ಕಾಂಗ್ರೆಸ್ ಪರ ಪ್ರಚಾರಕ್ಕೆ ಸಚಿನ್, ಶಾರುಖ್
ಭೋಪಾಲ್, ಸೆ.16: ಮಧ್ಯಪ್ರದೇಶದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಶತಪ್ರಯತ್ನ ಮಾಡುತ್ತಿರುವ ವಿಪಕ್ಷ ಕಾಂಗ್ರೆಸ್ ಈಗ ಭಾರಿ ಪ್ರಚಾರ ತಂತ್ರ ರೂಪಿಸಿದೆ. ಕಿಂಗ್ ಖಾನ್ ಶಾರುಖ್ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.
ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ ಚುನಾವಣಾ ಪ್ರಚಾರ ಸಮಿತಿ ಸದಸ್ಯರಾದ ಮಹೇಶ್ ಜೋಶಿ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ರಾಜ್ಯ ಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಹಾಗೂ ಶಾರುಖ್ ಖಾನ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದಿದ್ದಾರೆ.
ಇವರಿಬ್ಬರ ಜತೆಗೆ ಉತ್ತರಪ್ರದೇಶದ ಮೊರಾದಾಬಾದಿನ ಸಂಸದ, ಮಾಜಿ ಕ್ರಿಕೆಟರ್ ಮಹಮ್ಮದ್ ಅಜರುದ್ದೀನ್ ಅವರನ್ನು ಪ್ರಚಾರಕ್ಕೆ ಕರೆ ತರಲು ಸ್ಥಳೀಯ ಕಾಂಗ್ರೆಸ್ ಘಟಕ ನಿರ್ಧರಿಸಿದೆ.

ಸಚಿನ್ ಹಾಗೂ ಶಾರುಖ್ ಅವರ ಜನಪ್ರಿಯತೆ ಬಳಸಿಕೊಳ್ಳಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ. ಇಬ್ಬರನ್ನು ಪ್ರಚಾರಕ್ಕೆ ಕರೆದುಕೊಂಡು ಬರುವ ಹೊಣೆಯನ್ನು ನಟ ಕಮ್ ರಾಜಕಾರಣಿ ಫಿರೋಜಾಬಾದ್ ಸಂಸದ ರಾಜ್ ಬಬ್ಬರ್ ಗೆ ನೀಡಲಾಗಿದೆ.
ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಭಾರಿ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗಿದೆ. ಇದು ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಎಂದರೂ ಅಡ್ಡಿ ಇಲ್ಲ. ಗಣ್ಯರ ವೇಳಾಪಟ್ಟಿ ನೋಡಿಕೊಂಡು ಪ್ರಚಾರ ಸಮಯವನ್ನು ನಿಗದಿ ಮಾಡಲಾಗುತ್ತದೆ ಎಂದು ಜೋಶಿ ಹೇಳಿದ್ದಾರೆ.
ಒಟ್ಟಾರೆ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು, ವಿವಿಧ ತಂತ್ರಗಳನ್ನು ಹೆಣೆಯುತ್ತಿದೆ. ಮನೆ ಮನೆ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅವಧಿಗೆ ಮುನ್ನವೇ ಕಾಂಗ್ರೆಸ್ ಕಾರ್ಯಕರ್ತರು ತಮ್ಮಮ್ಮ ಬ್ಲಾಕುಗಳಿಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸಿರುವುದು ಕಂಡು ಬಂದಿದೆ. ಒನ್ ಇಂಡಿಯಾ ಸುದ್ದಿ












Click it and Unblock the Notifications