ಕಾಂಗ್ರೆಸ್ ಹಠಾವೋ ಎಂದು ಕರೆ ನೀಡಿದ ಮೋದಿ!
ಪಾಟ್ನಾ, ಅ.27 : ತಮ್ಮ ರಾಜಕೀಯ ಕಡು ವಿರೋಧಿ ನಿತೀಶ್ ಕುಮಾರ್ ಅವರ ರಾಜ್ಯ ಬಿಹಾರದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ವಿರುದ್ಧ ಹೂಂಕರಿಸಿದ್ದಾರೆ. ಸರಣಿ ಬಾಂಬ್ ಸ್ಫೋಟದ ನಡುವೆಯೇ ನರೇಂದ್ರ ಮೋದಿ ಪಾಟ್ನಾಕ್ಕೆ ಆಗಮಿಸಿ, ಕಾಂಗ್ರೆಸ್ ವಿರುದ್ಧ ಗುಡುಗಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟ ಬಿಹಾರದಿಂದಲೇ ಪ್ರಾರಂಭವಾಗಲಿ ಎಂದು ಮೋದಿ ಕರೆ ನೀಡಿದರು.
ಭಾನುವಾರ ಮಧ್ಯಾಹ್ನ ಪಾಟ್ನಾದ ಗಾಂಧಿ ಮೈದಾನದಲ್ಲಿ ನರೇಂದ್ರ ಮೋದಿ ಹೂಂಕಾರ್ ಸಮಾವೇಶ ಉದ್ದೇಶಿಸಿ ಮಾತನಾಡಿದರು ತಮ್ಮ ಮಾತಿನಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಮೇವು ಹಗರಣದಲ್ಲಿ ಜೈಲು ಸೇರಿರುವ ಲಾಲೂ ಪ್ರಸಾದ್ ಯಾದವ್ ಅವರನ್ನು ಟೀಕಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಅರುಣ್ ಜೇಟ್ಲಿ ಮೋದಿ ಜೊತೆಗಿದ್ದರು.
ಹೂಂಕಾರ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಹಾರ ಭಾರತದ ಪುಣ್ಯಭೂಮಿ, ಬುದ್ಧ ಶಾಂತಿ ಸಂದೇಶ ಸಾರಿದ ಭೂಮಿ, ಚಂದ್ರ ಗುಪ್ತ ಮೌರ್ಯ ಆಳಿದ ನಾಡಿದು ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು. ದೇಶದ ಜನರು ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು.
ನಂತರ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ ಹಠಾವೋ, ದೇಶ್ ಬಚಾವೋ ಎಂದು ಬಿಹಾರದ ಜನರಿಗೆ ಕರೆ ನೀಡಿದರು. ಬೆಲೆ ಏರಿಕೆ, ಭ್ರಷ್ಟಾಚಾರ, ಹಗರಣಗಳು ಕೇಂದ್ರ ಸರ್ಕಾರದ ಸಾಧನೆಗಳು, ಇಂತಹ ಸರ್ಕಾರ ನಿಮಗೆ ಬೇಕೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಎಂದು ಸೇರಿದ್ದ ಲಕ್ಷಾಂತರ ಜನರಲ್ಲಿ ಮನವಿ ಮಾಡಿದರು. (ಮೋದಿ ಭಾಷಣದ ಮುಖ್ಯಾಂಶಗಳು)

ಭಾರತೀಯರ ಶಕ್ತಿ ಪ್ರದರ್ಶನ
ಹೂಂಕಾರ್ ಸಮಾವೇಶ ಇದು ನನ್ನ ಸಮಾವೇಶವಲ್ಲ, ಬಿಜೆಪಿ ಸಮಾವೇಶವಲ್ಲ ಭಾರತೀಯರ ಶಕ್ತಿ ಪ್ರದರ್ಶನ ಎಂದು ನರೇಂದ್ರ ಮೋದಿ ಮಾತು ಪ್ರಾರಂಭಿಸಿದರು. ದೇಶದ ಬದಲಾವಣೆ ಬಿಹಾರದಿಂದಲೇ ಪ್ರಾರಂಭವಾಗಲಿ ಕಾಂಗ್ರೆಸ್ ವಿರುದ್ಧ ಬಡವರು ಹೂಂಕರಿಸಿ, ಅವರನ್ನು ಅಧಿಕಾರದಿಂದ ಕಿತ್ತೆಸೆಯುವುದೇ ನಿಮ್ಮ ಗುರಿಯಾಗಬೇಕು ಎಂದು ಕರೆ ನೀಡಿದರು.

ಪವಿತ್ರವಾದ ನಾಡಿದು
ಬಿಹಾರ ಪವಿತ್ರವಾದ ನಾಡು, ಚಂದ್ರಗುಪ್ತ ಮೌರ್ಯನ ಆಡಳಿತ ನಮಗೆ ಸ್ಪೂರ್ತಿ ನೀಡುತ್ತದೆ. ಪಾಟಲೀಪುತ್ರ ನೆನಪಾದರೆ ಅಶೋಕ ಚಕ್ರವರ್ತಿ ನೆನಪಾಗುತ್ತಾನೆ ಇಂತಹ ಪುಣ್ಯ ಭೂಮಿ ಇದು. ಭ್ರಷ್ಟಾಚಾರವನ್ನು ಕಿತ್ತೊಗೆಯುವ ಹೂಂಕಾರ ಬಿಹಾರದಿಂದಲೇ ಪ್ರಾರಂಭವಾಗಬೇಕು ಎಂದು ಮೋದಿ ಹೇಳಿದರು.

ಬಿಹಾರದಿಂದಲೇ ಬದಲಾವಣೆ
ದೇಶದ ಬದಲಾವಣೆ ಬಿಹಾರದಿಂದಲೇ ಪ್ರಾರಂಭವಾಗಲಿ. ಆದ್ದರಿಂದಲೇ ಇದು ಭಾರತೀಯರ ಶಕ್ತಿ ಪ್ರದರ್ಶನ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊಡೆದೊಡಿಸಿ, ಬಿಜೆಪಿಗೆ ಬೆಂಬಲ ನೀಡಿ. ಭ್ರಷ್ಟಾಚಾರ ಕಿತ್ತಸೆದು, ರಾಷ್ಟ್ರದ ಪ್ರಗತಿಯಾಗಲು ನಾವು ಕೆಲಸ ಮಾಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

ಬಿಹಾರ ಜನರಿಗೆ ದ್ರೋಹ ಮಾಡಿದರು
ಬಿಹಾರದ ಜನರು ಅವಕಾಶವಾದಿಗಳಲ್ಲ. ಆದರೆ, ಕೆಲವರನ್ನು ಹೊರತು ಪಡಿಸಿ, ಬಿಹಾರವನ್ನು ಜಂಗಲ್ ರಾಜ್ಯದಿಂದ ಮುಕ್ತಗೊಳಿಸಲು ನಮ್ಮ ಮಿತ್ರರನ್ನು ಮುಖ್ಯಮಂತ್ರಿಯಾಗಿ ಮಾಡಿದೆವು. ಆದರೆ, ಅವರು ಬಿಜೆಪಿಯ ಜೊತೆಗೆ ರಾಜ್ಯದ ಜನರಿಗೂ ದ್ರೋಹ ಮಾಡಿದರು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಮೋದಿ ಗುಡುಗಿದರು.

ಬಿಜೆಪಿ ಸಚಿವರು ಉತ್ತಮ ಕೆಲಸ ಮಾಡಿದರು
ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಎಲ್ಲರೂ ತಿಳಿದು ಕೊಳ್ಳಬೇಕು. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟವಿದ್ದಾಗ ಹೆಚ್ಚು ಕೆಲಸ ಮಾಡಿದ್ದು ಬಿಜೆಪಿ ಸಚಿವರು. ಬಿಜೆಪಿಯೊಂದಿಗಿನ ಸುದೀರ್ಘ ಮೈತ್ರಿಯನ್ನು ಕಡಿದುಕೊಳ್ಳುವ ಮೂಲಕ ಜೆಡಿಯು ಬಿಹಾರದ ಅಭಿವೃದ್ಧಿಯನ್ನು ಕಡೆಗಣಿಸಿತು.

ಬಡವರಿಗೆ ಊಟ ದೊರೆಯುತ್ತಿಲ್ಲ
ಯುಪಿಎ ಎರಡನೇ ಅವಧಿಗೆ ಅಧಿಕಾರ ಪಡೆದಾಗ ನೂರು ದಿನದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವುದಾಗಿ ಹೇಳಿತ್ತು ಬೆಲೆ ಇಳಿಯಿತೇ? ಎಂದು ಜನರನ್ನು ಪ್ರಶ್ನಿಸಿದ ಮೋದಿ. ಬೆಲೆ ಏರಿಕೆಯಿಂದಾಗಿ ಬಡವರು ಹೊಟ್ಟೆ ತುಂಬಾ ಊಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಹಸಿವು, ಬಡತನದ ಬಗ್ಗೆ ಕಾಂಗ್ರೆಸ್ ಗೆ ತಿಳಿದಿಲ್ಲ
ಬಡವರ ಕಷ್ಟದ ಕುರಿತು ಕಾಂಗ್ರೆಸ್ ಪಕ್ಷಕ್ಕೆ ತಿಳುವಳಿಕೆ ಇಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು. ನಾವು ಬಡತನದಲ್ಲಿ ಹುಟ್ಟಿದ್ದೇವೆ ಅದರ ಅನುಭವ ನಮಗೆ ಚೆನ್ನಾಗಿ ಇದೆ. ನಮಗೆ ಅಧಿಕಾರ ನೀಡಿ ಬಡವರಿಗೆ ಹೊಟ್ಟೆ ತುಂಬಾ ಊಟ ಸಿಗುವಂತೆ ಮಾಡುತ್ತೇವೆ ಎಂದು ಮೋದಿ ಹೇಳಿದರು.

ರೈತರು ಮತ್ತು ಬಡವರ ಕಾಳಜಿ ಇಲ್ಲ
ಯುಪಿಎ ಸರ್ಕಾರ ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಗಂಗಾ ನದಿ ಸ್ವಚ್ಛವಾಗಿದೆಯೇ? ಕಾಂಗ್ರೆಸ್ ಜನರಿಗೆ ನೀಡಿದ ಯಾವ ಭರವಸೆಯನ್ನು ಈಡೇರಿಸಿಲ್ಲ. ರೈತರು ಮತ್ತು ಬಡವರ ಕುರಿತು ಕಾಳಜಿ ಇಲ್ಲದ ಸರ್ಕಾರ ಇದು.

ಲಾಲು ವಿರುದ್ಧ ಅನುಕಂಪ
ಲಾಲು ಪ್ರಸಾದ್ ಯಾದವ್ ಅವರು ಯಾವಾಗಲು ನನ್ನ ವಿರುದ್ಧವಾಗಿಯೇ ಮಾತನಾಡುತ್ತಿದ್ದರು. ನನ್ನನ್ನು ಪ್ರಧಾನಿಯನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಕಿಡಿಕಾಡುತ್ತಿದ್ದರು ಎಂದು ನರೇಂದ್ರ ಮೋದಿ ಹೇಳಿದರು. ಆದರೆ ಅವರು ಅಪಘಾತಕ್ಕೀಡಾದಾಗ ನಾನು ಅವರಿಗೆ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸಿದೆ. ಇದರ ಬಗ್ಗೆ ಲಾಲು ಅವರೇ ಮಾಧ್ಯಮಗಳಿಗೆ ಹೇಳಿದ್ದಾರೆ ಇದು ನಮ್ಮ ಸಂಸ್ಕೃತಿ ಎಂದು ಮೋದಿ ಹೇಳಿದರು.

ಜನರೇ ಪಾಠ ಕಲಿಸುತ್ತಾರೆ
ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಅಹಂಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ. 2006ರಲ್ಲಿ ಬಿಹಾರದ ಮುಖ್ಯಮಂತ್ರಿ ವೈಯಕ್ತಿಕ ಕಾರಣಕ್ಕಾಗಿ ಗುಜರಾತ್ಗೆ ಬಂದಾಗ, ನಾವು ಬಹಳ ಕಾಳಜಿಯಿಂದ ಸತ್ಕರಿಸಿದೆವು. ಇದು ನಮ್ಮ ಸಂಸ್ಕೃತಿ ಹೇಳಿಕೊಟ್ಟ ಪಾಠ, ಇಂದು ಅವರು ನಮ್ಮಿಂದ ದೂರವಾಗಿದ್ದಾರೆ ಎಂದು ಮೋದಿ ಪರೋಕ್ಷ ವಾಗ್ದಾಳಿ ನಡೆಸಿದರು.












Click it and Unblock the Notifications