ಬಿಹಾರ: ಗೋರಕ್ಷಕರ ಹೆಸರಿನಲ್ಲಿ ಮತ್ತೆ ಹಿಂಸೆ
ಗೋ ಮಾಂಸ ಭಕ್ಷಣೆ ಆರೋಪದ ಮೇರೆಗೆ ಬಿಹಾರದಲ್ಲಿ ಮುಸ್ಲಿಂ ಸಮುದಾಯದ ಕುಟುಂಬದ ಮೇಲೆ ಕಿಡಿಗೇಡಿಗಳ ಹಲ್ಲೆ. ಬಿಹಾರದ ಚಂಪಾರಣ್ಯದ ಪಶ್ಚಿಮ ಭಾಗದಲ್ಲಿರುವ ದುಂಪಾ ಎಂಬ ಹಳ್ಳಿಯಲ್ಲಿ ನಡೆದ ಘಟನೆ.
ಪಾಟ್ನಾ, ಆಗಸ್ಟ್ 18: ಗೋರಕ್ಷಕರ ಹೆಸರಿನಲ್ಲಿ ಹಿಂಸಾಚಾರ ಮಾಡಕೂಡದೆಂದು ಪ್ರಧಾನಿ ಮೋದಿ ಪದೇ ಪದೇ ಕರೆ ನೀಡುತ್ತಿದ್ದರೂ, ಅಂಥ ಪ್ರಕರಣಗಳು ಪುನರಾವರ್ತನೆಗೊಳ್ಳುತ್ತಲೇ ಸಾಗಿವೆ.
ಬಿಹಾರದ ಪಶ್ಚಿಮ ಚಂಪಾರಣ್ ಪ್ರದೇಶದ ದುಂಪಾ ಎಂಬ ಹಳ್ಳಿಯೊಂದರ ತಮ್ಮ ಮನೆಗಳಲ್ಲಿ ಗೋ ಮಾಂಸ ಭಕ್ಷಣೆ ಮಾಡಿದ್ದಾರೆಂಬ ಆರೋಪದ ಮೇರೆಗೆ ಮುಸ್ಲಿಮರ ಒಂದು ಗುಂಪಿನ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.

ಉಗ್ರ ಸ್ವರೂಪ ತಾಳಿದ್ದ ಗುಂಪೊಂದು ಹಳ್ಳಿಯ ಮೊಹಮ್ಮದ್ ಶಹಾಬುದ್ದೀನ್ ಎಂಬುವರ ಮನೆಯ ಮುಂದೆ ನಿಂತು ಅವರನ್ನು ಎಬ್ಬಿಸಿದೆ. ಮನೆಯಲ್ಲಿ ಗೋ ಮಾಂಸ ಭಕ್ಷಣೆ ಮಾಡಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ಈ ಗೋ ಮಾಂಸ ಎಲ್ಲಿಂದ ತಂದಿರೆ ಎಂದು ಪ್ರಶ್ನಿಸಿದ್ದಾರೆ.
ಸುಮಾರು 50 ಜನರು ದೊಣ್ಣೆಗಳನ್ನು ಹಿಡಿದು ಬಂದು ಈ ರೀತಿಯಾಗಿ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಬೆದರಿದ ಮೊಹಮ್ಮದ್ ಉತ್ತರ ಹೇಳಲು ತಡವರಿಸುತ್ತಿದ್ದಂತೆ ಕ್ರೋಧಗೊಂಡ ಆ ತಂಡ, ಆತನನ್ನು ಎಳೆದು ತಂದು ಮನೆಯ ಅಂಗಳದಲ್ಲಿ ಹೊಡೆಯಲಾರಂಭಿಸಿದೆ. ಈ ಗುಂಪಿನಲ್ಲಿ, ವಿಶ್ವ ಹಿಂದೂ ಪರಿಷತ್ ನ ಸ್ಥಳೀಯ ನಾಯಕರೂ ಇದ್ದರೆಂದು ಸಂತ್ರಸ್ತರು ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆಂದು ವರದಿಯಾಗಿದೆ.











Click it and Unblock the Notifications