ಮೋದಿ ಮೇಲೆ ರಾಸಾಯನಿಕ ದಾಳಿ ಎಚ್ಚರಿಕೆ: ಸೆಕ್ಯುರಿಟಿ ಗಾರ್ಡ್ ಬಂಧನ
ಮುಂಬೈ, ಜುಲೈ 30: ರಾಷ್ಟ್ರೀಯ ಭದ್ರತಾ ದಳದ (ಎನ್ಎಸ್ಜಿ) ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮೋದಿ ಅವರ ಮೇಲೆ 'ರಾಸಾಯನಿಕ ದಾಳಿ' ನಡೆಸುವ ಎಚ್ಚರಿಕೆ ನೀಡಿದ 22 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಸೆಕ್ಯುರಿಟಿ ಗಾರ್ಡ್ಆಗಿ ಕೆಲಸ ಮಾಡುತ್ತಿದ್ದ ಕಾಶಿನಾಥ್ ಮಂಡಲ್ ಎಂಬಾತನನ್ನು ಡಿಬಿ ಮಾರ್ಗ್ ಠಾಣೆ ಪೊಲೀಸರು ಜುಲೈ 27ರಂದು ಸೆಂಟ್ರಲ್ ಮುಂಬೈನಲ್ಲಿ ಬಂಧಿಸಿದ್ದಾರೆ.
ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?
ನವದೆಹಲಿಯಲ್ಲಿರುವ ಎನ್ಎಸ್ಜಿ ನಿಯಂತ್ರಣ ಕೊಠಡಿಯ ಸಂಪರ್ಕ ಸಂಖ್ಯೆ ಕಲೆಹಾಕಿದ್ದ ಕಾಶಿನಾಥ್, ಶುಕ್ರವಾರ ಕರೆ ಮಾಡಿ ಪ್ರಧಾನಿ ಮೇಲೆ ರಾಸಾಯನಿಕ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದ.
ಮುಂಬೈನಿಂದ ಬಂದಿದ್ದ ಕರೆಯನ್ನು ಟ್ರ್ಯಾಕ್ ಮಾಡಿದ್ದ ಎನ್ಎಸ್ಜಿ, ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿತ್ತು.
ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಕೇಶ್ವರದಲ್ಲಿರುವ ಗುಡಿಸಲೊಂದರ ನಿವಾಸಿ ಜಾರ್ಖಂಡ್ ಮೂಲದ ಕಾಶಿನಾಥ್ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಮೋದಿ ಹತ್ಯೆಗೆ ಸಂಚು, ವದಂತಿ ಹಿಂದೆ ಜನಪ್ರಿಯತೆಯ ತಂತ್ರ: ಕಾಂಗ್ರೆಸ್
ಬಂಧನದ ವೇಳೆ ಆತ ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿದ್ದು, ಸೂರತ್ಗೆ ಹೊರಡುವ ರೈಲು ಹತ್ತಲು ಸಿದ್ಧತೆ ನಡೆಸಿದ್ದ.
ತನ್ನ ಸ್ನೇಹಿತ ಇತ್ತೀಚೆಗೆ ಜಾರ್ಖಂಡ್ನಲ್ಲಿ ನಕ್ಸಲ್ ದಾಳಿಯಲ್ಲಿ ಬಲಿಯಾಗಿದ್ದ. ಇದಕ್ಕಾಗಿ ಪ್ರಧಾನಿಯನ್ನು ಭೇಟಿ ಮಾಡಿ ಮಾತನಾಡಲು ತಾನು ಬಯಸಿದ್ದಾಗಿ ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆತನನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿತ್ತು.