ಪ್ರಶ್ನಿಸಿದರೆ ಪ್ರಧಾನಿ ಸಿಟ್ಟು, ಬಿಜೆಪಿ ಸಂಸದ ಬಿಟ್ಟುಕೊಟ್ಟ ಗುಟ್ಟು
ನಾಗ್ಪುರ, ಸೆಪ್ಟೆಂಬರ್ 4: ಪ್ರಶ್ನೆ ಮಾಡುವವರ ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಪರೀತ ಕೋಪ ಬರುತ್ತದೆ ಎಂಬ ಮಾತನ್ನು ಸಂಸದರೊಬ್ಬರು ಹೇಳಿದ್ದಾರೆ. ಇದು ಯಾರೋ ವಿರೋಧ ಪಕ್ಷದವರ ಟೀಕೆ ಎಂದು ನೀವಂದುಕೊಂಡರೆ ಅದು ತಪ್ಪು. ಯಾಕೆಂದರೆ ಬಿಜೆಪಿಯ ಸಂಸದರೇ ಇಂಥ ಮಾತನಾಡಿದ್ದಾರೆ.
ಮಹಾರಾಷ್ಟ್ರದ ಬಾಂದ್ರಾ-ಗೊಂಡ್ಯಾದ ಸಂಸದ ನಾನಾ ಪಟೋಲೆ ಮಾಡಿರುವ ಆರೋಪವಿದು. "ಈಚೆಗೆ ಪ್ರಧಾನಿ ಬಿಜೆಪಿ ಸಂಸದರ ಸಭೆ ಕರೆದಿದ್ದರು. ಒಬಿಸಿ ಸಚಿವಾಲಯ ಆರಂಭ ಹಾಗೂ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನೀವೇನು ಮಾಡಿದ್ದೀರಿ ಎಂದು ಪ್ರಧಾನಿಗಳನ್ನು ಕೇಳಿದಾಗ ನನ್ನ ಮೇಲೆ ಅವರು ಆಕ್ರೋಶ ವ್ಯಕ್ತಪಡಿಸಿದರು" ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಆಗಾಗ ಸಂಸದರ ಸಭೆ ಕರೆಯುತ್ತಾರೆ. ಆದರೆ ಅಲ್ಲಿ ಅವರನ್ನು ಯಾರೂ ಪ್ರಶ್ನೆ ಮಾಡಬಾರದು. ಹಾಗೊಂದು ವೇಳೆ ಪ್ರಶ್ನಿಸಿದರೆ ಅವರು ಸಹಿಸುವುದಿಲ್ಲ. ಆದರೆ ಒಬಿಸಿ ಸಚಿವಾಲಯ ಆರಂಭ ಮಾಡುವ ಬಗ್ಗೆ ಹಾಗೂ ಹಸಿರು ಕರದ ಬಗ್ಗೆ ಪ್ರಶ್ನಿಸಿದ ನನ್ನನ್ನು ಬಾಯ್ಮುಚ್ಚು ಎಂದು ಗದರಿದರು ಎಂಬುದಾಗಿ ಸಂಸದ ಪಟೋಲೆ ಹೇಳಿದ್ದಾರೆ.
ಆದರೆ, ಈ ಮಾತನ್ನು ನಿರಾಕರಿಸಿದ ಬಿಜೆಪಿ ನಾಯಕರು, ಮೋದಿಯವರು ಎಲ್ಲರ ಮಾತನ್ನು ಕೇಳಿಸಿಕೊಳ್ಳುತ್ತಾರೆ. ಅಭಿಪ್ರಾಯ ತಿಳಿಸುವುದಕ್ಕೆ ಅವಕಾಶ ನೀಡುತ್ತಾರೆ ಎಂದಿದ್ದಾರೆ.












Click it and Unblock the Notifications