ವಾಜಪೇಯಿಗೆ ಭಾರತರತ್ನ ಹುಟ್ಟುಹಬ್ಬದ ಗಿಫ್ಟ್ ?
ನವದೆಹಲಿ, ಡಿ.10: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಲು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸಿದ್ಧತೆ ನಡೆಸಿದೆ. ಡಿ.25ರಂದು ವಾಜಪೇಯಿ ಅವರಿಗೆ ಭಾರತರತ್ನ ನೀಡುವ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆಯಿದೆ. ವಾಜಪೇಯಿ ಅವರ ಹುಟ್ಟುಹಬ್ಬ ದಿನವನ್ನು 'ಉತ್ತಮ ಆಡಳಿತ ದಿನ' ಎಂದು ಮೋದಿ ಘೋಷಿಸಿದ್ದಾರೆ.
ಸಜ್ಜನ ರಾಜಕಾರಣಿ, ಅಜಾತಶತ್ರು ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಬೇಕು ಎಂಬುದು ಮೋದಿ ಅವರ ಬಹು ದಿನಗಳ ಕನಸಾಗಿದೆ. ಈ ಕುರಿತು ವಾಜಪೇಯಿ ಅವರ ಜನ್ಮದಿನದಂದು ಅಧಿಕೃತ ಘೋಷಣೆ ಹೊರ ಬೀಳುವ ಮುನ್ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. 1996ರಲ್ಲಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ 13 ದಿನಗಳ ಅಧಿಕಾರ ನಡೆಸಿತ್ತು. ವಾಜಪೇಯಿ ಅವರು ದೇಶದ 11ನೇ ಪ್ರಧಾನಿಯಾದರು. ನಂತರ 1998 ರಿಂದ 2004ರ ತನಕ ವಾಜಪೇಯಿ ಅವರು ಪೂರ್ಣ ಅಧಿಕಾರ ಅವಧಿ ಕಂಡ ಕಾಂಗ್ರೆಸ್ಸೇತರ ಪ್ರಥಮ ಪ್ರಧಾನಿ ಎನಿಸಿದರು. [ಚುನಾವಣಾ ಸ್ವಾರಸ್ಯ: ವಾಜಪೇಯಿಯನ್ನು ಕಾಡಿದ ಸಂಖ್ಯೆ 13]

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲೂ ವಾಜಪೇಯಿಗೆ ಭಾರತ ರತ್ನ ನೀಡಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಎನ್ ಡಿಎ ಅಧಿಕಾರ ಅವಧಿಯಲ್ಲಿ ಗಾಯಕಿ ಲತಾ ಮಂಗೇಷ್ಕರ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಅಮಾರ್ತ್ಯ ಸೇನ್, ಪಂಡಿತ್ ರವಿಶಂಕರ್, ಗೋಪಿನಾಥ್ ಬೊರ್ಡೊಲಾಯಿ, ಜಯಪ್ರಕಾಶ್ ನಾರಾಯಣ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿತ್ತು.
ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತ ರತ್ನ ಪದಕಗಳನ್ನು ತಯಾರಿಸಿಕೊಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮೋದಿ ಸರ್ಕಾರ ಕೇಳಿಕೊಂಡಿತ್ತು. ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್, ಶಿಕ್ಷಕ ತಜ್ಞ ಮದನ್ ಮೋಹನ್ ಮಾಳವೀಯ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರಿಗೂ ಭಾರತ ರತ್ನ ಪ್ರಶಸ್ತಿ ಮರಣೋತ್ತರವಾಗಿ ಲಭಿಸುವ ಸೂಚನೆ ಸಿಕ್ಕಿತ್ತು. ಅದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. [ವಾಜಪೇಯಿ ಸೇರಿ ನಾಲ್ವರಿಗೆ ಭಾರತರತ್ನ ಪ್ರಶಸ್ತಿ?]
ಯುಪಿಎ 2 ಸರ್ಕಾರ ತನ್ನ ಅವಧಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿಜ್ಞಾನಿ, ಕನ್ನಡಿಗ ಪ್ರೊ.ಸಿ.ಎನ್ ಆರ್ ರಾವ್ ಅವರಿಗೆ ಭಾರರ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications