ಮೋದಿ ನಾಡಿನಲ್ಲಿ ಮುಸ್ಲಿಮರು ಸುಭಿಕ್ಷವಾಗಿದ್ದಾರೆ: NSS
ನವದೆಹಲಿ, ಮಾರ್ಚ್ 28: ಹೌದು, ಗುಜರಾತ್ ಮತ್ತು ಕೇರಳದಲ್ಲಿ ಮುಸ್ಲಿಮರು ಸುಭಿಕ್ಷವಾಗಿದ್ದಾರೆ ಎಂದು ಸ್ವತಃ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ವರದಿ ನೀಡಿದೆ. ಇದರಿಂದ ಚುನಾವಣೆಯ ಹೊಸ್ತಿಲಲ್ಲಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಬೆಂಬಲ ಸಿಕ್ಕಿದಂತಾಗಿದೆ.
ಗುಜರಾತ್ ಮತ್ತು ಕೇರಳ ಸರಕಾರಗಳು ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರಲ್ಲಿ ಬಡತನವನ್ನು ಹೋಗಲಾಡಿಸಿದ್ದು, ಅವರ ಅಭಿವೃದ್ಧಿಗೆ ನೆರವಾಗಿದೆ ಎಂದು National Sample Survey ತಾಜಾ ವರದಿ ತಿಳಿಸಿದೆ. ಗೋವಾದಲ್ಲಿ ಮುಸ್ಲಿಂಮರಲ್ಲಿ ತಾಂಡವವಾಡುತ್ತಿದ್ದ ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸಲಾಗಿದೆ.
ಕಳೆದ 7 ವರ್ಷಗಳಲ್ಲಿ ಈ ಎರಡೂ ರಾಜ್ಯಗಳಲ್ಲಿ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲ್ಲೂ ಮುಸ್ಲಿಂ ಸಮುದಾಯದವರಲ್ಲಿನ ಬಡತನವನ್ನು ಹೋಗಲಾಡಿಸಲು ಹೆಚ್ಚು ಕಾಳಜಿ ವಹಿಸಿದ್ದು, ತತ್ಫಲವಾಗಿ ಮಸ್ಲಿಮರ ದೈನಂದಿನ ಬದುಕು ಸುಧಾರಿಸಿದೆ ಎಂದು NSS ವರದಿ ಹೇಳಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

2006ರಲ್ಲಿ ಜಸ್ಟೀಸ್ ಸಾಚಾರ್ ಸಮಿತಿ ಸಲ್ಲಿಸಿರುವ ಸಲಹಾ ವರದಿಯನ್ನು ಗುಜರಾತಿನಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದ್ದು, ಅಲ್ಲಿನ ಮುಸ್ಲಿಮರ ಸಾಮಾಜಿಕ- ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಸಾಗಿದೆ ಎಂದು ವರದಿ ತಿಳಿಸಿದೆ.
ಗ್ರಾಮೀಣ ಗುಜರಾತಿನಲ್ಲಿ ಬಡತನ ರೇಖೆಗಿಂತ (BPL) ಕೆಳಗಿರುವ ಮುಸ್ಲಿಮರ ಸಂಖ್ಯೆ 2004-05 ಶೇ. 31 ರಷ್ಟಿತ್ತು. ಅದು 2011-12 ರ ವೇಳೆಗೆ ಶೇ. 7 ಕ್ಕೆ ಕುಸಿದಿದೆ. ಇದೇ ವೇಳೆ, ಪಟ್ಟಣ ಪ್ರದೇಶಗಳಲ್ಲೂ ಮುಸ್ಲಿಂ ಸಮುದಾಯದವರ ಜೀವ ಸುಧಾರಣೆ ಕಂಡಿದೆ. ಶೇ. 42 ರಿಂದ ಶೇ. 14.6ಕ್ಕೆ ಕುಸಿದಿದೆ.
ಆರ್ಥಿಕತೆಯ ಮಾನದಂಡವಾದ ತಲಾ ಖರ್ಚು-ವೆಚ್ಚ ಪ್ರಮಾಣ ಕಳೆದ 7 ವರ್ಷಗಳಲ್ಲಿ ಗ್ರಾಮೀಣ ಗುಜರಾತಿನಲ್ಲಿ ರೂ 209 ರಿಂದ 291ಕ್ಕೆ ಏರಿದೆ. ಇದೇ ವೇಳೆ ಪಟ್ಟಣ ಪ್ರದೇಶಗಳಲ್ಲಿ ಸಹ ಖರ್ಚು ಸಾಮರ್ಥ್ಯ ರೂ 259 ರಿಂದ 328 ಕ್ಕೆ ಏರಿದೆ. ಡಾ. ಅಮಿತಾಭ್ ಖಂಡು ಸಮಿತಿಯ ಈ ವರದಿಯು ಜೂನ್ ವೇಳೆಗೆ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗುವ ಅಂದಾಜಿದೆ.












Click it and Unblock the Notifications