ದುಬೈನಿಂದ ಬರುವರಿಗೆ ಮಂಕಿಪಾಕ್ಸ್ ತಪಾಸಣೆ ಹೆಚ್ಚಿಸಲು ಭಾರತ ಪತ್ರ
ನವದೆಹಲಿ, ಆಗಸ್ಟ್. 03: ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಯವರು, ದುಬೈನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಹುಸೇನ್ ಅಬ್ದುಲ್ ರಹಮಾನ್ಗೆ ಪತ್ರ ಬರೆದು ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಸ್ಕ್ರೀನಿಂಗ್ ತೀವ್ರಗೊಳಿಸುವಂತೆ ಮನವಿ ಮಾಡಿದ್ದಾರೆ.
ಭಾರತದಲ್ಲಿ ದುಬೈನಿಂದ ಬಂದವರಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಮಂಕಿಪಾಕ್ಸ್ ರೋಗ ಹರಡುವ ಅಪಾಯವನ್ನು ಕಡಿಮೆ ಮಾಡಲು ಭಾರತಕ್ಕೆ ವಿಮಾನಗಳನ್ನು ನಿಯೋಜನೆ ಮಾಡುವಂತೆ ಕೋರಿದ್ದಾರೆ.
ಆಗಸ್ಟ್ 1ರಂದು ಬರೆದ ಪತ್ರದಲ್ಲಿ ಜಂಟಿ ಕಾರ್ಯದರ್ಶಿ ಅವರು, ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಕಡಿಮೆ ಮಾಡಲು ವಿಮಾನವನ್ನು ಹತ್ತಲು ಅನುಮತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿರ್ಗಮನ ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ವಿನಂತಿಸಲಾಗಿದೆ. ಇದು ರೋಗ ಹರಡುವ ಅಪಾಯ ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
ಜಾಗತಿಕ ಸಮುದಾಯವು ಅಂತಾರಾಷ್ಟ್ರೀಯ ಕಾಳಜಿಯೊಂದಿಗೆ ಮತ್ತೊಂದು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯೊಂದಿಗೆ ಹಿಡಿತ ಸಾಧಿಸುತ್ತಿದೆ. ಹಾಗಾಗಿ ಐಎಚ್ಆರ್ನ ಗುರಿಗಳು ನಿರಂತರ ಸಮನ್ವಯವನ್ನು ನಿರ್ವಹಿಸುವುದು ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ರೋಗದ ಮಾಹಿತಿಯ ಹರಡುವಿಕೆಯನ್ನು ತಪ್ಪಿಸಲು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವುದು ಅತ್ಯಗತ್ಯ ಎಂದು ಪತ್ರದಲ್ಲಿ ಹೇಳಲಾಗಿದೆ.
ಇಲ್ಲಿಯವರೆಗೆ ಭಾರತದಲ್ಲಿ ಮಂಕಿಪಾಕ್ಸ್ ಕಾಯಿಲೆಯ ಒಟ್ಟು ಎಂಟು ಪ್ರಕರಣಗಳು ದೃಢಪಟ್ಟಿದೆ. ಈ ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳು ಯುಎಇಯಿಂದ ಭಾರತಕ್ಕೆ ಬಂದ ಪ್ರಯಾಣದ ಇತಿಹಾಸವನ್ನು ಹೊಂದಿವೆ. ಮೂರು ಪ್ರಕರಣಗಳು ಈಗಾಗಲೇ ಭಾರತಕ್ಕೆ ಆಗಮಿಸುವ ಮೊದಲು ಮಂಕಿಪಾಕ್ಸ್ ರೋಗದ ಲಕ್ಷಣಗಳನ್ನು ಹೊಂದಿದ್ದವು ಎಂದು ಜಂಟಿ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂಟರ್ನ್ಯಾಷನಲ್ ಹೆಲ್ತ್ ರೆಗ್ಯುಲೇಷನ್ಸ್ (ಐಎಚ್ಆರ್) 2005 ರ ಆಕ್ಟ್ 18 ರ ಅಡಿಯಲ್ಲಿ, ನಿರ್ಗಮನ ತಪಾಸಣಾ ಕ್ರಮಗಳನ್ನು ಕೈಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಶಿಫಾರಸು ಮಾಡಿದೆ. ಅಗತ್ಯವಿದ್ದರೆ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗೆ (ಪಿಎಚ್ಇಐಸಿ) ಪ್ರತಿಕ್ರಿಯೆಯಾಗಿ ರೋಗಪೀಡಿತ ಪ್ರದೇಶಗಳ ವ್ಯಕ್ತಿಗಳ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಹೇಳಿದರು. ಪ್ರವೇಶ ಸ್ಥಳಗಳಲ್ಲಿ ಸ್ಕ್ರೀನಿಂಗ್ ಕ್ರಮಗಳು ಮತ್ತು ನಿರ್ಬಂಧಗಳ ಕುರಿತು ಡಬ್ಲ್ಯೂಎಚ್ಒ ಶಿಫಾರಸುಗಳ ಬಗ್ಗೆ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ಹತೋಟಿಯಲ್ಲಿಡಲು ಮಹತ್ವದ ಕ್ರಮ
ಇತ್ತೀಚಿಗೆ, ಕೇರಳದಲ್ಲಿ ದುಬೈನಿಂದ ಬಂದಿದ್ದ ಐದು ವ್ಯಕ್ತಿಗಳಲ್ಲಿ ಮಂಕಿಪಾಕ್ಸ್ ರೋಗ ಇರುವುದು ಪತ್ತೆಯಾಗಿದೆ. ಈಗ ಇನ್ನು ಕೆಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರವು ರೋಗವನ್ನು ಹತೋಟಿಯಲ್ಲಿಡಲು ಮಹತ್ವದ ಕ್ರಮಗಳನ್ನು ಕೈಗೊಂಡಿರುವುದರಿಂದ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಹೇಳಿದರು.

ಜಾಗರೂಕವಾಗಿರುವುದು ಇಲ್ಲಿ ಮುಖ್ಯ
ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಡಾ. ವಿ. ಕೆ. ಪಾಲ್ ಮಂಕಿಪಾಕ್ಸ್ ಬಗ್ಗೆ ದೇಶದಲ್ಲಿ ಅನಗತ್ಯ ಭಯ ಬೀಳುವ ಅಗತ್ಯವಿಲ್ಲ. ಆದರೆ ದೇಶ ಮತ್ತು ಸಮಾಜ ಜಾಗರೂಕವಾಗಿರುವುದು ಇಲ್ಲಿ ಮುಖ್ಯವಾಗಿದೆ. ಸದ್ಯಕ್ಕೆ ಭಯಪಡುವ ಅಗತ್ಯವಿಲ್ಲ, ಆದರೆ ಯಾವುದೇ ಲಕ್ಷಣಗಳು ಕಂಡುಬಂದರೆ ಸಕಾಲದಲ್ಲಿ ಮಾಹಿತಿ ನೀಡಬೇಕು ಎಂದು ಅವರು ಹೇಳಿದ್ದಾರೆ.

18,000ಕ್ಕೂ ಹೆಚ್ಚು ಪ್ರಕರಣಗಳು ದೃಢ
ಈಗ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, 78 ದೇಶಗಳಿಂದ 18,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶಗಳು, ಸಮುದಾಯಗಳು ಮತ್ತು ವ್ಯಕ್ತಿಗಳು ಮಂಕಿಪಾಕ್ಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಮಾಹಿತಿ ನೀಡಿದರೆ ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರೋಗದ ಪ್ರಸರಣವನ್ನು ನಿಲ್ಲಿಸಲು ಮತ್ತು ದುರ್ಬಲ ವರ್ಗಗಳನ್ನು ರಕ್ಷಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡರೆ ಮಂಕಿಪಾಕ್ಸ್ ಏಕಾಏಕಿ ನಿಲ್ಲಬಹುದು ಎಂದು ಡಬ್ಲ್ಯೂಎಚ್ಒನ ಮಹಾನಿರ್ದೇಶಕ ಡಾ. ಟೆಡ್ರೊಸ್ ಗುರುವಾರ ಹೇಳಿದರು.

ಸಿಡುಬಿನ ವೈರಸ್ಗಳ ಕುಟುಂಬಕ್ಕೆ ಸೇರಿದ್ದು
ಮಂಕಿಪಾಕ್ಸ್ ಎನ್ನುವುದು ಮಂಕಿಪಾಕ್ಸ್ ವೈರಸ್ನಿಂದ ಉಂಟಾಗುವ ಝೂನೋಟಿಕ್ ಕಾಯಿಲೆಯಾಗಿದೆ. ಇದು ಸಿಡುಬಿಗೆ ಕಾರಣವಾಗುವ ವೈರಸ್ಗಳ ಕುಟುಂಬಕ್ಕೆ ಸೇರಿದೆ. ಈ ರೋಗವು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಂತಹ ಪ್ರದೇಶಗಳಲ್ಲಿ ಸ್ಥಳೀಯವಾಗಿದೆ. ಆದರೆ ಇತ್ತೀಚೆಗೆ ಡಬ್ಲ್ಯೂಎಚ್ಒ ಇದು ಎಲ್ಲ ದೇಶಗಳಿಂದಲೂ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ.












Click it and Unblock the Notifications