ಮ್ಯಾನ್ಮಾರ್ ಗಡಿಯಲ್ಲಿ ಎಷ್ಟು ಉಗ್ರರು ಹತರಾದರು?
ಮಣಿಪುರ, ಜೂ.11: ಭಾರತೀಯ ಸೇನಾ ಪಡೆಗಳು ಮ್ಯಾನ್ಮಾರ್ ಗಡಿಯಲ್ಲಿ ಎಷ್ಟು ಜನ ಉಗ್ರರನ್ನು ಸದೆಬಡಿದರು ಎಂಬ ವಿಷಯಕ್ಕೆ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಸೈನಿಕರು ಗಡಿ ದಾಟಿ ಕಾರ್ಯಾಚರಣೆ ನಡೆಸಿಲ್ಲ, ಯೋಧರ ಗ್ರೂಪ್ ಫೋಟೊ ನಿಜವಲ್ಲ ಎಂಬ ಸುದ್ದಿಗಳು ಬಂದಿವೆ.
ಮಣಿಪುರ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಮ್ಯಾನ್ಮಾರ್ ಭೂಪ್ರದೇಶದೊಳಗೆ ಭಾರತೀಯ ಸೇನೆ ಎರಡು ದಿನಗಳ ಹಿಂದೆ ಕೈಗೊಂಡ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಈಶಾನ್ಯ ಪ್ರದೇಶದ ಉಗ್ರಗಾಮಿಗಳು ಮೃತಪಟ್ಟಿರಬಹುದು ಎನ್ನಲಾಗಿದೆ. ಅದರೆ, ಮೃತರಾದ ಉಗ್ರರ ಸಂಖ್ಯೆ 20 ದಾಟಿಲ್ಲ ಎಂದು ರಕ್ಷಣಾ ಸಚಿವಾಲಯ ಮೂಲಗಳಿಂದ ತಿಳಿದು ಬಂದಿದೆ.
20 ಜನ ಉಗ್ರರು ಮಾತ್ರ ಹತ್ಯೆ:
ಮ್ಯಾನ್ಮಾರ್ ಹಾಗೂ ಮಣಿಪುರ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಜನ ಮೃತರಾಗಿದ್ದು, ಎಲ್ಲರೂ ಎನ್ ಸಿಸಿಎನ್ (ಕೆ) ಸದಸ್ಯರು ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಭಾರತದ ಯಾವುದೇ ಸೈನಿಕರಿಗೆ ಗಾಯವಾಗಿಲ್ಲ. ಗಾಯಗೊಂಡಿರುವ 15 ಜನ ಉಗ್ರರು ತೀವ್ರವಾಗಿ ಗಾಯಗೊಂಡಿದ್ದರೆ 12 ಉಗ್ರಗಾಮಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಲ್ಲರಿಗೂ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಒನ್ ಇಂಡಿಯಾಗೆ ಮಾಹಿತಿ ಸಿಕ್ಕಿದೆ.

ಭಾರತೀಯ ಸೇನೆಯ 45 ನಿಮಿಷಗಳ ಕಾರ್ಯಾಚರಣೆ
ಭಾರತೀಯ ಸೈನಿಕರ ಹಠಾತ್ ದಾಳಿಯಿಂದ ಉಗ್ರಗಾಮಿಗಳು ವಿಚಲಿತರಾದರು. ಪ್ರತಿದಾಳಿ ನಡೆಸಲು ಅವರಿಗೆ ಸಮಯವೇ ಸಿಗಲಿಲ್ಲ ಎಂದು ತಿಳಿದು ಬಂದಿದೆ. ನಾಗಾಲ್ಯಾಂಡ್ ರಾಜ್ಯಕ್ಕೆ ಹೊಂದಿಕೊಂಡಿರುವ ಮ್ಯಾನ್ಮಾರ್ನ ಪ್ರದೇಶದಲ್ಲೂ ಸೇನೆಯ ವಿಶೇಷ ಪಡೆಗಳು ಕಾರ್ಯಾಚರಣೆ ಕೈಗೊಂಡಿದೆ.
ಮ್ಯಾನ್ಮಾರ್ನ ಭೂಪ್ರದೇಶದೊಳಗೆ ಕಮಾಂಡೊ ಕಾರ್ಯಾಚರಣೆ ಕೈಗೊಳ್ಳುವ ಸೇನೆಯ ನಿರ್ಧಾರವನ್ನು ಮ್ಯಾನ್ಮಾರ್ ಸರಕಾರಕ್ಕೆ ಮುಂಚಿತವಾಗಿ ತಿಳಿಸಲಾಗಿತ್ತು. ದಾಳಿ ಬಗ್ಗೆ ಜೂ.7ರಂದೇ ಪ್ರಧಾನಿ ಮೋದಿ ಅವರಿಗೆ ತಿಳಿಸಲಾಗಿತ್ತು ಎಂದು ಭಾರತೀಯ ಸೇನೆ ತಿಳಿಸಿದೆ. ವಿಶೇಷ ಪಡೆಯ ಸೈನಿಕರ ಕಾರ್ಯಾಚರಣೆಗೆ ವಾಯುಪಡೆಯ ಹೆಲಿಕಾಫ್ಟರ್ಗಳು ಮತ್ತು ಡ್ರೋನ್ಗಳ ನೆರವು ಪಡೆದುಕೊಂಡಿರಲಿಲ್ಲ.
ಬಂಡುಕೋರರ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಗುಪ್ತಚರರು ಎರಡು ದಿನಗಳ ಹಿಂದೆ ಗಡಿ ದಾಟಿ ಮ್ಯಾನ್ಮಾರ್ನೊಳಗೆ ನುಸುಳಿದ್ದರು.
ಅವರು ಅಲ್ಲಿನ ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಖಪ್ಲಾಂಗ್) ಮತ್ತು ಅದಕ್ಕೆ ನಿಷ್ಠೆ ಹೊಂದಿದ ಬಂಡುಕೋರ ಗುಂಪುಗಳ ಎರಡು ಶಿಬಿರಗಳನ್ನು ಪತ್ತೆ ಹಚ್ಚಿ ಬಂಡುಕೋರರ ಗುಹೆಗಳ ನಿಖರ ಫೋಟೊ ಸಹಿತ ಮಾಹಿತಿಯೊಂದಿಗೆ ಹಿಂದಿರುಗಿದ್ದರು. ಆಂಗ್ಜೆಯಾ ಹಾಗೂ ಪೊನ್ಯೂ ಶಿಬಿರಗಳಲ್ಲಿ 40ಕ್ಕೂ ಅಧಿಕ ಉಗ್ರರು ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ಪೂರ್ವ ಯೋಜನೆಯಂತೆ ಕಾರ್ಯಚಾರಣೆ ನಡೆಸಿ ಹತ್ಯೆ ಮಾಡಲಾಗಿದೆ.












Click it and Unblock the Notifications