ನು ಲೂಟಿ ಮಾಡುವವರ ವಿರುದ್ಧ ನಾನು ಕ್ರಮ ಕೈಗೊಳ್ಳಬಾರದೇ ಎಂದು ಅವರು ಕೇಳಿದರು.
ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿವೆ. ಬಿಜೆಪಿ ಹಾಗೂ ಎಎಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಗುಜರಾತ್ ಕಾಂಗ್ರೆಸ್ ನಾಯಕರು ಹಳ್ಳಿಗಳಿಗೆ ಹೋಗಿ ಮತಗಳನ್ನು ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗುಜರಾತ್ನ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.












Click it and Unblock the Notifications