ಮೋದಿ 2.0 ಸರ್ಕಾರಕ್ಕೆ ಶತಕ: ಮಹತ್ವದ ನಿರ್ಧಾರಗಳು, ಮುಂದಿನ ಸವಾಲುಗಳು
ನವದೆಹಲಿ, ಸೆಪ್ಟೆಂಬರ್ 7: ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರ 100 ದಿನಗಳನ್ನು ಪೂರೈಸಿದೆ.
ಚುಆವಣೆಗೂ ಮುನ್ನ ಪ್ರಚಾರ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರ ದಿಢೀರ್ ತ್ರಿವಳಿ ತಲಾಖ್ ನಿಷೇಧ, ಸಂವಿಧಾನದ ವಿಧಿ 370 ರದ್ದತಿ , ಭಯೋತ್ಪಾದನಾ ನಿರ್ಮೂಲನೆ ಸೇರಿ ಹಲವು ವಿಚಾರಗಳಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದೆ.
ಸರ್ಕಾರದ ನೂರು ದಿನಗಳ ಸಾಧನೆಯನ್ನು ಜನರಿಗೆ ತಿಳಿಸುವ ಸಲುವಾಗಿ ಕಿರು ಹೊತ್ತಿಗೆಯನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದೆ.

ಮೋದಿ ಸರ್ಕಾರದ ಮುಂದಿನ ಸವಾಲುಗಳೇನು?
-ಆರ್ಥಿಕತೆಯ ಪುನಶ್ಚೇತನ
-ಚೀನಾ-ಪಾಕಿಸ್ತಾನ ಗಡಿ ತಗಾದೆಗಳಿಗೆ ಪರಿಹಾರೋಪಾಯ
-5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆ
-ಅಯೋಧ್ಯೆ ಶಬರಿಮಲೆ, ಹರಿದ್ವಾರದ ಬಿಕ್ಕಟ್ಟು, ಪರಿಹಾರ
-ನೆನೆಗುದಿಗೆ ಬಿದ್ದ ಹಿಂದಿನ ಯೋಜನೆಗಳ ಮರು ಪರಿಶೀಲನೆ
-ಉಗ್ರ ನಿಗ್ರಹ ಹಾಗೂ ಭಯೋತ್ಪಾದನೆ ತಡೆಗಟ್ಟುವುದು
-ಕೃಷಿ ಬಿಕ್ಕಟ್ಟು ಹಾಗೂ ನಿರುದ್ಯೋಗ ಸಮಸ್ಯೆಗೆ ಪರಿಹಾರ

100ದಿನಗಳಲ್ಲಿ ಸರ್ಕಾರ ಕಳೆದುಕೊಂಡ ಪಕ್ಷ ನಿಷ್ಠರು
ನರೇಂದ್ರ ಮೋದಿ ಸರ್ಕಾರ ಯಶಸ್ವಿ ವಿದೇಶಾಂಗ ಸಚಿವೆ ಎಂಬ ಖ್ಯಾತಿ ಗಳಿಸಿದ್ದ ಸುಷ್ಮಾ ಸ್ವರಾಜ್ ಮೋದಿಯವರಿಗೆ ಆತ್ಮೀಯರಾಗಿದ್ದರು.ಅನಾರೋಗ್ಯದ ಕಾರಣ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ದಿಸದ ಸುಷ್ಮಾ ಸ್ವರಾಜ್ ಆಗಸ್ಟ್ 6ರಂದು ಇಹಲೋಕ ತ್ಯಜಿಸಿದ್ದರು.
ನರೇಂದ್ರ ಮೋದಿಯವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಅರುಣ್ ಜೇಟ್ಲಿ ಮೊದಲ ಅವಧಿಯಲ್ಲಿ ಹಣಕಾಸು ಇಲಾಖೆಯ ಜವಾಬ್ದಾರಿ ನಿರ್ವಹಿಸಿದ್ದರು. ಅನಾರೋಗ್ಯದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದ ಅವರು ಆಗಸ್ಟ್ 24 ರಂದು ವಿಧಿವಶರಾದರು.

370ನೇ ವಿಧಿ ಹಾಗೂ 35-ಎ ರದ್ದು
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯನ್ನು ನಿಯೋಜಿಸಿ, ಅಮರನಾಥ ಯಾತ್ರೆಯನ್ನು ರದ್ದುಗೊಳಿಸುವ ಮೂಲಕ ದೊಡ್ಡದೊಂದು ಸುದ್ದಿಗೆ ಮೋದಿ ಸರ್ಕಾರ ಮುನ್ಸೂಚನೆ ನೀಡಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರ ಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಹಾಗೂ 35-ಎ ವಿಧಿಯನ್ನು ಆಗಸ್ಟ್ ಮೊದಲ ವಾರದಲ್ಲಿ ರದ್ದುಗೊಳಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿತ್ತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಯಿತು.

ದಿಢೀರ್ ತ್ರಿವಳಿ ತಲಾಖ್ ನಿಷೇಧ
ಮೊದಲ ಅವಧಿಯಲ್ಲಿ ಸರ್ಕಾರದ ರಚನೆಗೆ ಮುಂಚಿನಿಂದಲೂ ಪ್ರಸ್ತಾಪಿಸುತ್ತಿದ್ದ ನರೇಂದ್ರ ಮೋದಿ ಕೊನೆಗೂ ಯಶಸ್ಸು ಕಂಡಿದ್ದಾರೆ. ದಿಢೀರ್ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಪಾಲಿಗೆ ಬಹುದೊಡ್ಡ ಗೆಲುವನ್ನು ದೊರಕಿಸಿಕೊಟ್ಟಿತ್ತು.

ಭಯೋತ್ಪಾದನಾ ವಿರೋಧಿ ಕಾನೂನು
ಮೊದಲಿನಿಂದಲೂ ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದ್ದ ಸರ್ಕಾರ, ಭಯೋತ್ಪಾದಕ ಚಟುವಟಿಕೆಗಳನ್ನು ಶೂನ್ಯದಷ್ಟು ಸಹಿಸುವುದಿಲ್ಲ ಎಂದು ಪ್ರತಿಪಾದಿಸುತ್ತಲೇ ಬಂದಿತ್ತು. ಈ ಪ್ರತಿಪಾದನೆಗೆ ಇಂಬು ನೀಡುವಂತೆ ಸಂಸತ್ತಿನಲ್ಲಿ ಯುಎಪಿಎ ಕಾಯ್ದೆಗೆ ತಿದ್ದುಪಡಿ ತಂದಿತು. ಈ ಪ್ರಕಾರ ಒಬ್ಬ ವ್ಯಕ್ತಿ ಹಾಗೂ ಸಂಘಟನೆಗೆ ಭಯೋತ್ಪಾದನೆಯ ಹಣೆಪಟ್ಟಿ ಕಟ್ಟಲು ಸಹಕಾರಿಯಾಯಿತು.

100 ದಿನಗಳಲ್ಲಿ ಮೋದಿ ಭೇಟಿ ಕೊಟ್ಟ ದೇಶಗಳಿವು
ದ್ವಿಕ್ಷೀಯ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಎರಡನೇ ಅವಧಿಯಲ್ಲಿ ನರೇಂದ್ರ ಮೋದಿ 7 ದೇಶಗಳಿಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್ , ಶ್ರೀಲಂಕಾ, ಭೂತಾನ್, ಯುಎಇ, ಬಹ್ರೈನ್, ಫ್ರಾನ್ಸ್ ಮತ್ತು ರಷ್ಯಾಕ್ಕೆ ಭೇಟಿ ನೀಡಿದ್ದರು.

ಸಾರ್ವಜನಿಕ ವಲಯಗಳ ಬ್ಯಾಂಕ್ಗಳ ವಿಲೀನ
ಆರ್ಥಿಕತೆ ಹಿನ್ನಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ವಿಲೀನ ಮಾಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಪ್ರಕಟಿಸಿದೆ. ಇದರಿಂದ ದೇಶದಲ್ಲಿ ಕೇವಲ 10 ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಇದ್ದಂತಾಗಿದೆ.

ಮೋದಿ 2.0 ಸರ್ಕಾರದ ವೈಫಲ್ಯಗಳು
ಉದ್ಯೋಗ ಸೃಷ್ಟಿ: 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ ಅಧಿಕಾರಕ್ಕೆ ಬಂಧಿದ್ದ ಸರ್ಕಾರ ನಿರೀಕ್ಷಿಸಿದಷ್ಟು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಸರ್ಕಾರ ಇದರೆಡೆಗೆ ಗಮನ ಹರಿಸಬೇಕಿದೆ.
ಆರ್ಥಿಕ ಅಸ್ಥಿರತೆ: 2017ರಲ್ಲಿ ಶೇ.7.2ರಷ್ಟಿದ್ದ ಜಿಡಿಪಿ ಈ ಬಾರಿಯ ಹಣಕಾಸು ನೀತಿಗಳಿಂದ ಆರ್ಥಿಕತೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿಫಲವಾಗಿದೆ.
ಜಿಎಸ್ಟಿ ಅನುದಾನ: ದೇಶದೆಲ್ಲೆಡೆ ಏಕರೂಪದ ತೆರಿಗೆ ವ್ಯವಸ್ಥೆ ಎಂಬ ಉದ್ದೇಶದೊಂದಿಗೆ ಜಿಎಸ್ಟಿಯನ್ನು ಜಾರಿಗೊಳಿಸಲಾಗಿತ್ತು. ಆದರೆ ಜಿಎಸ್ಟಿಯಲ್ಲಿನ ತೆರಿಗೆ ಸ್ಥರಗಳ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಈ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಿದೆ.












Click it and Unblock the Notifications