ಮಸೀದಿ ಹೇಳಿಕೆ: ಸುಬ್ರಹ್ಮಣ್ಯಸ್ವಾಮಿ ವಿರುದ್ಧ ಎಫ್ಐಆರ್
ನವದೆಹಲಿ, ಮಾ.15: ಮಸೀದಿ ಧಾರ್ಮಿಕ ಕೇಂದ್ರವಲ್ಲ, ಅದೊಂದು ಕೇವಲ ಕಟ್ಟಡ. ಇದನ್ನು ಯಾವುದೇ ಸಂದರ್ಭದಲ್ಲೂ ನೆಲಸಮ ಮಾಡಬಹುದೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಗುವಾಹಟಿಯಲ್ಲಿ ನಡೆದ ಹಿಂದೂ ವಿರಾಟ್ ಸಂಗಮದಲ್ಲಿ ಮಾತನಾಡಿದ ಸುಬ್ರಹ್ಮಣ್ಯಸ್ವಾಮಿ ಅವರು, ಮಸೀದಿ ಧಾರ್ಮಿಕ ಕೇಂದ್ರವಲ್ಲ, ಇದು ಕೇವಲ ಒಂದು ಕಟ್ಟಡ ಮಾತ್ರ. ಇದನ್ನು ಯಾವುದೇ ವೇಳೆ ಧ್ವಂಸ ಮಾಡಬಹುದು. ನನ್ನ ಈ ಮಾತನ್ನು ಯಾರಾದರೂ ಒಪ್ಪದಿದ್ದರೂ ಅವರ ಜತೆ ನಾನು ಸಾರ್ವಜನಿಕ ಚರ್ಚೆಗೆ ಸಿದ್ಧ. ಈ ಮಾಹಿತಿಯನ್ನು ನಾನು ಸೌದಿ ಅರೇಬಿಯಾದಿಂದ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದರು.

ಭಾರತದಲ್ಲಿರುವ ಎಲ್ಲ ಮುಸ್ಲಿಮರು ಹಿಂದೂಗಳಾಗಿದ್ದಾರೆ. ಮಸೀದಿಯ ಅಗತ್ಯವೇ ಇಲ್ಲ ಎಂದು ವಿವಾದದ ಕಿಡಿ ಹಚ್ಚಿದ್ದರು. ಅವರ ಈ ಹೇಳಿಕೆಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ. ಸಮಿತಿ ಸುಬ್ರಹ್ಮಣ್ಯಸ್ವಾಮಿ ವಿರುದ್ಧ ಕೃಷಿಕ್ ಮುಕ್ತಿ ಸಂಘ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದೆ.
ಲಟಾಸಿಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಹಿಂದು ಮತ್ತು ಮುಸ್ಲಿಂ ನಡುವೆ ಕೋಮು ಗಲಭೆ ಸೃಷ್ಟಿಸುತ್ತಿರುವ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ದೆಹಲಿಯ ಮುಸ್ಲಿಂ ಸಂಘಟನೆ ಡಾ.ಸುಬ್ರಹ್ಮಣ್ಯಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧವಾಗಿದೆ.
ಅಸ್ಸೋಂನಲ್ಲಿ ಈಗಾಗಲೇ ಸ್ವಾಮಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೋಮು ಗಲಭೆ ಸೃಷ್ಟಿಸಿ ಪರಿಸ್ಥಿತಿ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಕಿಡಿಕಾರಿದ್ದಾರೆ.
ಪಿಟಿಐ












Click it and Unblock the Notifications