ಬಜೆಟ್ ಬಗ್ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
ಮಂಗಳವಾರ ಮಂಡಿಸಲಾದ ಕೇಂದ್ರ ವಿತ್ತೀಯ ಬಗ್ಗೆ ಬೆಂಗಳೂರಿನ ಜನರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ತೆರಿಗೆಯಲ್ಲಿ ಕಡಿತಗೊಳಿಸಿರುವುದನ್ನು ಸ್ವಾಗತಿಸಿದರೆ, ಮತ್ತೆ ಕೆಲವರು ಶ್ರಮಿಕ ವರ್ಗ ನಿರ್ಲಕ್ಷ್ಯಗೊಂಡಿದೆ ಎಂದಿದ್ದಾರೆ.
ಬೆಂಗಳೂರು, ಫೆಬ್ರವರಿ 1: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಮಂಗಳವಾರ ಮಂಡಿಸಿದ 2017-18ರ ಸಾಲಿನ ವಿತ್ತೀಯ ಹಾಗೂ ರೈಲ್ವೇ ಬಜೆಟ್ ಬಗ್ಗೆ ಬೆಂಗಳೂರಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಜೆಟ್ ಬಗ್ಗೆ ಒನ್ ಇಂಡಿಯಾ ಕನ್ನಡ ನಡೆಸಿದ ಸಂಗ್ರಹಿಸಿದ ಜನಾಭಿಪ್ರಾಯದ ವೇಳೆ ಕೆಲವರು ಬಜೆಟ್ ಉತ್ತಮವಾಗಿದೆ ಎಂದಿದ್ದರೆ, ಮತ್ತೆ ಕೆಲವರು ಬಜೆಟ್ ಭಾರೀ ಕಳಪೆಯಾಗಿದ್ದು, ಜನ ಸಾಮಾನ್ಯರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ.[ಬಜೆಟ್ 2017: 'ಡಿಜಿಟಲ್ ವ್ಯವಹಾರ'ವೇ ಮೋದಿ ಸರಕಾರದ ಮಂತ್ರ]

ಮಧ್ಯಮ ವರ್ಗಕ್ಕೆ ಸಂತಸ
ಎರಡೂವರೆ ಲಕ್ಷದಿಂದ ಐದು ಲಕ್ಷದೊಳಗಿನ ವಾರ್ಷಿಕ ಆದಾಯ ಇರುವವರ ಮೇಲಿದ್ದ ತೆರಿಗೆ ಭಾರವನ್ನು ಅರ್ಧದಷ್ಟು ಇಳಿಸಿರುವುದು ಖುಷಿ ಕೊಟ್ಟಿದೆ. ಮಧ್ಯಮ ವರ್ಗದವರಿಗೆ ಇದರಿಂದ ಅನುಕೂಲವಾಗಲಿದೆ. ಕಡಿಮೆ ಸಂಬಳ ಪಡೆಯುುತ್ತಿದ್ದವರಿಗೆ ಕೊಂಚ ನಿರಾಳ.
- ನಾಗರಾಜ್, ಉದ್ಯೋಗಿ

ಮಧ್ಯಮ, ದೊಡ್ಡ ಕಾರ್ಪೊರೇಟರ್ ಗಳಿಗಷ್ಟೇ ಲಾಭ
ವಾರ್ಷಿಕವಾಗಿ 25ರಿಂದ 50 ಕೋಟಿ ರು. ವಹಿವಾಟು ನಡೆಸುವ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ಇಳಿಸಿದ್ದಾರೆ. ಅದು ದೊಡ್ಡ ಉದ್ಯಮಿಗಳಿಗಷ್ಟೇ ನೆರವಾಗುತ್ತದೆ. ಚಿಕ್ಕಪುಟ್ಟ ಉದ್ಯಮಗಳಿಗೆ ಯಾವುದೇ ನೆರವು ಸಿಗುವುದಿಲ್ಲ.
- ಜಯಲಕ್ಷ್ಮೀ ಅನಂತ್, ಉದ್ದಿಮೆದಾರರು

ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳಲಿ
ಜೇಟ್ಲಿಯವರು ಮಂಡಿಸಿರುವ ಬಜೆಟ್ ನಲ್ಲಿ ಮಧ್ಯಮ ವರ್ಗ, ರೈತರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿಗೂ ಒತ್ತು ನೀಡಿರುವುದು ಸ್ವಾಗತಾರ್ಹ. ಟೆಲಿ ಮೆಡಿಸಿನ್ ಪರಿಕಲ್ಪನೆ, ಎಲ್ಲಾ ಹಳ್ಳಿಗಳಿಗೂ ಸಮರ್ಪಕ ವಿದ್ಯುತ್ ನಂಥ ಯೋಜನೆಗಳು ಸಮರ್ಥವಾಗಿ ಜಾರಿಗೊಳ್ಳಬೇಕು.
- ಮಂಜುನಾಥ್, ಉದ್ಯೋಗಿ

ಕೇಂದ್ರದ ಈ ಬೇದಭಾವ ಸಲ್ಲ
ಎರಡೂವರೆ ಲಕ್ಷದಿಂದ ಐದು ಲಕ್ಷದವರೆಗೆ ವಾರ್ಷಿಕ ಆದಾಯವುಳ್ಳವರಿಗೆ ತೆರಿಗೆ ಕಡಿತ ಮಾಡಿದಂತೆ ಐದು, ಹತ್ತು ಲಕ್ಷಕ್ಕಿಂತ ಮೇಲ್ಪಟ್ಟವರಿಗೂ ಕೊಂಚ ತೆರಿಗೆ ಭಾರ ಇಳಿಸಿದ್ದರೆ ಚೆನ್ನಾಗಿರುತ್ತಿತ್ತು.
- ಅಲೋಕ್, ಉದ್ದಿಮೆದಾರರು

ರೈಲ್ವೇ ಯೋಜನೆಗೆ ಅನುಮತಿ ಬೇಕಿತ್ತು
ಈ ಬಾರಿಯ ಬಜೆಟ್ ನ ಮೇಲೆ ಭಾರೀ ನಿರೀಕ್ಷೆಯಿತ್ತು. ಆ ಎಲ್ಲಾ ನಿರೀಕ್ಷೆಗಳನ್ನು ಮುಟ್ಟಿಲ್ಲವಾದರೂ, ಕಡಿಮೆ ವೇತನದಾರರ ಮೇಲಿದ್ದ ತೆರಿಗೆ ಭಾರವನ್ನು ಇಳಿಸಿರುವುದು ನೆಮ್ಮದಿ ತಂದಿದೆ. ಆದರೆ, ಕರ್ನಾಟಕದ ಕೆಲವಾರು ರೈಲ್ವೇ ಯೋಜನೆಗಳಿಗೆ ಅನುಮತಿ ನೀಡಬೇಕಿತ್ತು.
- ಸುನಿಲ್, ಉದ್ಯೋಗಿ

ಕಣ್ಣೊರೆಸುವ ತಂತ್ರ
ಬಜೆಟ್ ನಲ್ಲಿ ವಿಶೇಷವೇನಿಲ್ಲ. ಇದೊಂದು ಕಣ್ಣೊರೆಸುವ ತಂತ್ರವಷ್ಟೇ. 2.5 ಲಕ್ಷದಿಂದ 5 ಲಕ್ಷದೊಳಗಿನವರಿಗೆ ತೆರಿಗೆ ಭಾರ ಇಳಿದಿರುವುದು ಸರಿ ಎನಿಸಿದರೂ ನಮ್ಮ ದೇಶದಲ್ಲಿ ಶೇ. 40ರಷ್ಟಿರುವ ಶ್ರಮಿಕ ವರ್ಗಕ್ಕೆ ಏನೂ ಅನುಕೂಲ ಕಲ್ಪಿಸಿಲ್ಲ. ಇದು ಬೇಸರ ತಂದಿದೆ.
- ಸೋಮಶೇಖರ್, ನಿವೃತ್ತ ಸರ್ಕಾರಿ ನೌಕರರು

ಆದರೆ, ನಿರೀಕ್ಷೆ ಮುಟ್ಟಿಲ್ಲ
ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ನೋಟ್ ಬ್ಯಾನ್ ಆದ ನಂತರದ ಬಜೆಟ್ ಆಗಿದ್ದರಿಂದ ದೊಡ್ಡ ನಿರೀಕ್ಷೆಗಳಿದ್ದವು. ಅವನ್ನು ಮುಟ್ಟುವಲ್ಲಿ ಕೇಂದ್ರ ಎಡವಿದೆ.
- ಗಿರೀಶ್, ಮಾರ್ಕೆಟಿಂಗ್ ಉದ್ಯೋಗಿ












Click it and Unblock the Notifications