20 ಮಂದಿ ಮೇಲೆ ದಾಳಿ ಮಾಡಿದ್ದ ಕೋತಿ ಸೆರೆ!: ಕೋತಿ ಮೇಲೆ ಇದ್ದಿದ್ದು 21,000 ಬಹುಮಾನ!
ಭೋಪಾಲ್ , ಜೂನ್. 22: ಮಧ್ಯಪ್ರದೇಶದ ರಾಜ್ಗಢ ಪಟ್ಟಣದಲ್ಲಿ 20 ಜನರ ಮೇಲೆ ದಾಳಿ ನಡೆಸಿದ್ದ ಕೋತಿಯನ್ನು ಸೆರೆ ಹಿಡಿಯಲಾಗಿದೆ. ಆರೋಪಿ, ಅಪರಾಧಿಗಳನ್ನು ಹಿಡಿಯಲು ಪೊಲೀಸರು ಬಹುಮಾನ ಘೋಷಿಸುವಂತೆ ಈ ಕೋತಿಯ ತಲೆಯ ಮೇಲೆ 21,000 ಬಹುಮಾನ ಘೋಷಿಸಲಾಗಿತ್ತು. ಇದಾಗಿ ಎರಡು ವಾರಗಳ ನಂತರ ಅದನ್ನು ಸೆರೆಹಿಡಿಯಲಾಗಿದೆ.
ನಿನ್ನೆ ಸಂಜೆ, ಉಜ್ಜಯಿನಿಯಿಂದ ಕರೆಸಲ್ಪಟ್ಟ ರಕ್ಷಣಾ ತಂಡವು ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿಕೊಂಡು ತೀವ್ರ ಆಕ್ರೋಶಕ್ಕೆ ಒಳಗಾಗಿದ್ದ ಕೋತಿಯನ್ನು ಹಿಡಿಯಲು ಪ್ರಯತ್ನಿಸಿತು. ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ತಂಡ, ಡಾರ್ಟ್ಗಳನ್ನು ಬಳಸಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಯಿತು ಮತ್ತು ನಂತರ ಅದನ್ನು ಪಂಜರದಲ್ಲಿ ಸೆರೆಹಿಡಿಯಿತು.

ಸ್ಥಳದಿಂದ ಬಂದ ದೃಶ್ಯಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಪ್ರಾಣಿ ರಕ್ಷಣಾ ವಾಹನಕ್ಕೆ ಬಲೆಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಅಲ್ಲಿನ ಗುಂಪು ಜೈ ಶ್ರೀ ರಾಮ್ ಮತ್ತು ಜೈ ಬಜರಂಗ ಬಲಿ ಘೋಷಣೆಗಳನ್ನು ಕೂಗಿದೆ. ಕೋತಿಯ ದಾಳಿಯಿಂದಾಗಿ ಆ ಪ್ರದೇಶದಲ್ಲಿನ ವ್ಯಕ್ತಿಯೊಬ್ಬ ತನ್ನ ಮನೆಯ ಟೆರೇಸ್ನಲ್ಲಿ ಬಂದೂಕಿನಿಂದ ಕಾವಲು ಕಾಯುತ್ತಿರುವ ದೃಶ್ಯ ಕೂಡ ಕಾಣಿಸಿದೆ.
ಕಳೆದ ಹದಿನೈದು ದಿನಗಳ ಹಿಂದೆ ಕೋತಿ ದಾಳಿ ನಡೆಸಿದ 20 ಜನರ ಪೈಕಿ ಎಂಟು ಮಕ್ಕಳೂ ಸೇರಿದ್ದಾರೆ. ಕೋತಿ, ಛಾವಣಿಗಳು ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ಧಾವಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಅನೇಕರು ಆಳವಾದ ಗಾಯಗಳಿಂದ ಬಳಲುತ್ತಿದ್ದಾರೆ. ಅನೇಕರಿಗೆ ಹೊಲಿಗೆಗಳನ್ನು ಹಾಕಲಾಗಿದೆ.
ಈ ಕೋತಿಯನ್ನು ಹಿಡಿಯಲು ಪುನರಾವರ್ತಿತ ಪ್ರಯತ್ನಗಳು ವಿಫಲವಾದ ನಂತರ, ಸ್ಥಳೀಯ ಅಧಿಕಾರಿಗಳು 21,000 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು ಮತ್ತು ವಿಶೇಷ ರಕ್ಷಣಾ ತಂಡವನ್ನು ಸಹ ಕರೆದಿದ್ದರು. "ಆ ಕೋತಿಯನ್ನು ಹಿಡಿಯಲು ಪುರಸಭೆಯಿಂದ ಆಗದ ಕಾರಣ, ಜಿಲ್ಲಾಧಿಕಾರಿ ಅವರ ಸಹಾಯದಿಂದ ಉಜ್ಜಯಿನಿಯ ಅರಣ್ಯ ಇಲಾಖೆಯ ರಕ್ಷಣಾ ತಂಡವನ್ನು ಕರೆಸಿದ್ದೇವೆ. ಪಾಲಿಕೆ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಅವರಿಗೆ ಸಹಾಯ ಮಾಡಿದರು. ಕೋತಿಯನ್ನು ಹಿಡಿಯಲು 4 ಗಂಟೆಗಳ ಕಾಲಾವಕಾಶ ನೀಡಲಾಗಿತ್ತಿ" ಎಂದು ರಾಜ್ಗಢ ಪುರಸಭೆಯ ಅಧ್ಯಕ್ಷ ವಿನೋದ್ ಸಾಹು ತಿಳಿಸಿದ್ದಾರೆ.
ಕೋತಿಯನ್ನು ಹಿಡಿಯಲು ಸಹಾಯ ಮಾಡಿದರೇ 21 ಸಾವಿರ ನಗದು ಬಹುಮಾನ ನೀಡುವುದಾಗಿ ಹೇಳಿದ್ದೆವು, ಈಗ ಅದನ್ನು ಪ್ರಾಣಿ ರಕ್ಷಣಾ ತಂಡಕ್ಕೆ ನೀಡುತ್ತೇವೆ ಎಂದಿದ್ದಾರೆ. ರಾಜ್ಗಢ್ನಲ್ಲಿ ಸ್ಥಳೀಯ ತಂಡ ಕಳೆದ ಎರಡು ವಾರಗಳಿಂದ ಕೋತಿಯನ್ನು ಹಿಡಿಯಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ ಎಂದು ಅರಣ್ಯಾಧಿಕಾರಿ ಗೌರವ್ ಗುಪ್ತಾ ಹೇಳಿದ್ದಾರೆ.












Click it and Unblock the Notifications