Ayodhya: ಒಂದೇ ತಿಂಗಳಲ್ಲಿ 50 ಲಕ್ಷ ಭಕ್ತರ ಭೇಟಿ: ಅಯೋಧ್ಯೆಯ ಈಗಿನ ವ್ಯವಸ್ಥೆ ಹೇಗಿದೆ ಗೊತ್ತಾ?
ಅಯೋಧ್ಯೆ , ಫೆಬ್ರವರಿ 23: ಜನವರಿ 22ರಂದು ಲೋಕಾರ್ಪಣೆಗೊಂಡ ಅಯೋಧ್ಯೆ ರಾಮಮಂದಿರಕ್ಕೆ ಕಳೆದ ಒಂದು ತಿಂಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮಮಂದಿರದಲ್ಲಿರುವ ರಾಮಲಲ್ಲಾನನ್ನು ನೋಡಲು ದೇಶದ ಭಕ್ತರು ಮಾತ್ರವಲ್ಲದೇ ವಿದೇಶದಿಂದಲೂ ನೂರಾರು ಜನರು ಪ್ರತಿನಿತ್ಯ ಆಗಮಿಸುತ್ತಿದ್ದಾರೆ. ಹೀಗಾಗಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಭಕ್ತರ ಕಾಯುವ ಸಮಯ ಕಡಿಮೆಯಾಗಿದೆ. ಹೆಚ್ಚೆಂದರೆ ರಾಮಲಲ್ಲಾನ ದರ್ಶನಕ್ಕೆ ಒಂದು ಗಂಟೆಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಭಕ್ತರ ಮಾತಾಗಿದೆ.

ದೇವಸ್ಥಾನಕ್ಕೆ ಹೋಗಲು ರಾಮ್ ಪಥದಲ್ಲಿ ಸುಮಾರು ಎರಡರಿಂದ ಮೂರು ಕಿಲೋಮೀಟರ್ ನಡೆಯಬೇಕಾಗುತ್ತದೆ. ಆದರೆ ಯಾವುದೇ ತಳ್ಳುವಿಕೆ ಮತ್ತು ಅವ್ಯವಸ್ಥೆ ಇಲ್ಲ. ಪ್ರತಿ ಹಂತದಲ್ಲೂ ಸರತಿ ಸಾಲನ್ನು ಭದ್ರತಾ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಅಯೋಧ್ಯೆ ಈಗಾಗಲೇ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳವಾಗಿದೆ.
ಸದ್ಯ ಅಯೋಧ್ಯೆಗೆ ರಸ್ತೆ ಮಾರ್ಗ, ರೈಲ್ವೆ ಮಾರ್ಗ ಹಾಗೂ ವಾಯು ಮಾರ್ಗದಲ್ಲಿ ತಲುಪಲು ಅವಕಾಶವಿದ್ದು, ವೃದ್ಧರು, ಯುವಕರು ಮತ್ತು ಮಕ್ಕಳು ಸೇರಿದಂತೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ರಾಮ ಜನ್ಮಭೂಮಿ ಪಥ ಮತ್ತು ಭಕ್ತಿ ಪಥ ಎರಡೂ ದಿನವಿಡೀ ಯಾತ್ರಾರ್ಥಿಗಳಿಂದ ತುಂಬಿರುತ್ತದೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರವು ಇದೀಗ 300 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಕೀರ್ಣಕ್ಕೆ ಮೂರು ಪ್ರವೇಶ ರಸ್ತೆಗಳನ್ನು ನಿರ್ಮಿಸಲು ನಿರ್ಧರಿಸಿದೆ.
ಸದ್ಯ ಅಯೋಧ್ಯೆಯಲ್ಲಿ ಹೋಟೆಲ್ ಕೊಠಡಿಗಳು ದುಬಾರಿಯಾಗಿದ್ದು, ಪಡೆಯುವುದು ಕೂಡ ಕಷ್ಟವಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಹೊಸ ಹೋಟೆಲ್ಗಳು ಮತ್ತು ರೆಸಾರ್ಟ್ಗಳಿಗಾಗಿ 3,200 ಕೋಟಿ ರೂಪಾಯಿಗಳ ಹೂಡಿಕೆ ಯೋಜನೆಗಳಿಗೆ ಇತ್ತೀಚಿಗೆ ಚಾಲನೆ ನೀಡಿದರು.

ಇನ್ನು ಅಯೋಧ್ಯೆಯಲ್ಲಿ ಯೋಗಿ ಸರ್ಕಾರವು ನಿರ್ಮಿಸಿದ ಬೃಹತ್ ಟೆಂಟ್ ಸಿಟಿಯು ಸದ್ಯ ಭಕ್ತರಿಗೆ ವರದಾನವಾಗಿದೆ. ಈ ಟೆಂಟ್ ಸಿಟಿಯಿಂದ ದೇವಸ್ಥಾನ ಸಂಕೀರ್ಣ ಮತ್ತು ರೈಲು ನಿಲ್ದಾಣಕ್ಕೆ ಬಸ್ಸುಗಳು ಸಂಚರಿಸುತ್ತದೆ. ಇನ್ನು ದೇವಾಲಯದ ಟ್ರಸ್ಟ್ನಿಂದ ವಯೋವೃದ್ಧರಿಗಾಗಿ ಉಚಿತ ಗಾಲಿಕುರ್ಚಿ ವ್ಯವಸ್ಥೆ ಕೂಡ ಇದ್ದು, ಒಬ್ಬ ಸಹಾಯಕಿಯನ್ನು ಕೂಡ ಈ ಕಾರ್ಯಕ್ಕೆ ನೇಮಿಸಲಾಗಿದೆ.
ಒಟ್ಟಾರೆ ಪ್ರತಿನಿತ್ಯ ಸಾವಿರಾರು ಕೆಲವು ದಿನ ಲಕ್ಷಾಂತರ ಭಕ್ತರು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುತ್ತಿದ್ದರೂ ಸಹ ಭಕ್ತರಿಂದ ಯಾವುದೇ ದೂರಿಲ್ಲ. ದೇವಾಲಯದ ಟ್ರಸ್ಟ್ ವತಿಯಿಂದ ಭಕ್ತರಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿಯೊಬ್ಬ ಭಕ್ತನೂ ಸಹ ಯಾವುದೇ ನೂಕುನುಗ್ಗಲು ಇಲ್ಲದೇ ರಾಮಲಲ್ಲಾನನ್ನು ಕಣ್ತುಂಬಿಕೊಂಡು ವಾಪಸ್ ಆಗುತ್ತಿದ್ದಾರೆ.












Click it and Unblock the Notifications