ಕರಾವಳಿ ಕರ್ನಾಟಕದಲ್ಲಿ ಮುಂದುವರಿಯಲಿದೆ ಭಾರೀ ಮಳೆ
ಬೆಂಗಳೂರು, ಜೂನ್ 23: ಕರಾವಳಿ ಕರ್ನಾಟಕ ಭಾಗದ ದಕ್ಷಿಣ ಕನ್ನಡ, ಮಂಗಳೂರು, ಉತ್ತರ ಕನ್ನಡಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂಗಾರು ಮಾರುತಗಳು ಮತ್ತೆ ಚುರುಕಾಗುವ ಮುನ್ಸೂಚನೆ ಇದೆ. ಆದ್ದರಿಂದ ಬೀದರ್, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳೂ ಸಹ ಇಂದೂ ಮಳೆ ಕಾಣಿಸಿಸಕೊಳ್ಳಬಹುದು.
ಚಿಕ್ಕಮಗಳೂರು, ಹಾಸನ, ಕೊಡಗೂ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಈ ಭಾಗದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಮಧ್ಯ ಭಾರತ ಭಾಗದಲ್ಲೂ ಮುಂಗಾರು ಕಾಣಿಸಿಕೊಳ್ಳುತ್ತಿದೆ. ಮಹಾರಾಷ್ಟ್ರ, ಛತ್ತೀಸ್ ಗಢ, ಒಡಿಶಾಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ ಎರಡು ಮೂರು ದಿನಗಳಲ್ಲಿ ದಕ್ಷಿಣ ಗುಜರಾತ್, ಜಾರ್ಖಂಡ್, ಬಿಹಾರ ಮತ್ತು ಮಧ್ಯಪ್ರದೇಶ, ಪಶ್ಚಿಮ ಬಂಗಾಳಗಳಲ್ಲೂ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈರುತ್ಯ ಮುಂಗಾರು ಪ್ರಬಲವಾಗಿದದ್ದು ಸಾಕಷ್ಟು ಮಳೆಯಾಗುತ್ತಿದೆ. ಆದರೆ ರಾಜಧಾನಿ ಬೆಂಗಳೂರಲ್ಲಿ ಮಾತ್ರ ಇಬ್ಬನಿಯೇನೋ ಅನ್ನಿಸುವಷ್ಟು ಸಣ್ಣದಾಗಿ ಜಿಟಿ ಮಳೆಯಾಗುತ್ತಿರುವುದನ್ನು ಬಿಟ್ಟರೆ ಭಾರೀ ಮಳೆ ಬೀಳುತ್ತಿಲ್ಲ.
ಬೆಳಗ್ಗೆ ಸಾಕಷ್ಟು ಬಿಸಿಲು ಸಹ ಕಂಡುಬರುತ್ತಿದೆ. ಸಂಜೆ ಹೊತ್ತಲ್ಲಿ ಮೋಡ ಕವಿದ ವಾತಾವರಣ ಇರುತ್ತದಾದರೂ, ಅಲ್ಲಲ್ಲಿ ನಾಲ್ಕಾರು ಹನಿ ಬಿಟ್ಟರೆ ಜಾಸ್ತಿ ಮಳೆ ಸುರಿಯುತ್ತಿಲ್ಲ.